ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಹುಬ್ಬಳ್ಳಿಯ ಸರಸ್ವತಿ ಕೋ-ಆಪರೇಟಿವ್ ಸೊಸೈಟಿಯಿಂದ ಸೇವಾ ನ್ಯೂನ್ಯತೆ ಹಿನ್ನೆಲೆ ಗ್ರಾಹಕನಿಗೆ ಪರಿಹಾರ ಧನ ನೀಡುವಂತೆ ಆದೇಶಿಸಿದ ಗ್ರಾಹಕರ ಆಯೋಗ.
ಘಟನೆ ಹಿನ್ನೆಲೆ
ಹುಬ್ಬಳ್ಳಿ ವಿಕಾಸ ನಗರದ ವಾಸಿ ಶಾರದಾ ಪೈ ಅವರು ಹುಬ್ಬಳ್ಳಿಯ ಕ್ವಾಯಿನ್ ರಸ್ತೆಯ ಶಾರದಾ ಕಾಂಪ್ಲೆಕ್ಸ್ನಲ್ಲಿರುವ ಸರಸ್ವತಿ ಕೋ-ಆಪ್ ರೇಟಿವ್ ಸೋಸೈಟಿಯಲ್ಲಿ 2017 ರಿಂದ 2020ರ ಅವಧಿಯಲ್ಲಿ 13,29,544 ಮೊತ್ತದ ಹಣವನ್ನು ತಮ್ಮ ಮಗಳ ಮದುವೆಗಾಗಿ ಒಂದು ವರ್ಷದ ಅವಧಿಗೆ 9 ವಿವಿಧ ಮೊತ್ತದ ಖಾಯಂ ಟೇವಣಿ ಇಟ್ಟಿದ್ದರು. ಆ ಠೇವಣೆ ಅವಧಿ 2018 ರಿಂದ 2021ರ ಅವಧಿಯಲ್ಲಿ ಮುಕ್ತಾಯವಾಗಿದ್ದರೂ ತನ್ನ ಠೇವಣಿ ಹಣವನ್ನು ಸೊಸೈಟಿಯವರು ಕೊಡುತ್ತಿಲ್ಲದ ಕಾರಣ ತನ್ನ ಮಗಳ ಮದುವೆಗೆ ತೊಂದರೆಯಾಗಿದ್ದರಿಂದ ಸದರಿ ಸೊಸೈಟಿಯವರ ವರ್ತನೆ ಸೇವಾ ನ್ಯೂನ್ಯತೆ ಆಗಿದೆಯೆಂದು ಆ ಸೂಸೈಟಿಯವರ ಮೇಲೆ ಕ್ರಮ ಕೈಗೊಂಡು ತನ್ನ ಠೇವಣಿ ಹಣ ಮರುಪಾವತಿಸುವಂತೆ ಮತ್ತು ತನಗಾದ ತೊಂದರೆ ಮತ್ತು ಮಾನಸಿಕ ಹಿಂಸೆಗೆ ಈ ಪ್ರಕರಣದ ಖರ್ಚು ಸಮೇತ ಪರಿಹಾರ ಕೊಡಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸೊಸೈಟಿಯವರು ಹಾಜರಾಗಿ ಕೋವಿಡ್-19ರಿಂದ ತಮ್ಮ ವ್ಯವಹಾರ ನಿಂತು ಲುಕ್ಸಾನು ಆಗಿದೆ ಹಾಗೂ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಪರಿಹಾರ ನೀಡಲು ಇದು ಯೋಗ್ಯವಾದ ಪ್ರಕರಣ ಅಲ್ಲ ಅಂತಾ ಆಕ್ಷೇಪಣೆ ಸಲ್ಲಿಸಿದ್ದರು.
ದೂರು ಮತ್ತು ಸೊಸೈಟಿಯ ಆಕ್ಷೇಪಣೆಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಅವರು ಸಹಕಾರ ಸಂಘದವರ ಆಕ್ಷೇಪಣೆಯನ್ನು ತಳ್ಳಿಹಾಕಿ ಠೇವಣಿ ಅವಧಿ ಮುಗಿದರೂ ದೂರುದಾರರ ಠೇವಣಿ ಹಣವನ್ನು ಹಿಂದಿರುಗಿಸದೇ ಇರುವುದು ಸೇವಾ ನ್ಯೂನ್ಯತೆ ಆಗುಯಾಗುತ್ತದೆ ಎಂದು ತೀರ್ಪು ನೀಡಿದ್ದು, ಠೇವಣಿ ಇಟ್ಟ ದಿನಾಂಕಗಳಿಂದ ಶೇ.೮ರಂತೆ ಬಡ್ಡಿ ಲೆಕ್ಕ ಹಾಕಿ ಪೂರ್ತಿ ಠೇವಣಿ ಹಣ 13,29,544/ ದೂರುದಾರರಿಗೆ ನೀಡಿದ ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಆಯೋಗ ಆದೇಶಿಸಿದೆ.
ಜೊತೆಗೆ ಸೇವಾ ನ್ಯೂನ್ಯತೆಯಿಂದ ಅವರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.50ಸಾವಿರ ಪರಿಹಾರ ಹಾಗೂ ರೂ.10ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡಲು ಆದೇಶಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















