ಕಲ್ಪ ಮೀಡಿಯಾ ಹೌಸ್ | ಧಾರವಾಡ |
ದೇಶದ ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಗೆ ರಾಷ್ಟ್ರಪತಿಗಳು ಆಗಮಿಸುವ ಸಂಭ್ರಮ ಒಂದೆಡೆಯಾದರೆ ಇದೇ ಸಂಸ್ಥೆಯಿಂದ ರಾಷ್ಟ್ರಪತಿಗಳ ಮೂಲ ರಾಜ್ಯವಾದ ಓರಿಸ್ಸಾದ ಬುಡಕಟ್ಟು ನಿವಾಸಿಗಳಿಗಾಗಿ ಬಹುಭಾಷಾ ಧ್ವನಿಅನುವಾದ ಮಾಡುವ ರೋಬೋಟ್ ಯಂತ್ರವನ್ನು ಸಿದ್ಧಪಡಿಸುತ್ತಿರುವುದು ನಾಡಿನ ಹೆಮ್ಮೆಯ ಸಂಗತಿಯಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು President Droupadi Murmu ಅವರು ಸೆಪ್ಟೆಂಬರ್ 26 ರಂದು ಮಧ್ಯಾಹ್ನ ಐಐಐಟಿ ಸಂಸ್ಥೆಯನ್ನು ನಾಡಿಗೆ ಸಮರ್ಪಿಸಲಿದ್ದಾರೆ. ಈ ಶುಭ ಸಂದರ್ಭದಲ್ಲಿಯೇ ಈ ಸಂಸ್ಥೆಯು ಉನ್ನತ ಮಟ್ಟದಲ್ಲಿ ತಯಾರಿಸುತ್ತಿರುವ ಹುಮುನೊಯ್ಡ ರೋಬೋಟ್ ಯಂತ್ರದ ಮಾಹಿತಿಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲಿದೆ.
ಅತ್ಯಾಧುನಿಕ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಬುಡಕಟ್ಟು ಭಾಷೆಗಳಿಂದ ಇತರ ಭಾಷೆಗಳಿಗೆ ಧ್ವನಿಭಾಷಾನುವಾದದ ಉಪಕರಣವನ್ನು ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆಯೆಂದು ಈ ಸಂಸ್ಥೆಯ ಇಸಿಇ ವಿಭಾಗದ ಪ್ರಾಧ್ಯಾಪಕರು ಹಾಗೂ ಈ ಯೋಜನೆಯ ಪ್ರಧಾನ ಪರೀಕ್ಷಕರಾದ ಡಾ.ಕೆ.ಟಿ.ದೀಪಕ ತಿಳಿಸಿದ್ದಾರೆ.
ಪ್ರಸ್ತುತ ಈ ರೋಬೋಟ್ ತಂತ್ರಜ್ಞಾನದಲ್ಲಿ ಬುಡಕಟ್ಟು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಿರುವ ಮಾಹಿತಿಯ ಬುಡಕಟ್ಟಿನ ಭಾಷೆಯಲ್ಲಿ ದೊರೆಯಲಿದೆ. ಈ ಯೋಜನೆಯಲ್ಲಿ ಓರಿಸ್ಸಾದ ಕುಯಿ ಮತ್ತು ಮುಂಡಾರಿ ಭಾಷೆಗಳನ್ನು ಹಾಗೂ ಕರ್ನಾಟಕದ ಲಂಬಾಣಿ ಹಾಗೂ ಸೋಲಿಗ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಇಂಗ್ಲೀಷ್ ಭಾಷೆಯಿಂದ ಹೇಳಲ್ಪಟ್ಟ ಬುಡಕಟ್ಟಿನ ಭಾಷೆಗೂ ಹಾಗೂ ಬುಡಕಟ್ಟು ಭಾಷೆಯಿಂದ ಇಂಗ್ಲೀಷ್ ಭಾಷೆಗೂ ಸ್ಪಷ್ಟವಾಗಿ ಅನುವಾದ ಮಾಡಬಹುದಾದಂತಹ ತಂತ್ರಲಿಪಿಯನ್ನು ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ ಲಂಬಾಣಿ, ಸೋಲಿಗ ಮತ್ತು ಕುಯಿಗೆ ಪಠ್ಯದಿಂದ ಪಠ್ಯಕ್ಕೆ ಮಾತಿನ ಸಂಶ್ಲೇಷಣೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ದೀಪಕ್ ತಿಳಿಸಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಲಿಪಿಯಲ್ಲಿನ ಭಾಷೆ ಸಾಕಾಷ್ಟು ಜ್ಞಾನವಿರುವ ಈ ಬುಡಕಟ್ಟು ಜನಾಂಗದಲ್ಲಿ ಈ ತಂತ್ರಜ್ಞಾನ ಉಪಯೋಗವಾದರೆ ಜೀವವೈವಿಧ್ಯತೆ, ಪ್ರಾಣಿಗಳ ಜ್ಞಾನ, ಸಂಗೀತ, ನೃತ್ಯ, ಕಲೆ, ಪರಂಪರೆ, ಸಂಸ್ಕೃತಿ ಡಿಜಿಟಲ್ ರೂಪದಲ್ಲಿ ಹಿಡಿದಿಟ್ಟುಕೊಂಡು ಹೊರ ಜಗತ್ತಿಗೆ ಗೊತ್ತಾಗಲಿದೆ. ಸರ್ಕಾರಿ ಯೋಜನೆಗಳ ಬಗ್ಗೆ ಅರಿವು, ಸದುಪಯೋಗಪಡಿಸಿಕೊಳ್ಳುವ ಬಗ್ಗೆಯೂ ಇದರಿಂದ ತಿಳಿದುಕೊಳ್ಳಬಹುದಾಗಿದೆ ಎಂದು ಡಾ.ಕೆ.ಟಿ.ದೀಪಕ್ ತಿಳಿಸಿದರು.
Also read: ಅ.30ರಂದು ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ: ಶಾಸಕ ಈಶ್ವರಪ್ಪ
ಧಾರವಾಡದ ಹೈದ್ರಾಬಾದ್ ಹಾಗೂ ಭೂವನೇಶ್ವರ ಐಐಟಿ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಡಾ.ಪ್ರಕಾಶ ಪವಾರ ಹಾಗೂ ಡಾ.ಸಿಬಾಶಂಕರಪಾಡಿ ತೊಡಗಿಸಿಕೊಂಡಿದ್ದಾರೆ. ನವದೆಹಲಿಯ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಥಮಿಕ ಹಂತವಾಗಿ 44.53 ಲಕ್ಷ ಅನುದಾನವನ್ನು ನೀಡಿದೆ.
ಸ್ವಯಂಚಾಲಿತ ಮಾನವರೂಪಿ ರೋಬೋಟ್: ವಯಸ್ಸಾಮ,ದ ಹಿರಿಯರ ಸೇವೆಗೆ ಅನುಕೂಲವಾಗುವ ದೃಷ್ಟಿಯಿಂದ ಸ್ವಯಂಚಾಲಿತ ಮಾನವರೂಪಿ ರೋಬೋಟ್ನ್ನು ಸಹ ಐಐಐಟಿ ಧಾರವಾಡದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಪ್ರಧಾನ ಪರೀಕ್ಷಕ ಡಾ.ಕೆ.ಟಿ.ದೀಪಕ್ ಅವರು ತಿಳಿಸಿದ್ದಾರೆ.
ಪ್ರಸ್ತುತ ಸಂಶೊಧನಾ ಯೋಜನೆಯು ಭಾರತದ ವಾತಾವರಣಕ್ಕೆ ಒಗ್ಗುವಂತಹ, ವಯಸ್ಸಾದವರ ಆರೈಕೆಗಾಗಿ ಮಾನವರೂಪಿ ರೋಬೋಟನ್ನು ತಯಾರಿಸುವುದಾಗಿದೆ. ಅದಲ್ಲದೆ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಮಾರ್ಪಾಡು ಮಾಡುವುದರಿಂದ ಇತರ ಉಪಯೋಗಗಳಿಗೂ ಬಳಸಬಹುದಾಗಿದೆ. ನಿಯೋಜಿಸಿದ ರೋಬೋಟ್ ನಿಯಮಿತ ಕೆಲಸಗಳನ್ನು ಮಾಡುವ ಸಾಮಥ್ರ್ಯ ಹೊಂದಿರುತ್ತದೆ. ಅಲ್ಲದೆ ಮಾನಸಿಕ ಸೌಖ್ಯಕ್ಕಾಗಿ ಬಹುವಿಧಗಳಿಂದ ಸಂವಹಿಸುವ ಶಕ್ತಿಯನ್ನು ಹೊಂದಿರುತ್ತದೆ. ಇಂತಹ ರೋಬೋಟ್ ಅಲ್ಪ ಸಮಯದಲ್ಲಿ ತಯಾರಿಸುವುದು ಕಷ್ಟಸಂಗತಿ ಎಂದು ಡಾ.ಕೆ.ಟಿ.ದೀಪಕ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ತಿಹಾನ್ ಐಐಟಿ ಏಜೆನ್ಸಿ ಮೂಲಕ ರೂ.70 ಲಕ್ಷಗಳ ಅನುದಾನದದಲ್ಲಿ ಸ್ವಯಂಚಾಲಿತ ಮಾನವರೂಪಿ ರೋಬೋಟ್ ತಯಾರಿಸಲಾಗುತ್ತಿದೆ. ಈ ಸಂಶೋಧನೆಯಲ್ಲಿ ಸಹಪರೀಕ್ಷಕರಾದ ಪ್ರೊ.ಕವಿ ಮಹೇಶ್, ಡಾ.ರಾಜೇಂದ್ರ ಹೆಗಡಿ, ಡಾ.ಪವನ್ ಕುಮಾರ್ ಸಿ, ಡಾ.ರಮೇಶ ಆತೆ, ಡಾ.ಚಿನ್ಮಯಾನಂದ ಎ. ತೊಡಗಿಸಿಕೊಂಡಿದ್ದಾರೆ.
ಸಂಸ್ಥೆಗೆ ನಿನ್ನೆ ಭೇಟಿ ನೀಡಿದ ವಾರ್ತಾ ಇಲಾಖೆಯ ಜಿಲ್ಲಾ ವಾರ್ತಾಧಿಕಾರಿ ಮಂಜುನಾತ ಸುಳ್ಳೊಳ್ಳಿ ಹಾಗೂ ವಾರ್ತಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಡೊಳ್ಳಿನ ಅವರಿಗೆ ಸದರಿ ಸಂಶೋಧನಾ ವಿಷಯಗಳ ಬಗ್ಗೆ ಡಾ.ಕೆ.ಟಿ.ದೀಪಕ್ ಸವಿಸ್ತಾರವಾಗಿ ವಿವರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post