ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಧಾರವಾಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ರಾಜಕೀಯ ಪ್ರೇರಿತವಾಗಿ ತೆಗೆದುಹಾಕಲಾಗುತ್ತಿದೆ ಎಂಬ ಉಹಾಪೋಹಗಳನ್ನು ಮಾದ್ಯಮದಲ್ಲಿ ಭಿತ್ತರಿಸಲಾಗಿದೆ. ಹಾಗೂ ದೆಹಲಿ ಮೂಲದ ಎ.ಎಸ್.ಆರ್ ಕಂಪನಿಯು ಮತದಾರರ ಗೌಪ್ಯ ಮಾಹಿತಿ ಸಂಗ್ರಹಿಸುತ್ತಿದ್ದು, ಇದರಿಂದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗುತ್ತಿದೆ ಅಂತಾ ಆಪಾದಿಸಲಾಗಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ DC Gurudutta Hegade ಅವರು ತಿಳಿಸಿದರು.
ಈ ಕುರಿತು ಇಂದು ಪ್ರಕಟಣೆ ನೀಡಿರುವ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆಯು ನಿರಂತರ ಪ್ರಕ್ರಿಯೆಯಾಗಿದ್ದು, ಅರ್ಹ ಮತದಾರರ ಹೆಸರು ಸೇರ್ಪಡೆ ಮಾಡುವುದು ಮತ್ತು ಮರಣ ಹೊಂದಿದವರ, ಒಂದಕ್ಕಿಂತ ಹೆಚ್ಚುಬಾರಿ ಡುಬ್ಲಿಕೇಟ್ ಆದ ಎಂಟ್ರಿಗಳನ್ನು ಹಾಗೂ ಖಾಯಂ ಆಗಿ ಸ್ಥಳಾಂತರಗೊಂಡವರ ಹೆಸರುಗಳನ್ನು ನಿರಂತರವಾಗಿ ನಿಯಮಾನುಸಾರ ತೆಗೆದು ಹಾಕುವ ಕಾರ್ಯ ಮಾಡಲಾಗತ್ತಿದೆ.
ಈ ಕುರಿತು ಕಾಲ ಕಾಲಕ್ಕೆ ರಾಜಕೀಯ ಪಕ್ಷದವರೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ. ಮತ್ತು ಅವರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಅಪಲೋಡ್ ಮಾಡಲಾಗುತ್ತಿದೆ. ಅಲ್ಲದೇ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ (ERO/AERO) ಗಳ ಕಛೇರಿಯ ಸೂಚನಾ ಪಲಕದಲ್ಲಿ ಈ ಎಲ್ಲ ಮಾಹಿತಿಯನ್ನು ಪ್ರಚುರ ಪಡಿಸಲಾಗುತ್ತಿದೆ.
ದೆಹಲಿ ಮೂಲದ ಎ.ಎಸ್.ಆರ್ ಕಂಪನಿಗೆ ಸಮೀಕ್ಷೆ ನಡೆಸಲು ಜಿಲ್ಲಾಡಳಿತದಿಂದ ಯಾವುದೇ ಅನುಮತಿ ನೀಡಿರುವುದಿಲ್ಲ. ಅಲ್ಲದೇ ನಿಯಮಬಾಹಿರವಾಗಿ ಜಿಲ್ಲಾಡಳಿತದ ಅನುಮತಿಯಿಲ್ಲದೆ ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಸಮೀಕ್ಷೆಗಳನ್ನು ನಡೆಸುತ್ತಿರುವುದು ಕಂಡು ಬಂದಲ್ಲಿ, ಸೂಕ್ತಕ್ರಮ ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಈ ಕಛೇರಿಯಿಂದ ಈಗಾಗಲೇ ನಿರ್ದೇಶಿಸಲಾಗಿದೆ. ಎ.ಎಸ್.ಆರ್ ಕಂಪನಿಗೂ ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿರುವದಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷೀಪ್ತ ಪರಿಷ್ಕರಣೆಯ ವೇಳಾಪಟ್ಟಿಯ ಅನುಸಾರ ನವೆಂಬರ್ 09, 2022 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತ್ತು ನವೆಂಬರ್ 09, 2022 ರಿಂದ ಡಿಸೆಂಬರ್ 08, 2022ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಮತ್ತು ತೆಗೆದು ಹಾಕಲು ತಕರಾರು ಸಲ್ಲಿಸಲು ಅವಕಾಶವಿರುತ್ತದೆ.
Also read: ಗಮನಿಸಿ: ಡಿ.4ರಂದು ಪುರದಾಳು, ಶ್ರೀರಾಂಪುರ ಸೇರಿ ಹಲವು ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಸಾರ್ವಜನಿಕರು ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ (VHA App) ಬಳಸಿ, www.nvsp.in ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ https://ceo.karnataka.gov.in ಮೂಲಕ ವೋಟರ್ ಐಡಿ ನಮೂದಿಸಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಹೆಲ್ಪ್ಲೈನ್ ನಂ. 1950 ಕ್ಕೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯಬಹುದಾಗಿದೆ. ಒಂದು ವೇಳೆ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿದ್ದಲ್ಲಿ ಅರ್ಜಿ ನಮೂನೆ 6 ನ್ನು ಭರ್ತಿಮಾಡಿ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post