ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಮಾಜಕ್ಕೆ ವಿಭಿನ್ನ ಹಾಗೂ ವಿಡಂಬನಾತ್ಮಕ ಸದಭಿರುಚಿಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದ ಖ್ಯಾತ ನಟ, ನಿರ್ದೇಶಕ ಗುರುಪ್ರಸಾದ್(52) ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕ್ಕೆ ಕಾರಣವಾಗಿದೆ.
ಮೂರು ದಿನದ ಹಿಂದೆಯೇ ಮಾದನಾಯಕನಹಳ್ಳಿಯ ತಮ್ಮ ಅಪಾರ್ಟ್ಮೆಂಟ್ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮೂರೂ ದಿನಗಳ ಹಿಂದೆಯೇ ಅವರು ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಇಂದು ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ನವೆಂಬರ್ 2ರಂದು ಗುರುಪ್ರಸಾದ್ ಹುಟ್ಟುಹಬ್ಬ. ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್ ಕೊಟ್ಟಿದೆ. ಮೂರು ದಿನಗಳ ಹಿಂದೆ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಇಂದು ಬೆಳಗ್ಗೆಯಿಂದ ಸ್ಥಳೀಯ ನಿವಾಸಿಗಳಿಗೆ ವಾಸನೆ ಬರತೊಡಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಬಾಗಿಲನ್ನು ತೆರೆಯಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.
ಮಠ, ಎದ್ದೇಳು ಮಂಜುನಾಥ, ಎರಡನೇ ಸಲ, ರಂಗನಾಯಕ ಸೇರಿದಂತೆ ಹಲವು ಉತ್ತಮ ಚಿತ್ರಗಳನ್ನು ನೀಡಿದ್ದ ಗುರುಪ್ರಸಾದ್, ತಮ್ಮ ಪ್ರತಿ ಚಿತ್ರದಲ್ಲೂ ಸಮಾಜಕ್ಕೆ ಹಾಗೂ ಪ್ರತಿಯೊಬ್ಬರ ಜೀವನದಲ್ಲಿ ಭರವಸೆ ತುಂಬುವ ಸಂದೇಶ ನೀಡಿದ್ದರು. ಅಂತಹ ವ್ಯಕ್ತಿ ಈಗ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತ ಮೂಡಿಸಿದೆ.
ಸದಾಕಾಲ ನಗುತ್ತಲೇ, ಸುತ್ತಲೂ ಇದ್ದವರನ್ನು ನಗಿಸುತ್ತಿದ್ದ ಗುರುಪ್ರಸಾದ್, ಜೀವನದಲ್ಲಿ ಭರವಸೆಯೇ ಮುಖ್ಯ ಎಂದು ಸಂದೇಶ ಮೂಡಿಸಿದ್ದರು.
ತಮ್ಮ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ ಪಡೆದಿದ್ದ ಗುರುಪ್ರಸಾದ್ ಅವರ ಕೊನೆಯ ಸಿನಿಮಾ ರಂಗನಾಯಕ ಯಶಸ್ಸು ಕಂಡಿರಲಿಲ್ಲ.
ಹಿರಿತೆರೆ ಅಲ್ಲದೇ ಕಿರುತೆರೆಯ ಹಲವು ರಿಯಾಲಿಟಿ ಶೋಗಳಿಗೆ ಗುರುಪ್ರಸಾದ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















