ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸಮುದಾಯದ ಜನರು ಅಂಗವಿಕಲರ ಮೇಲೆ ಕೇವಲ ಅನುಕಂಪ ತೋರಿಸಿದರೆ ಸಾಲದು. ಅವರಿಗೆ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸಿಕೊಟ್ಟು ಮಾನವೀಯ ನೆಲೆಯಲ್ಲಿ ಕಾಣಬೇಕು ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು.
ನನ್ನಿವಾಳ, ಸೋಮುಗುದ್ದು,ಸಾಣಿಕೆರೆ ಪಂಚಾಯ್ತಿ ವಾಪ್ತಿಯ ಹಾಗೂ ಸಮೀಪದ ಬೆಳಗೆರೆ ಗ್ರಾಮದ ಗ್ರಾಪಂ ಆವರಣದಲ್ಲಿ ಬೆಳಗೆರೆ ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳ ಅಂಗವಿಕಲರಿಗೆ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೊರೋನಾ ಮಹಾಮಾರಿಯಿಂದ ಪ್ರಪಂಚದಲ್ಲಿ ಸಾಕಷ್ಟು ತೊಂದರೆಯನ್ನು ಜನ ಅನುಭವಿಸುತ್ತಿದ್ದಾರೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಹೆಚ್ಚಾಗುತ್ತಿದ್ದು, ಜನತೆ ಎಚ್ಚರ ತಪ್ಪಿದರೆ ತೊಂದರೆ ಅನುಭವಿಸಬೇಕಾಗುತ್ತದೆ. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ತಪ್ಪದೆ ಮಾಸ್ಕ್ ಧರಿಸಬೇಕು, ಹೊರಗೆ ತೆರಳಿ ಮನೆಗೆ ಬಂದಾಗ ಕೈಗಳನ್ನು ತೊಳೆದುಕೊಳ್ಳಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್’ಡೌನ್ ಹಿನ್ನೆಲೆ ಸಾಕಷ್ಟು ಪ್ಯಾಕೇಜ್ಗಳನ್ನು ಘೋಷಿಸಿದ್ದು, ಇವುಗಳ ರೂಪುರೇಷೆ ಸಿದ್ದವಾಗಬೇಕಿದೆ. ಸರ್ಕಾರ ಉದ್ಯೋಗ ಖಾತ್ರಿಯಲ್ಲಿ 100 ದಿನ ಇದ್ದ ಉದ್ಯೋಗವನ್ನು 200 ದಿನಗಳಿಗೆ ವಿಸ್ತರಿಸಬೇಕು. ಈ ಯೋಜನೆಗೆ ಮುಂಗಡವಾಗಿ ಹಣ ಬಿಡುಗಡೆ ಮಾಡಬೇಕು. ಇದರಿಂದ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು, ಕುಲ ಕಸುಬುಗಳ ಜನರು ಹಾಗೂ ವಿವಿಧ ಸ್ವ-ಉದ್ಯೋಗಿಗಳಿಗೆ ನೆರವಾಗಲಿದೆ ಎಂದರು.
ಸಮಾಜದಲ್ಲಿ ಅಂಗವಿಕಲರನ್ನು ಜನರು ನೋಡುವ ದೃಷ್ಟಿಕೋನ ಬದಲಾಗಬೇಕು. ಪರಿಸರದ ಪ್ರಭಾವ, ಅನುವಂಶೀಯತೆ ಹಾಗೂ ಪೋಷಕರ ಅನಾರೋಗ್ಯದ ಕಾರಣದಿಂದ ಅಂಗವಿಕಲ ಮಕ್ಕಳು ಜನಿಸುತ್ತಾರೆ. ಆದರೆ ಇವರನ್ನು ಪೋಷಕರು-ಸಮುದಾಯದವರು ಮಾನವೀಯ ಹಿನ್ನೆಲೆಯಲ್ಲಿ ಕಂಡು ಸೂಕ್ತ ವೈದ್ಯಕೀಯ ಚಿಕಿತ್ಸೆ, ಸರ್ಕಾರದ ಪ್ರೋತ್ಸಾಹಕ ಯೋಜನೆಗಳ ಸೌಕರ್ಯಗಳನ್ನು ಒದಗಿಸಿಕೊಟ್ಟು ಅವರನ್ನು ಪ್ರೋತ್ಸಾಹಿಸಬೇಕು ಎಂದರು.
ಚಿತ್ರದುರ್ಗ ಜಿಪಂ ಸದಸ್ಯ ಪ್ರಕಾಶಮೂರ್ತಿ ಮಾತನಾಡಿ, ಚಳ್ಳಕೆರೆ ತಾಲೂಕಿನ 4000ಕ್ಕೂ ಹೆಚ್ಚು ಅಂಗವಿಕಲರಿಗೆ ಶಾಸಕರು ತಮ್ಮ ವೈಯಕ್ತಿಕ ಖರ್ಚಿನಿಂದ ದಿನ ನಿತ್ಯದ ಆಹಾರ ಸಾಮಗ್ರಿಗಳ ಕಿಟ್’ಗಳನ್ನು ಸಿಧ್ದಗೊಳಿಸಿ ಗ್ರಾಪಂ ಕೇಂದ್ರಗಳಿಗೆ ತೆರಳಿ ವಿತರಿಸಿದ್ದಾರೆ. ಇದು ಅತ್ಯಂತ ಮಾನವೀಯ ನಡೆಯಾಗಿದೆ ಎಂದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆಂಜನೇಯ ಮಾತನಾಡಿ ಜನಪ್ರತಿನಿಧಿಗಳಾದವರು ತಮ್ಮ ಕ್ಷೇತ್ರದ ಜನರ ಕುಂದು ಕೊರತೆಗಳನ್ನು ಅರಿತುಕೊಂಡೇ ಜನರ ಅಗತ್ಯತೆಗೆ ತಕ್ಕಂತೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಶಾಸಕರು ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದರು.
ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಗುಂಡಪ್ಪ ಮತನಾಡಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಚರಂಡಿ, ಸ್ವಚ್ಚ ಮಾಡಿಸಲಾಗಿದ್ದು, ಕಳೆಗಳನ್ನು ತೆರವು ಮಾಡಲಾಗಿದೆ. ಗ್ರಾಮದ ಸಮೀಪ ಇರುವ ತಿಪ್ಪೆಗಳನ್ನು ಸ್ಥಳಾಂತರಿಸಲಾಗಿದೆ. ಕುಡಿಯುವ ನೀರಿಗಾಗಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದ್ಯೋಗ ಖಾತ್ರಿಗಳಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿಸಲಾಗುವುದು ಎಂದರು.
ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಮಹದೇವಮ್ಮ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆಂಜನೇಯ, ನಗರಸಭೆ ಸದಸ್ಯ ರಮೇಶ್ ಗೌಡ, ಗ್ರಾಪಂ ಸದಸ್ಯರಾದ ಕೆ.ಟಿ. ನಿಜಲಿಂಗಪ್ಪ, ಗೋಪಾಲಪ್ಪ, ಬಲರಾಮಣ್ಣ, ಮಂಜಮ್ಮ, ಶಿವಣ್ಣ, ಇಂಜನೀಯರ್ ತಿಪ್ಪೇಸ್ವಾಮಿ, ಆರ್.ಐ. ಮೋಹನ್ ಕುಮಾರ್, ಗ್ರಾಮಲೆಕ್ಕಿಗ ಕಡೇಶ ನರಸಿಂಹಮೂರ್ತಿ, ದಿವ್ಯ, ಸೇವ ಸಹಕಾರ ಸಂಘದ ಅಧ್ಯಕ್ಷ ಎನ್ ತಿಪ್ಪೀರಯ್ಯ, ಮುಂಖಡರಾದ ರವಿಕುಮಾರ್, ದೇವರಾಜ್ ತಿಪ್ಪೇಸ್ವಾಮಿ, ಟಿ.ಡಿ.ಎಲ್ ಗೌಡ, ಶಿವಸ್ವಾಮಿ, ಮಹಾಲಿಂಗಪ್ಪ ತಿಪ್ಪಮ್ಮ, ಸಣ್ಣಮ್ಮ, ಗ್ರಾಪಂ ವ್ಯಾಪ್ತಿಯ ಅಂಗವಿಕಲರು ಗ್ರಾಮಸ್ಥರು ಗ್ರಾಮಪಂಚಾಯ್ತಿ ಸಿಬ್ಬಂದಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post