ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ತನಗಿದ್ದ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಮಹಿಳೆಯೊಬ್ಬಳು ವಿವಾಹದ ಸಮಯದಲ್ಲಿ ಮುಚ್ಚಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ನೀಡಿದ ಡೈವೋರ್ಸ್ ಆದೇಶವನ್ನು ಛತ್ತೀಸ್ ಗಡದ ಹೈಕೋರ್ಟ್ ಎತ್ತಿ ಹಿಡಿದಿದೆ.
ಸದರಿ ಪ್ರಕರಣದ ದಂಪತಿಗಳ ನಡುವಿನ ವಿವಾಹ ಛತ್ತೀಸ್ ಗಡದ ಖೈರಾಗರ್ ನಗರದಲ್ಲಿ 2015ರ ಇಸವಿಯಲ್ಲಿ ನೆರವೇರಿತ್ತು. ವಿವಾಹವಾದ ಕೆಲವೇ ದಿವಸಗಳಲ್ಲಿ ದಂಪತಿಗಳ ನಡುವೆ ತೀವ್ರ ಮನಸ್ತಾಪ ತಲೆದೋರಿ, ಪತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪತ್ನಿ ತನಗಿರುವ ಋತುಚಕ್ರ, ಮುಟ್ಟು ಹಾಗು ಇತರೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಟ್ಟು ಮದುವೆಯಾಗಿದ್ದಾರೆ ಎಂದು ಪತಿ ಆರೋಪಿಸಿದ್ದರು. ಪರಸ್ಪರ ನಂಬಿಕೆ ವೈವಾಹಿಕ ಸಂಬಂಧಕ್ಕೆ ಭದ್ರ ಬುನಾದಿ ಕಲ್ಪಿಸುತ್ತದೆ. ಅರೋಗ್ಯ ಸಮಸ್ಯೆಗಳನ್ನು ಮುಚ್ಚಿಟ್ಟು ಮದುವೆಯಾಗಿರುವುದರಿಂದ ಇಬ್ಬರ ನಡುವೆ ವಿಶ್ವಾಸಕ್ಕೆ ಧಕ್ಕೆ ಬಂದಿದೆ ಎಂದು ಪತಿ ಹೇಳಿಕೊಂಡಿದ್ದರು.
ಹೀಗೆ ವಾಸ್ತವಾಂಶಗಳನ್ನು ಅಡಗಿಸಿ ಮದುವೆಯಾಗಿರುವುದು ಕ್ರೌರ್ಯವಾಗಿದ್ದು, ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13 ಅಡಿಯಲ್ಲಿ ವಿಚ್ಛೇದನ ನೀಡಬೇಕೆಂದು ಕೋರಲಾಗಿತ್ತು. ಮೇಲಾಗಿ ಸೆಪ್ಟೆಂಬರ್ 2016ರ ತರುವಾಯ ಪತ್ನಿ ತನ್ನ ತವರು ಮನೆಯಲ್ಲಿ ನೆಲೆಸುತ್ತಿದ್ದು, ದಾಂಪತ್ಯ ಸಂಪೂರ್ಣ ಮುರಿದು ಬಿದ್ದಿದೆ ಎಂದು ವಾದಿಸಿದ್ದರು.
ಪತ್ನಿ ಪರ ವಕೀಲರು ಮಹಿಳೆಗಿರುವ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಶಾಶ್ವತವಲ್ಲ. ಇವಕ್ಕೆ ವೈದ್ಯಕೀಯ ಚಿಕಿತ್ಸೆ ಇದೆ. ಈಗಾಗಲೇ ಔಷದ ಹಾಗು ಯೋಗಾಭ್ಯಾಸದ ಮೂಲಕ ಸಮಸ್ಯೆ ಪರಿಹಾರಕ್ಕೆ ನನ್ನ ಕಕ್ಷಿದಾರರು ಪ್ರಯತ್ನಿಸುತ್ತಿದ್ದಾರೆ. ಗಂಡನ ಮನೆಯವರು ನನ್ನ ಕಕ್ಷಿದಾರರನ್ನು ಬಂಜೆ ಎಂದು ಹೀಯಾಳಿಸುತ್ತಿದ್ದಾರೆ ಎಂದು ತಿಳಿಸಿದ್ದರು.
ಸಾಕ್ಷಿಗಳನ್ನು ಪರಿಗಣನೆಗೆ ತೆಗೆದುಕೊಂಡ ಕೆಳ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿತು.
ಈ ಆದೇಶದ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಮಹಿಳೆ, ವಿಚಾರಣಾ ನ್ಯಾಯಾಲಯ ವೈದ್ಯಕೀಯ ಸಾಕ್ಷಿಗಳನ್ನು ಸರಿಯಾಗಿ ಗಮನಿಸಿಲ್ಲ ಹಾಗು ಯಾವುದೇ ತಜ್ಞ ವೈದ್ಯರ ಅಭಿಪ್ರಾಯ ಪಡೆಯದೇ ಆದೇಶ ನೀಡಲಾಗಿದೆ ಎಂದು ವಾದಿಸಿದ್ದರು. ಮಕ್ಕಳಾಗದಿರುವ ವೈದ್ಯಕೀಯ ಸಮಸ್ಯೆಯನ್ನು ಮುಚ್ಚಿಡುವದು ಕ್ರೌರ್ಯದ ವ್ಯಾಖ್ಯಾನದ ಒಳಗೆ ಬರುವುದಿಲ್ಲ ಎಂದೂ ವಾದಿಸಿದ್ದರು.
ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ರಜನಿ ದುಬೆ ಹಾಗು ನ್ಯಾಯಮೂರ್ತಿ ಆಮಿತೀಂದ್ರ ಕಿಶೋರ್ ಪ್ರಸಾದ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ, ಮೇಲ್ಮನಿವಿಯನ್ನು ತಿರಸ್ಕರಿಸಿ, ವಿಚಾರಣಾ ನ್ಯಾಯಾಲಯ ನೀಡಿದ ವಿಚ್ಛೇದನದ ಆದೇಶವನ್ನು ಎತ್ತಿ ಹಿಡಿದಿದೆ. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಟ್ಟಿರುವುದು ಹಾಗು ಪತಿಯೊಂದಿಗಿನ ಪತ್ನಿಯ ನಡವಳಿಕೆ ಗಮನಿಸಿದರೆ, ಕ್ರೌರ್ಯದ ಆರೋಪ ಸಾಬೀತಾಗುತ್ತದೆ ಎಂದು ತಿಳಿಸಿದೆ. ಜೊತೆಗೆ ಇಬ್ಬರ ಸಾಮಾಜಿಕ ಹಾಗು ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ, ಹೈಕೋರ್ಟ್ ಪತಿಗೆ 5 ಲಕ್ಷ ರೂಪಾಯಿ ಹಣವನ್ನು ಪತ್ನಿಗೆ ಶಾಶ್ವತ ಜೀವನಾಂಶವಾಗಿ ನೀಡಲು ಆದೇಶಿಸಿದೆ.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















