ಹೌದು… ಪೌರಾಣಿಕ ಹಿನ್ನೆಲೆಯುಳ್ಳ ದೇವಾಲಯಗಳು ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಹಲವಾರಿದ್ದು, ಇವುಗಳ ಐತಿಹ್ಯ, ವಿಶೇಷತೆ ಹಿಂದೂ ಸಂಸ್ಕೃತಿ, ಧಾರ್ಮಿಕ ಆಚರಣೆ ಹಾಗೂ ಮಹತ್ವವನ್ನು ಸಾರುತ್ತದೆ. ಅದರಂತೆ ವಿಜಯಪುರ ಜಿಲ್ಲೆಯ ತೊರವೆ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯವೂ ಸಹ ಒಂದು.
ತೋರವೆಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ ವಿಜಯಪುರ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳದಲ್ಲಿ ಒಂದು. ಇದು ಐತಿಹಾಸಿಕ ದೇವಾಲಯವಾಗಿದ್ದು, ಪೌರಾಣಿಕ ಹಿನ್ನೆಲೆಯು ಇದೆ.
ದುರ್ವಾಸ ಮುನಿಗಳು ಪೂಜಿಸುತ್ತಿದ್ದರೆಂದು ಐತಿಹ್ಯವಿದೆ. ದುರ್ವಾಸರು ಕಾರಣ ನರಸಿಂಹ ಸ್ವಾಮಿಯನ್ನು ದುರ್ವಾಸಕರಾರ್ಜಿತ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ಎನ್ನಲಾಗುತ್ತದೆ. ನರಸಿಂಹ ಸ್ವಾಮಿ ಪಕ್ಕದಲ್ಲಿ ರುದ್ರ ದೇವರು ಇರುವುದರಿಂದ ರುದ್ರಾಂಗತ ಶ್ರೀಲಕ್ಷ್ಮೀನರಸಿಂಹ ಎಂದೂ ಸಹ ಕರೆಯುತ್ತಾರೆ. ಪ್ರತಿದಿನವೂ ಇಲ್ಲಿ ಪಂಚಾಮೃತ ಅಭಿಷೇಕ ಮತ್ತು ನವರಾತ್ರಿಗಳಲ್ಲಿ ವಿಶೇಷ ಉತ್ಸವ ಕಾರ್ಯಕ್ರಮಗಳು ನಡೆಯುತ್ತವೆ.
ಇಲ್ಲಿಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವರು ಭಕ್ತರ ಮನೋಕಾಮನೆಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿಯೇ ನೆರವೇರಿಸುತ್ತಿದ್ದ ಕಾರಣ ಗ್ರಾಮವನ್ನು ತ್ವರಿತಾಲಯ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಶಾಹಿ ಆಳ್ವಿಕೆಯ ಪೂರ್ವದಲ್ಲಿದ್ದ ದೇವಾಲಯ. ತೊರವೆ ಗ್ರಾಮವು ಆಗ ಒಂಬತ್ತು ಲಕ್ಷ ಜನಸಂಖ್ಯೆಯುಳ್ಳ ದೊಡ್ಡ ಪಟ್ಟಣವಾಗಿತ್ತು.
ಒಕ್ಕಳಮಟ್ಟಿ ನರಸಿಂಹ ದೇವರು
ಈಗಿರುವ ಶ್ರೀಲಕ್ಷ್ಮೀ ನರಸಿಂಹ ದೇವರಿಗಿಂತಲೂ ಮೊದಲು ಒಕ್ಕಳಮಟ್ಟಿ ನರಸಿಂಹ ಸ್ವಾಮಿ ದೇವರನ್ನು ಪೂಜಿಸಲಾಗುತ್ತಿತ್ತು. ಸ್ವಾಮಿಗೆ ಪ್ರತಿದಿನವೂ ನಲವತ್ತು ಕೆಜಿ ಹಯಗ್ರೀವವನ್ನು ಸ್ವಲ್ಪವು ಮಡಿಗೆ ಚ್ಯುತಿ ಬರದೆ ಸಮರ್ಪಿಸಬೇಕಿತ್ತು. ಸ್ವಲ್ಪ ಹೆಚ್ಚುಕಮ್ಮಿಯಾದರೂ ಒಕ್ಕಳಮಟ್ಟಿ ನರಸಿಂಹ ಸ್ವಾಮಿ ಶಿಕ್ಷಿಸುತ್ತಾರೆ ಎಂಬುದು ಜನರ ನಂಬಿಕೆಯಾಗಿತ್ತು.
ಅಚಾನಕ್ಕಾಗಿ ಆದ ತಪ್ಪುಗಳಿಗೂ ಶಿಕ್ಷೆಗೆ ಭಕ್ತರನ್ನು ಕಂಡು ಸ್ವತಃ ನರಸಿಂಹ ಸ್ವಾಮಿಯೇ ಮರುಕಪಟ್ಟು, ದೇವಾಲಯದಿಂದ ಹೊರಡಲು ನಿಶ್ಚಯಿಸಿದರಂತೆ. ಅರ್ಚಕರಿಗೆ ಸ್ವಪ್ನದಲ್ಲಿ ಬಂದು ತಮ್ಮನ್ನು ಗುಪ್ತಗಂಗೆಯಲ್ಲಿ ವಿಸರ್ಜನೆ ಮಾಡುವಂತೆ ಆದೇಶಿಸಿದರಂತೆ. ಅರ್ಚಕರು ಆದೇಶದಂತೆ ನಡೆದುಕೊಂಡರು.
ದೇವರ ಮೂರ್ತಿ ಪ್ರತಿಷ್ಠಾಪನೆ
ಒಕ್ಕಳಮಟ್ಟಿ ನರಸಿಂಹ ಸ್ವಾಮಿ ದೇವರನ್ನು ಗುಪ್ತಗಂಗೆಯಲ್ಲಿ ವಿಸರ್ಜನೆ ಮಾಡಿದ ನಂತರ, ಅರ್ಚಕರಿಗೆ ಬರುವ ಭಕ್ತರಿಗೆ ದೇವರು ಎಲ್ಲಿ ಎಂದರೆ ಏನು ಹೇಳಬೇಕು..?’ ಎಂಬ ಚಿಂತೆ ಕಾಡಿತು. ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಸಿದಾಗ ಸ್ವಪ್ನದಲ್ಲಿ ಕಾಣಿಸಿಕೊಂಡ ನರಸಿಂಹ ಸ್ವಾಮಿಯು, ವಿಸರ್ಜನೆ ಮಾಡಿದ ಸ್ಥಳದ ಬಳಿ ಬರುವಂತೆ ಹೇಳಿದರು. ಮರುದಿನ ಅರ್ಚಕರೆಲ್ಲ ಗುಪ್ತಗಂಗೆಯಲ್ಲಿ ಸ್ನಾನಮಾಡಿ, ತಪಸ್ಸು ಮಾಡಿದಾಗ ನರಸಿಂಹ ಸ್ವಾಮಿ ವಿಗ್ರಹವು ಮೇಲೆ ಬಂದು ನಾನು ಬರಲಾರೆ, ನನ್ನ ತಮ್ಮನನ್ನು ಕಳಿಸುವೆ. ನೀವು ಹಸಿಮೇವನ್ನು ತೆಗೆದುಕೊಂಡು ಕೃಷ್ಣತೀರದಿಂದ ದಕ್ಷಿಣಕ್ಕೆ ಹೋಗಿರಿ. ಮೇವಿಗೆ ಯಾವಾಗ ಸ್ಪರ್ಶ ಆಗುತ್ತದೆಯೋ ಅದೇ ಸ್ಥಳದಲ್ಲಿ ನನ್ನ ತಮ್ಮನಿರುತ್ತಾನೆ’ ಎಂದು ಹೇಳಿ ಗುಪ್ತಗಂಗೆಯಲ್ಲಿ ಗುಪ್ತರಾದರು. ಅರ್ಚಕರೆಲ್ಲರೂ ಮಡಿಯಿಂದ ಹಸಿಮೇವನ್ನು ಎತ್ತಿನ ಬಂಡಿಯಲ್ಲಿ ತೆಗೆದುಕೊಂಡು, ಕೃಷ್ಣ ತೀರಕ್ಕೆ ಹೊರಟರು. ಸಮೀಪದ ಚಿಮ್ಮಲಗಿ ಗ್ರಾಮದ ದೇಶಪಾಂಡೆ ವಂಶದ ಒಡೆತನದ ಜಮೀನಿನಲ್ಲಿ ಬಂದಾಗ ಮೇವಿಗೆ ಅಗ್ನಿಸ್ಪರ್ಶವಾಗುತ್ತದೆ. ಭೂಮಿಯ ಒಳಗೆ ಶ್ರೀಲಕ್ಷ್ಮೀಸಹಿತನಾಗಿರುವ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಮೂರ್ತಿಯು ಸಿಗುತ್ತದೆ. ದೇಶಪಾಂಡೆ ವಂಶಸ್ಥರ ಸ್ವಪ್ನದಲ್ಲಿ ನರಸಿಂಹ ಸ್ವಾಮಿ ಕಂಡು ಅವರೊಂದಿಗೆ ನನ್ನನ್ನು ಕಳುಹಿಸಿ, ತೋರವಿ ಗ್ರಾಮದಲ್ಲಿ ಪ್ರತಿಷ್ಟಾಪನೆಗೊಳ್ಳುವೆ’ ಎಂದು ಹೇಳಿದಾಗ, ಅರ್ಚಕರು ಹಿಂತಿರುಗಿ ತೋರವಿ ಗ್ರಾಮಕ್ಕೆ ಬಂದು, ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗೆ ಪ್ರತಿಷ್ಠಾಪನೆಗೊಂಡ, ತೋರವಿ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಮೂರ್ತಿಯು ವಿಶೇಷವಾಗಿದ್ದು, ಬಲಭಾಗದಲ್ಲಿ ಶ್ರೀಲಕ್ಷ್ಮೀ, ಎಡಭಾಗದಲ್ಲಿ ಪ್ರಹ್ಲಾದನ ಮೂರ್ತಿ ಇದೆ.
ತೋರವಿಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಿಂದ ಸ್ವಲ್ಪವೇ ದೂರದಲ್ಲಿದೆ ಗುಪ್ತಗಂಗಾ ಎಂಬ ಬಾವಿ. ಆದಿಲ್ ಶಾಹಿಯು ಪಶ್ಚಿಮ ಯುದ್ದದಲ್ಲಿ ವಿಜಯ ಸಾಧಿಸಿ ಹಿಂತಿರುಗುವಾಗ ಗಂಗೆಯು ಸುಲ್ತಾನನಿಗೆ ನಿನ್ನನ್ನು ಹಿಂಬಾಲಿಸುತ್ತೇನೆ. ಆದರೆ ನೀನು ಹಿಂತಿರುಗಿ ನೋಡಿದರೆ ಅದೇ ಸ್ಥಳದಲ್ಲಿ ನೆಲೆಸುತ್ತೇನೆ’ ಎಂದು ಉತ್ತರಿಸುತ್ತಾಳೆ. ಸುಲ್ತಾನನು ತೋರವಿ ಗ್ರಾಮ ಸಮೀಪಿಸಿದಾಗ ಕುತೂಹಲ ತಡೆಯದೆ ಹಿಂದಿರುಗಿ ನೋಡುತ್ತಾನೆ. ಗಂಗೆಯು ಅಲ್ಲಿಯೇ ನೆಲೆಸುತ್ತಾಳೆ. ಎಷ್ಟೇ ಬರಗಾಲ ಬಂದರೂ ಇಲ್ಲಿ ಮಾತ್ರ ಎಂದಿಗೂ ನೀರು ಬತ್ತುವುದಿಲ್ಲ.
ನರಹರಿ ರಚಿತ ತೋರವೆ ರಾಮಾಯಣ
ತೊರವೆಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಜಾಗೃತ ಮತ್ತು ಶಕ್ತಿಯುತವಾದ ಕ್ಷೇತ್ರ. ಇದೇ ಕ್ಷೇತ್ರದಲ್ಲಿ ನರಹರಿಯು ತೋರವೆ ರಾಮಾಯಣ ರಚಿಸುತ್ತಾರೆ. ಈ ಕೃತಿಗೆ ಶ್ರೀಕುಮಾರ ವಾಲ್ಮೀಕಿ ಕೃತಿ ಶ್ರೀ ಬಿರುದನ್ನು ಕೊಡಲಾಗುತ್ತದೆ. ಪುರಂದರದಾಸರು ಇದೇ ಕ್ಷೇತ್ರದಲ್ಲಿ ಐದಾರು ಹಾಡುಗಳನ್ನು ಬರೆದಿದ್ದಾರೆ.
(ಮಾಹಿತಿ ಕೃಪೆ: ವಾಟ್ಸಪ್ ಸ್ನೇಹಿತರು)
Discussion about this post