ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಈ ನವರಾತ್ರಿ ಎಂದರೆ ಒಂಭತ್ತು ದಿನಗಳು ಆಚರಿಸುವ ಹಬ್ಬವಾಗಿದೆ. ದೆವಿಯ ಆರಾಧಕರು ದೆವಿಯ ವಿವಿಧ 9 ರೂಪಗಳನ್ನು ಪೂಜಿಸಿದರೆ, ಬ್ರಾಹ್ಮಣರಲ್ಲಿ ವೆಂಕಟೇಶ ದೇವರ ಕಲ್ಯಾಣದ ಸಂಭ್ರಮವನ್ನು ಆಚರಿಸಲಾಗುತ್ತದೆ.
ವೆಂಕಟೇಶಕಲ್ಯಾಣ ಮತ್ತು ನವರಾತ್ರೋತ್ಸವವು ದಕ್ಷಿಣ ಭಾರತದಲ್ಲಿ ಅದರಲ್ಲೂ ಬ್ರಾಹ್ಮಣರಲ್ಲಿ ಬಹಳ ಪ್ರಚಲಿತವಾದ ಪ್ರಮುಖ ಸಂಪ್ರದಾಯವಾಗಿದೆ. ಅದರಲ್ಲೂ ಯಾರೆಲ್ಲ ವೆಂಕಟ ರಮಣನ ಒಕ್ಕಲೋ ಅವರೆಲ್ಲರ ಮನೆಯಲ್ಲಿ ದಿನ ನಿತ್ಯವೂ ನಂದಾ ದೀಪವನ್ನು ವೆಂಕಟೇಶ ದೇವರ ಸಲುವಾಗಿ ಪ್ರಜ್ವಲಿಸುತ್ತಾರೆ. ಕಲಶ ಸ್ಥಾಪನೆಯನ್ನು ಮಾಡಿ ಮನೆಯಲ್ಲಿ ಸಣ್ಣ ಪಾತ್ರೆಯಲ್ಲಿ ಬೆಳೆಯಲು ಬೆಳೆಯನ್ನು ಹಾಕಿ ದೇವರಿಗೆ ದಿನ ನಿತ್ಯವೂ ಬಗೆ ಬಗೆಯ ಭಕ್ಷ್ಯಗಳನ್ನು ನೈವೇದ್ಯ ಮಾಡಿ ಬ್ರಾಹ್ಮಣ ಸುವಾಸಿನಿಯರು ಮತ್ತು ಬಂಧು ಬಾಂಧವರೊಂದಿಗೆ ಆಚರಿಸುತ್ತಾರೆ.
ಮನೆಯಲ್ಲಿ ವೆಂಕಟೇಶ ಕಲ್ಯಾಣದ ಪ್ರವಚನ ಅಥವಾ ವೆಂಕಟೇಶ ಪಾರಿಜಾತದ ಹಾಡನ್ನು ಹಾಡಿ ದೇವರನ್ನು ಪೂಜಿಸುತ್ತಾರೆ. ಇದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ. ಹಾಗೆಯೇ ಬೆಂಗಳೂರು ಮೈಸೂರು ಪ್ರಾಂತದಲ್ಲಿ ಮನೆಯಲ್ಲಿ ಗೊಂಬೆಯನ್ನು ಕೂಡಿಸುವುದು ವಾಡಿಕೆ.
ಮಾದನೂರು ವಿಷ್ಣುತೀರ್ಥರ ಶಿಷ್ಯರಾದ ಗೋಕಾವಿ ಅನಂತ ಆಚಾರ್ಯರು ತಮಗೆ ಸ್ವಪ್ನದಲ್ಲಿ ಬಂದು ಆದೇಶ ನೀಡಿದ ತಿರುಪತಿಯ ವೆಂಕಟರಮಣನ ಆಜ್ಞೆಯಂತೆ ವೆಂಕಟೇಶ ಪಾರಿಜಾತವನ್ನು ಸರಳ ಕನ್ನಡದಲ್ಲಿ ಅನಂತಾದ್ರೀಶ ಎಂಬ ಅಂಕಿತದಿಂದ ರಚಿಸಿದ್ದಾರೆ. ಭವಿಷ್ಯೋತ್ತರ ಪುರಾಣದಲ್ಲಿ ಬರುವ ವೆಂಕಟೇಶ ಮಹಾತ್ಮೆಯ ಕತೆಯ ಆಧಾರದ ಮೇಲೆ ವೆಂಕಟೇಶ ಪಾರಿಜಾತವನ್ನು ರಚಿಸಿದ್ದಾರೆ.
ವೆಂಕಟೇಶ ಪಾರಿಜಾತದ ಕಥೆ ಭೃಗು ಋಷಿಗಳುತ್ರಿಮೂರ್ತಿಗಳ ಪರೀಕ್ಷೆ ಮಾಡಿ ಉತ್ತಮತ್ವ ನಿರ್ಣಯ ಮಾಡಿದ ಮೇಲೆ ಲಕ್ಷ್ಮಿ ದೇವಿಯು ಪತಿಯ ಮೇಲೆ ಮುನಿಸಿಕೊಂಡು ಕರವೀರಪುರಕ್ಕೆ ಹೊರಡುತ್ತಾಳೆ ಆಗ ಶ್ರೀನಿವಾಸನು ವೈಕುಂಠ ತೊರೆದು ಭೂ ಲೋಕದಲ್ಲಿ ಬಂದು ನೆಲೆಸುವ ಉದ್ದೇಶದಿಂದ ಬರುತ್ತಾನೆ. ತಿರುಮಲೆಯ ಸ್ವಾಮಿ ಪುಷ್ಕರಣಿ ತೀರದ ಹುಣಸೆ ಮರದ ಕೆಳಗಿದ್ದ ಹುಟ್ಟದಲ್ಲಿ ವಾಸಿಸುವಾಗ ಭಗವಂತನ ಸೇವೆಗಾಗಿ ಬ್ರಹ್ಮ ಮತ್ತು ರುದ್ರರು ಆಕಳು ಹಾಗೂ ಕರುವಿನ ವೇಷದಲ್ಲಿ ಬಂದು ಚೋಳರಾಜನ ಗೋಶಾಲೆ ಸೇರಿಕೊಂಡು ಪರಮಾತ್ಮನ ಸೇವೆಯನ್ನು ಮಾಡುತ್ತಲಿರುತ್ತಾರೆ.
ರಾಜನ ಹೆಂಡತಿ ಬೇರೆಲ್ಲ ಆಕಳ ಹಾಲು ದೊರೆಯುತ್ತದೆ. ಈ ಆಕಳ ಹಾಲು ಏನಾಗುತ್ತದೆ ಎಂದು ಕೇಳಿದಾಗ ಗೋಪಾಲಕ ಆಕಳನ್ನು ಹಿಂಬಾಲಿಸಿ ಬಂದು ನೋಡಿ ಹಾಲನ್ನು ಹುತ್ತದಲ್ಲಿ ಕರೆಯುತ್ತಿರುವ ಕಾರಣ ಸಿಟ್ಟಿನಿಂದ ಕೊಡಲಿ ತಗೆದುಕೊಂಡು ಹೊಡೆದ ಕಾರಣ ಆಕಳನ್ನು ರಕ್ಷಿಸಲು ಭಗವಂತ ತಾನು ಎದ್ದು ನಿಂತು ರಕ್ಷಿಸುತ್ತಾನೆ. ಗೋಪಾಲಕ ಸಾಯುತ್ತಾನೆ, ಚೋಳ ರಾಜನನ್ನು ಆಕಳು ಕರೆದುಕೊಂಡು ಬರುತ್ತದೆ. ಚೋಳರಾಜನಿಗೆ ಶಾಪವನ್ನು ನೀಡಿ ಇರುವ ಸ್ಥಾನ ಹುಡುಕುತ್ತ ಹೊರಟ ಶ್ರೀನಿವಾಸನಿಗೆ ವರಾಹ ದೇವರು ನೂರು ಹೆಜ್ಜೆ ಜಾಗವನ್ನು ಆರೈಕೆಗೆ ಮಾಡಲು ಬಕುಲಾವತಿಯನ್ನು ಕೊಡುತ್ತಾನೆ.
ಬೇಟೆಗೆ ಹೋದಾಗ ಪದ್ಮಾವತಿಯನ್ನು ನೋಡಿ ಅವಳನ್ನು ಮಾತನಾಡಿಸಿ ಅವಳಿಂದ ಕಲ್ಲೇಟು ತಿಂದು ಮನೆಗೆ ಬಂದು ಬಕುಲಾವತಿಯನ್ನು ಆಕಾಶರಾಜನ ಮನೆಗೆ ಕಳುಹಿಸಿ ಮದುವೆಯ ಪ್ರಸ್ತಾಪ ಮಾಡಿಸಿ, ಸ್ವತಃ ಕೊರವಂಜಿ ರೂಪದಲ್ಲಿ ಹೋಗಿ ಶ್ರೀನಿವಾಸನಿಗೆ ಮಗನನ್ನು ಕೊಡು ಎಂದು ಹೇಳಿ ದೇವತೆಗಳನ್ನು ಕರೆಸಿ ಮದುವೆಯನ್ನು ಮಾಡಿಕೊಳ್ಳಲು ಕುಬೇರನ ಬಳಿ ಸಾಲವನ್ನು ಮಾಡಿಕೊಂಡು ಮದುವೆ ಮಾಡುವ ಕತೆಯನ್ನು ಸೊಗಸಾಗಿ ಹೇಳಿದ್ದಾರೆ.
ಭವಿಷ್ಯೋತ್ತರ ಪುರಾಣದಲ್ಲಿ ಮದುವೆಯ ನಂತರ ಆರು ತಿಂಗಳು ಬೆಟ್ಟದ ಕೆಳಗೆ ನೆಲಸಿದ್ದು ಎಲ್ಲವು ಬರುತ್ತದೆ. ಮನೆಯಲ್ಲಿ ವೆಂಕಟೇಶ ಪಾರಿಜಾತವನ್ನು ಹೆಣ್ಣುಮಕ್ಕಳು ಹಾಡುತ್ತಾರೆ, ಪ್ರವಚನವನ್ನು ಹೇಳಿಸುತ್ತಾರೆ. ಟಿಟಿಡಿ ವತಿಯಿಂದ ಮಾಡಿಸುವ ಶ್ರೀನಿವಾಸ ಕಲ್ಯಾಣವನ್ನು ಮಾಡಿಸಿ ಸಂಭ್ರಮಿಸುತ್ತಾರೆ. ಮನೆಯಲ್ಲಿ ಕೂಡ ದೇವರ ಕಲ್ಯಾಣ ಮಾಡಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾರೆ ಎಂಬುದು ಈ ಹೊತ್ತಿನ ವಿಶೇಷ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















