ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವೇದಗಳು ಇಂದು ಯಾವುದೇ ಒಂದು ಗುಂಪಿನ ಸ್ವತ್ತಾಗಿಲ್ಲ. ಪ್ರಪಂಚದಾದ್ಯಂತ ವಿದ್ವಾಂಸರುಗಳು ಅವುಗಳ ಆಂತರ್ಯವನ್ನು ಭೇದಿಸಲು ಪ್ರಯತ್ನಪಟ್ಟಿದ್ದಾರೆ. ವೇದಗಳಲ್ಲಿರುವ ವೈಜ್ಞಾನಿಕ ವಿಷಯಗಳನ್ನು ಆಧುನಿಕ ವಿಜ್ಞಾನ ವಿಷಯಗಳ ದೃಷ್ಟಿಯಿಂದ ವಿಶ್ಲೇಷಿಸಿ ಅವನ್ನು ಒರೆಗಲ್ಲಿಗೆ ಹಚ್ಚಲಾಗಿದೆ (ನೋಡಿ: `History of Science, Philosophy and Culture in Indian Civilzation’ ಸಂಪುಟಗಳು. ಸಂ.ಡಿ.ಪಿ. ಚಟ್ಟೋಪಾಧ್ಯಾಯ).
ನಾವು ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಇಲ್ಲಿಯ ಮೂಲ ಜನಾಂಗಗಳು, ಸಸ್ಯ ಹಾಗೂ ಪ್ರಾಣಿಸಂಪತ್ತು, ಜನರ ಚಲನವಲನಗಳು, ಶಿಲಾಯುಗದ ಕಾಲದಿಂದ ಇಲ್ಲಿಯವರೆಗಾಗಿರುವ ಸಾಮಾಜಿಕ ವಿಕಾಸ, ವಿಭಿನ್ನ ಭಾಷಾ ಸಂಸ್ಕೃತಿಗಳು, ವೈದಿಕ ನಾಗರಿಕತೆ, ಜೈನ, ಬೌದ್ಧ ಧರ್ಮದ ಕಾಣಿಕೆಗಳು, ಹೊಸಧರ್ಮಗಳ ಪ್ರಭಾವ- ಇವೆಲ್ಲವುಗಳ ಕಡೆ ಗಮನ ಹರಿಸಬೇಕು. ಎಷ್ಟೇ ಭಿನ್ನತೆ ವೈವಿಧ್ಯತೆಗಳಿದ್ದರೂ ಭಾರತೀಯ ಸಂಸ್ಕೃತಿಯಲ್ಲಿ ಇನ್ನೂ ಏಕತೆ ಉಳಿದುಕೊಂಡಿದೆ ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ.
ವೇದಗಳ ಕಾಲದಿಂದ ಇಲ್ಲಿಯವರೆಗೂ ಭಾರತದ ಬಹುಪಾಲು ಜನರು ಕೃಷಿಕರೇ. ಗೋವು ಮತ್ತಿತರ ಸಾಕುಪ್ರಾಣಿಗಳು ಇನ್ನೂ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ. ಆಧ್ಯಾತ್ಮ ಭಾರತದ ಹೃದಯವಾಗಿದೆ. ಶ್ರೀಸಾಮಾನ್ಯನ ಜೀವನಧರ್ಮ ಹಾಗೂ ಜಾನಪದದಲ್ಲಿ ವೇದೋಪನಿಷತ್ತುಗಳ ಪರಿಮಳವಿದೆ. (ಯಕ್ಷಗಾನ, ಬಯಲು ನಾಟಕ, ಹರಿಕಥೆಗಳು, ತೀರ್ಥಯಾತ್ರೆಗಳು, ಅತಿಥಿ ಸತ್ಕಾರ, ಸಂಪ್ರದಾಯಗಳು, ನಂಬಿಕೆಗಳು, ಗಾದೆಗಳು ಇತ್ಯಾದಿ) ಯಾವುದೇ ದೇವರಿಗೆ ಮಾಡಿದ ಪೂಜೆಯಾಗಲಿ ಅದು ಒಂದೇ ದೇವರಿಗೆ ಸಲ್ಲುತ್ತದೆಂಬ ನಂಬಿಕೆ. ವೇದಘೋಷಗಳು ಇಂದೂ ಅಲ್ಲಲ್ಲಿ ಕೇಳಿಬರುತ್ತವೆ. ವೃಕ್ಷಪೂಜೆ, ವೃಕ್ಷ ಜಾನಪದಗಳು ಇಂದಿಗೂ ಜೀವಂತವಾಗಿವೆ. ಆದ್ದರಿಂದಲೇ ಎ.ಸಿ. ಬೋಸ್ ಅವರು ಈ ಕೆಳಗಿನಂತೆ ಹೇಳಿದ್ದಾರೆ (ನೋಡಿ ಅನಕೃ, 1962. ‘ಭಾರತೀಯ ಸಂಸ್ಕೃತಿ ದರ್ಶನ): ‘‘ನಮ್ಮ ಸಂಸ್ಕೃತಿಯ ಮೂಲ ನಮ್ಮ ಅಮೃತಮಯವಾದ, ಅಜೇಯ ತತ್ವವಾದ ವೇದಗಳು. ನಮ್ಮ ಸಂಸ್ಕೃತಿಯ ಬೆಳವಣಿಗೆ ಬಂದಿರುವುದು ವೇದಗಳ ನೀತಿಯಲ್ಲಿ ಜೀವಿಸಿದ ನಮ್ಮ ದೇಶದ ಮಹಾನುಭಾವರುಗಳ ಮಹಿಮೆಯಿಂದ.
ವೇದಗಳಲ್ಲಿ ಯಾವುದೇ ಜಾತಿಭೇದಗಳಿಲ್ಲ. ಸ್ತ್ರೀ ಸಮಾನತೆಗೆ ಇವು ಹೆಸರಾಗಿದೆ. ‘ಏಕದೈವತ್ವವನ್ನು ಪ್ರಥಮ ಬಾರಿಗೆ ಪ್ರತಿಪಾದಿಸಿರುವುವು ವೇದಗಳು. ಇಲ್ಲಿ ಕಾಡಿನ ದೇವತೆ ‘ಅರಣ್ಯಾನಿ. ಮರಗಳಿಂದ ಹಿಡಿದು ಜೀವಿಗಳಲ್ಲೂ ದೈವತ್ವವನ್ನು ಕಾಣುವ ಪ್ರಯತ್ನ ಇಲ್ಲಿದೆ. ಪ್ರಾರ್ಥನೆಗಳಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂಬುದಿದೆಯೇ ಹೊರತು ಸ್ವಾರ್ಥವಿಲ್ಲ. (ಅಥರ್ವ ವೇದದ ಕಾಲಕ್ಕೆ ಬಂದಾಗ ಅನೇಕ ಜಾನಪದ ಬದಲಾವಣೆಗಳಿವೆ).
ವೃಕ್ಷ ಪೂಜಾ ಪದ್ಧತಿ, ಮಾನವ ಸಮಾಜದಲ್ಲಿ ಹೇಗೆ ಪ್ರಾರಂಭವಾಯಿತೆಂಬುದನ್ನು ಸರಿಯಾಗಿ ಊಹಿಸುವುದು ಕಷ್ಟವಾಗುತ್ತದೆ. ದೇವಾಲಯಗಳ ಮುಂದೆ ಬೆಳೆಸಿಕೊಂಡವು ಪವಿತ್ರ ವೃಕ್ಷಗಳಾದವೇ? ಪಿತೃ ಸಮಾಧಿಗಳ ಮೇಲೆ ಬೆಳೆಸಿಕೊಂಡವು ಪವಿತ್ರ ವೃಕ್ಷಗಳಾದವೇ? ಅಥವಾ ಆದಿಮಾನವನಿಗೆ ಆಶ್ರಯ, ಹಣ್ಣು ಹಂಪಲುಗಳನ್ನು ಪೂರೈಸಿದ್ದುದರಿಂದಲೋ ಅಥವಾ ಅವುಗಳ ಹೆದರಿಕೆಯಾಗುವಷ್ಟು ಬೃಹದಾಕಾರಗಳು ಅವುಗಳಲ್ಲಿ ದೈವವನ್ನು ಕಾಣಲು ಪ್ರಯತ್ನಿಸುವಂತೆ ಪ್ರೇರೇಪಿಸಿತೋ- ಹೇಳುವುದು ಕಷ್ಟ. ಇವುಗಳ ಬಗ್ಗೆ ಹೆಚ್ಚು ಚರ್ಚಿಸಬಹುದೇ ಹೊರತು, ತೀರ್ಮಾನಗಳನ್ನು ಕೊಡುವುದು ಸುಲಭವಲ್ಲ.
ಒಟ್ಟಿನಲ್ಲಿ ವೇದಗಳ ಕಾಲದಿಂದ ಇಲ್ಲಿಯವರೆಗೂ ಮರಗಳು ಮತ್ತು ಅವುಗಳ ಉತ್ಪನ್ನಗಳು ನಮ್ಮ ಜೀವನ ಹಾಗೂ ಜಾನಪದದಲ್ಲಿ ಹಾಸುಹೊಕ್ಕಾಗಿವೆ.
ಇಂದಿನ ಜಾಗತಿಕ ಉಷ್ಣೀಕರಣ ಹಾಗೂ ಸಸ್ಯಾಗಾರ ಪರಿಣಾಮಕ್ಕೆ (Global warming and Green house effect) ಕಾಡುಗಳು ಹಾಗೂ ಮರಗಳ ವಿನಾಶವೂ ಒಂದು ಕಾರಣ. ವೇದಗಳ ಕಾಲದಿಂದ ಇಲ್ಲಿಯವರೆಗೂ ಜಾತಕರ್ಮ, ಉಪನಯನ, ವಿವಾಹ, ಅಂತ್ಯಸಂಸ್ಕಾರ ಮೊದಲಾದ ಕರ್ಮಗಳಿಗೆ ಮರಗಳ ಭಾಗಗಳು ಮತ್ತು ಅವುಗಳ ಉತ್ಪನ್ನಗಳು ಬೇಕೆಬೇಕು. ವೇದಗಳ ಕಾಲದಲ್ಲಿ ಮನೆ ಕಟ್ಟುವ ಜಾಗದಲ್ಲಿ ಅರಳಿಮರವಿರಬಾರದೆಂಬುದಿತ್ತು. ಗೃಹ ಪ್ರವೇಶವಿತ್ತು. ಋಗ್ವೇದದಲ್ಲಿ 30 ಜಾನಪದ ಕಲೆಗಳನ್ನು ಹೆಸರಿಸಲಾಗಿದೆ. (ಹಾಡು, ಕವಿತೆ, ನೃತ್ಯ, ಗೀತ, ಕೊಳಲೂದುವುದು, ಕೊಂಬು ಊದುವುದು, ಶಂಖನಾದ, ನಗಾರಿ ಬಾರಿಸುವುದು, ಕೋಲಾಟ, ವಾಸ್ತುಶಿಲ್ಪ ಇವು ಮುಖ್ಯವಾದವು (ಹನುಮಂತರಾವ್, 1947).
ನೇಯ್ಗೆ, ಒಡವೆ ತಯಾರಿಕೆ, ಕಸೂತಿ ಕೆಲಸ, ಹೂ ಕಟ್ಟುವುದು. ರಥಗಳ ತಯಾರಿಕೆ, ಹಗ್ಗ ತಯಾರಿಸುವುದು, ಕಮ್ಮಾರ, ಚಮ್ಮಾರ ಹಾಗೂ ಕುಂಬಾರರ ಕಲೆಗಳು, ಬಿಲ್ಲು ತಯಾರಿಸುವುದು (ತಾಳೆ ಮರ ಇಲ್ಲವೇ ಬಿದಿರಿನಿಂದ), ಸಂಗೀತ (ಮೃದಂಗ, ಕೊಳಲು ಮತ್ತು ಕರ್ಕರಿ ಎಂಬ (ತಂತಿವಾದ್ಯ) ಕೊಳಲು-ಬಿದಿರಿನ ವಾಟೆಯಿಂದ, ಮೃದಂಗ ಮರಗಳಿಂದ ತಯಾರಾಗುತ್ತಿತ್ತು. ಯುದ್ಧ ಕಲೆಗಳಲ್ಲಿ ಬಿಲ್ಲು ತಯಾರಿಸುವುದು, ಕುದುರೆ ಪಳಗಿಸುವುದು, ಯಾಗ ಕಾಲದಲ್ಲಿ ಕಥೆಗಳನ್ನು ಹೇಳುತ್ತಿದ್ದುದು, ವಿವಾಹ ಕಾಲದಲ್ಲಿ ನೃತ್ಯ, ಸಂಗೀತ, ಗೂಡಾರ್ಥವಿರುವ ಮಂತ್ರಗಳು, ಬ್ರಹ್ಮೋದ್ಯವೆಂಬ ಒಗಟುಗಳು ಇವೆಲ್ಲಾ ಜಾನಪದ ಅಂಶಗಳೇ. ನಾಟ್ಯ ಮಾಡುವ ಗಂಡಸರು ‘ನೃತ್ಯರು ಹೆಂಗಸರು ‘ನೃತ್ಯಗಳು. ಹಾಸ್ಯರೂಪದ ನೃತ್ಯವೂ (ಹನುಮಂತರಾವ್, 1947) ಒಂದು ಜಾನಪದ ವಿಶೇಷತೆ (ಋ. 10.18.3) ಮರಗಳಿಂದ ಪಡೆದ ಸುರೆಯಪಾನ, ಸೋಮರಸದ ವಿಷಯಗಳು ಸಸ್ಯ ಜಾನಪದ ಅಂಶಗಳೇ. ಇಂದ್ರ ಅತಿಪಾನಿ, ಶಿವ ಸಾವಿರ ಔಷಧಗಳನ್ನು ಬಲ್ಲ ‘ಭೇಷಜ. ಅಂತ್ಯಕ್ರಿಯೆಯಲ್ಲಿ ಗಾಲಿಗಳಿಲ್ಲದ ರಥ (ಚಟ್ಟ) ಉಪಯೋಗಗೊಳ್ಳುತ್ತಿತ್ತು. ಇದು ಬಿದಿರಿನ ಗಳುಗಳಿಂದ ತಯಾರಾಗುತ್ತಿದ್ದವು. ಇಂದಿಗೂ ಈ ಜಾನಪದ ಅಂಶ ಮುಂದುವರೆದಿದೆ.
(ನಾಳೆ: ವೃಕ್ಷಗಳಲ್ಲಿ ದೈವತ್ವವನ್ನು ಕಾಣುವ ಪವಿತ್ರ ಸಂಸ್ಕೃತಿ ನಮ್ಮದು)
Get In Touch With Us info@kalpa.news Whatsapp: 9481252093
Discussion about this post