ಕಲ್ಪ ಮೀಡಿಯಾ ಹೌಸ್ | ಸೊರಬ |
ಇಂದು ನಸುಕಿನ 4.30ರ ವೇಳೆಗೆ ಇಡಿಯ ಪಟ್ಟಣ ಸವಿ ನಿದ್ದೆಯಲ್ಲಿದ್ದರೆ ಮುಖ್ಯರಸ್ತೆ ಹಾಗೂ ವಿವಿಧ ಕಡೆಗಳಲ್ಲಿ ಜೆಸಿಬಿಗಳು ಮಾತ್ರ ಘರ್ಜಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಹೌದು… ಇಂದು ಬೆಳಗಿನ ಜಾವ 4.30ರ ವೇಳೆಗೆ ಪಟ್ಟಣದ ಮುಖ್ಯರಸ್ತೆ ಹಾಗೂ ವಿವಿಧ ಕಡೆಗಳಲ್ಲಿ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಒತ್ತುವರಿಯನ್ನು ತೆರವುಗೊಳಿಸಲಾಯಿತು. ನಸುಕಿನ ನಿದ್ದೆಯಲ್ಲಿದ್ದವರಿಗೆ ಈ ಕಾರ್ಯಾಚರಣೆ ಶಾಕ್ ನೀಡಿದ್ದು, ಒಬ್ಬರಿಂದೊಬ್ಬರಿಗೆ ಸುದ್ದಿ ಹರಡಿ ಜನರು ಜಮಾಯಿಸತೊಡಗಿದ್ದರು.
ಎಲ್ಲೆಲ್ಲಿ, ಏನೆಲ್ಲಾ ಒತ್ತುವರಿ ತೆರವು?
- ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಪುರಸಭೆಯ ಐಡಿಎಸ್’ಎಂಟಿ ವಾಣಿಜ್ಯ ಮಳಿಗೆ ಹಿಂಭಾಗದಲ್ಲಿ ಒತ್ತುವರಿಯಾಗಿದ್ದ ಒಂದು ಮೀಟರ್ ಅಗಲ ಮತ್ತು 50 ಮೀಟರ್ ಉದ್ದದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್
- ಶ್ರೀ ರಂಗನಾಥ ದೇವಸ್ಥಾನ ಸಮೀಪದ ಶ್ರೀ ಉಮಾಮಹೇಶ್ವರ ದೇವಸ್ಥಾನದ ಪಕ್ಕದ 21 ಅಡಿ ಅಗಲ ಮತ್ತು 48 ಅಡಿ ಉದ್ದದ ಪುರಸಭೆಯ ಖಾಲಿ ನಿವೇಶನ
- ಜಂಗಿನಕೊಪ್ಪ ರಸ್ತೆಗೆ ಹೊಂದಿಕೊಂಡಿರುವ 9ನೆಯ ವಾರ್ಡ್’ನ ಕಸಿಮಾವಿನ ಕೊಪ್ಪಲು ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿನ ಪುರಸಭೆಯ 35 ಅಡಿ ಅಗಲ ಮತ್ತು 86 ಅಡಿ ಉದ್ದದ ನಿವೇಶವನ್ನು ಸ್ವಚ್ಛಗೊಳಿಸುವ ಜೊತೆಗೆ ಪುರಸಭೆಯ ಸುಪರ್ಧಿಗೆ ಪಡೆದು, ನಾಮಫಲಕ ಅಳವಡಿಕೆ
ಮುಖ್ಯರಸ್ತೆಯ ಸುರಭಿ ವಾಣಿಜ್ಯ ಸಂಕೀರ್ಣದಲ್ಲಿನ ಬಾಡಿಗೆದಾರರಿಗೆ ಈ ಹಿಂದೆಯೇ ಪುರಸಭೆಯಿಂದ ತಿಳುವಳಿಕೆ ನೋಟಿಸ್ ನೀಡಿ, ಮಳಿಗೆಗಳನ್ನು ಖಾಲಿ ಮಾಡುವಂತೆ ತಿಳಿಸಲಾಗಿತ್ತು. ಕೆಲವು ಬಾಡಿಗೆದಾರರು ಪುರಸಭೆ ನೋಟಿಸ್ ನೀಡಿದ ತರುವಾಯ ಮಳಿಗೆಗಳನ್ನು ಖಾಲಿ ಮಾಡಿದ್ದರು. ಕೆಲವರು ಫುಟ್ಪಾತ್ ಮೇಲಿನ ಶೆಟರ್’ಗಳನ್ನು ತೆರವು ಮಾಡಿರಲಿಲ್ಲ. ಹೀಗಾಗಿ, ಇಂದು ನಸುಕಿನಲ್ಲಿ ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿ ತೆರವು ಕಾರ್ಯ ನಡೆಸಲಾಯಿತು
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post