ಮಹೇಶಸಂಭವ ರುದ್ರದೇವರಿಂದ ಅವತರಿಸಿದ ಗಣಪತಿ; ವ್ಯಾಸಕರುಣಾಪಾತ್ರ ವೇದವ್ಯಾಸದೇವರ ಕರುಣಾಪಾತ್ರ
ಏಕದಂತ -ಏಕದಂತವುಳ್ಳವನು
ಇಭೇಂದ್ರಮುಖ ಆನೆಮುಖವುಳ್ಳವನು
ವಿಘ್ನರಾಜ ವಿಘ್ನನಾಶಕ
ಷಣ್ಮುಖನನುಜ ಷಣ್ಮುಖನ ಅನುಜ
ಚಾರುದೇಷ್ಣಾಹ್ವಯ ಚಾರುದೇಷ್ಣನೆಂಬ ಹೆಸರಿನಿಂದ ಅವತರಿಸಿದ;
ವಿಶ್ವೋಪಾಸಕ ಪರಮಾತ್ಮನ ವಿಶ್ವರೂಪ ಉಪಾಸಕ
ಇಂದುದರ್ಪಹರ ಚಂದ್ರನ ದರ್ಪವನ್ನು ಹೋಗಲಾಡಿಸಿದವನು
ಪಾಶಪಾಣಿ ಪಾಶಧರ
ಮೂಷಿಕಾವವಹನ ಶ್ರೇಷ್ಟವಾದ ಇಲಿಯನ್ನು ವಾಹನವಾಗುಳ್ಳವನು
ರಕ್ತವಾಸದ್ವಯ ವಿಭೂಷಣ ಕೆಂಪುವಸ್ತ್ರ ಉಟ್ಟು, ಕೆಂಪು ವಸ್ತ್ರವನ್ನು ಉತ್ತರೀಯವಾಗಿ ಉಳ್ಳವ
ತಾರಕಾಂತಕನನುಜ ತಾರಕಾಸುರನ ಸಂಹರಿಸಿದ ಷಣ್ಮುಖನ ಅನುಜ
ಏಕವಿಂಶತಿ ಮೋದಕಪ್ರಿಯ 21 ಮೋದಕ ಪ್ರಿಯ
ಪಿನಾಕಿ ಭಾರ್ಯಾತನುಜ ಪಿನಾಕಿಯಾದ ರುದ್ರದೇವರ ಭಾರ್ಯೆಯಾದ ಪಾರ್ವತೀಸುತ
ಪಂಚವಕ್ತ್ರನ ತನಯ ಐದು ಮುಖಗಳುಳ್ಳ ರುದ್ರದೇವರ ಪುತ್ರ
ವಿಘ್ನೇಶ ಭಕ್ತರ ವಿಘ್ನಗಳ ಪರಿಹರಿಸುವ
ಚಾರ್ವಾಂಗ ಮನೋಹರವಾದ ಅಂಗವುಳ್ಳವನೆ
ಉಡುದಾರದಂತೆ ಸೊಂಟಕ್ಕೆ ಗಣಪತಿಯು ಸುತ್ತಿಕೊಂಡ ಸರ್ಪದ ಹೆಸರು ವಿಕಚ
ಪ್ರಶ್ನೆ: ಗಣಪತಿಯು ತಾರತಮ್ಯದಲ್ಲಿ 18ನೇಯವನು. ರುದ್ರದೇವರು 5ನೇ ಕಕ್ಷ್ಯ. ವಿವಿಂದ್ಯ ಮೊದಲಾದ ರುದ್ರದೇವರ ವರದಿಂದ ಉದ್ಧಟರಾದ ರಾಕ್ಷಸರನ್ನು ಚಾರುದೇಷ್ಣನಿಗೆ ಕೊಲ್ಲಲು ಹೇಗೆ ಸಾಧ್ಯವಾಯಿತು?
ಶ್ರೀಹರಿಯು ಚಾರುದೇಷ್ಣನಲ್ಲಿ ವಿಶ್ವಂಭರನಾಮಕನ್ನಗಿ ಅವನಲ್ಲಿದ್ದು, ವಾಯುದೇವರ ವಿಶೇಷ ಆವೇಶ ಚಾರುದೇಷ್ಣನಲ್ಲಿರುವುದರಿಂದ, ವಿವಿಂದ್ಯ ಮೊದಲಾದ ರಾಕ್ಷಸರ ಸಂಹಾರ ಕಾರ್ಯ ಸಾಧ್ಯವಾಯಿತು.
ಪ್ರಶ್ನೆ: ಗಣಪತಿಯ ಕೈಯಲ್ಲಿ ಧರಿಸಿದ ಅಂಕುಶದ ಹೆಸರೇನು ?
ಸ್ವರ್ಪಿತ
ಪ್ರಶ್ನೆ: ಗಣಪತಿಯನ್ನು ಕರ್ಮಸಾಕ್ಷಿಗ ಎಂದೇಕೆ ಪ್ರಯೋಗ ಮಾಡಿದ್ದಾರೆ?
ಗಣಪತಿಯು ಭೂತಾಕಾಶದ ಅಭಿಮಾನಿ. ಭೂತಾಕಾಶವು ಎಲ್ಲ ಕಡೆಗೂ ವ್ಯಾಪ್ತವಾಗಿದೆ. ಅದರಂತೆ ಗಣಪತಿಯೂ ಎಲ್ಲ ಕಡೆ ವ್ಯಾಪ್ತನು. ಆದ್ದರಿಂದ ಎಲ್ಲರೂ ಮಾಡುವ ಸಮಸ್ತ ಕರ್ಮಗಳಿಗೆ ಭೂತಾಕಾಶ ಅಭಿಮಾನಿ ಗಣಪತಿಯು ಸಾಕ್ಷೀಭೂತನಾಗಿರುವನು.
ಪ್ರಶ್ನೆ: ಗಣಪತಿಯು ಶ್ರೀಹರಿಯ ಯಾವ ಪ್ರದೇಶದಲ್ಲಿ ಆಶ್ರಯವನ್ನು ಹೊಂದಿರುವನು ?
ಗಣಪತಿಯು ಶ್ರೀಹರಿಯ ನಾಭೀ ಪ್ರದೇಶದಲ್ಲಿ ಆಶ್ರಯ ಹೊಂದಿರುವನು.
ಪ್ರಶ್ನೆ: ಸರ್ವೋತ್ತಮನಾದ ಶ್ರೀರಾಮಚಂದ್ರನು ಸೇತುಬಂಧನದ ಆರಂಭದಲ್ಲಿ ಗಣಪತಿಯ ಪೂಜೆಯ ಮಾಡಿದುದರ ಉದ್ದೇಶವೇನು ?
ಪರಿವಾರ ದೇವತೆಗಳೆಲ್ಲರೂ ತನ್ನ ಅಧೀನರು, ದೇವತೆಗಳಿಗೆ ವಿಶೇಷ ಸಾಧನೆ ಮಾಡಿಸಲು, ತಾನೇ ಅವರಲ್ಲಿದ್ದು, ಫಲ ಕೊಡುವವನು ಎಂಬುದಾಗಿ ತಿಳಿಸಲು, ಲೋಕ ಶಿಕ್ಷನಾರ್ಥವಾಗಿ, ಪರಿವಾರ ದೇವತೆಗಳಲ್ಲಿ ಒಬ್ಬರಾದ ಗಣಪತಿಯ ಅಂತರ್ಯಾಮಿಯಾದ ತನ್ನನ್ನೇ ಶ್ರೀರಾಮಚಂದ್ರನು ಪೂಜಿಸಿದನು. ಇಲ್ಲಿ ಗಣಪತಿಯು ಶ್ರೇಷ್ಠ ಎಂದಲ್ಲ. ಬೇರೆಲ್ಲರೂ ಗಣಪನನ್ನು ಮೊದಲು ಪೂಜಿಸಲಿ ಎಂದು ಲೋಕಶಿಕ್ಷಣಕ್ಕಾಗಿ ಮಾಡಿದನು.
ಪ್ರಶ್ನೆ: ದುರ್ಯೋಧನಾದಿ ದೈತ್ಯರು, ಗಣಪತಿಯನ್ನು ಯುದ್ಧಾರಂಭದಲ್ಲಿ ಪೂಜಿಸದಿದ್ದುದರ ಪರಿಣಾಮವೇನಾಯಿತು?
ಗಣಪತಿಯನ್ನು ಆರಂಭದಲ್ಲಿ ಪೂಜಿಸದಿದ್ದ ದುರ್ಯೋಧನಾದಿಗಳು ವಾಯ್ವಂಶರಾದ ಭೀಮಸೇನದೇವರಿಂದ ಗದಾ ಹತರಾದರು.
ಪ್ರಶ್ನೆ: ಅರೆಕ್ಷಣವೂ ಬಿಡದೆ ಬೆಂಗಾವಲಾಗಿರಲು, ಗಣಪತಿಯನ್ನು ಏನೆಂದು ಪ್ರಾರ್ಥಿಸಬೇಕು ?
ಸತ್ಕರ್ಮಗಳನ್ನು ಮಾಡುವಾಗ್ಗೆ, ವಿಘ್ನಗಳು ಹಲವು. ಅವುಗಳನ್ನು ಪರಿಹರಿಸಿ, ಭಗವನ್ನಾಮ ಧ್ಯಾನಿಸಲು, ಪೂಜಿಸಲು, ನಮಗೆ ಬೆಂಗಾವಲಾಗಿರಲು ಗಣಪತಿಯನ್ನು ಪ್ರಾರ್ಥಿಸಬೇಕು.
ಶುಕ್ರಶಿಷ್ಯರ ಸಂಹರಿಪುದಕೆ ಶಕ್ರ ನಿನ್ನನು ಪೂಜಿಸಿದನು ಉ
ರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ ಚಕ್ರವರ್ತಿಪ
ಧರ್ಮರಾಜನು ಚಕ್ರಪಾಣಿಯ ನುಡಿಗೆ ಭಜಿಸಿದ ವಕ್ರತುಂಡನೆ
ನಿನ್ನೊಳೆಂತುಂಟೊ ಈಶನುಗ್ರಹವು
ಶುಕ್ರಾಚಾರ್ಯರ ಶಿಷ್ಯರಾದ ದೈತ್ಯರನ್ನು ಸಂಹರಿಸಲು ಶಕ್ರನು ನಿನ್ನನು ಪೂಜಿಸಿ ದೇವೇಂದ್ರನು ಗೆದ್ದನು. ಶ್ರೀ ರಾಮಚಂದ್ರನು ಸೇತುಬಂಧನಾರಂಭದಲ್ಲಿ ಲೋಕಶಿಕ್ಷಣಾರ್ಥವಾಗಿ ನಿನ್ನನ್ನು ಪೂಜಿಸಿದನು. ಚಕ್ರವರ್ತಿ ಧರ್ಮರಾಜನು ನಿನ್ನನ್ನು ಪೂಜಿಸಿ ಕುರುಕ್ಷೇತ್ರದಿ ವಿಜಯಿಯಾದನು. ವಕ್ರತುಂಡನಾದ ಗಣಪನಲ್ಲಿ ಶ್ರೀಹರಿಯ ಅನುಗ್ರಹವು ಬಹಳವಾಗಿದೆ.
ಪ್ರಶ್ನೆ: ಪಾರ್ವತೀ ದೇವಿಯು ತನ್ನ ದೇಹದ ಮಣ್ಣಿನಿಂದ ಗಣಪತಿಯನ್ನು ಸೃಷ್ಟಿಸಿದಳೇ. ಅವಳ ದೇಹದಲ್ಲಿ ಅಷ್ಟೊಂದು ಮಣ್ಣಿತ್ತೇ? ರುದ್ರದೇವರಿಗೆ ಅದು ತಿಳಿದಿರಲಿಲ್ಲವೇ?
ತಾಮಸ ಪುರಾಣವಾದ ಸ್ಕಾಂದ ಪುರಾಣದಲ್ಲಿ ಈ ಉಲ್ಲೇಖ ವಿದೆ. ಆದರೆ ಅದು ಅಸುರ ಜನ ಮೋಹನಾರ್ಥವಾದ ಕಥೆ. ಹಿಂದೆ ದಕ್ಷಪ್ರಜಾಪತಿಯ ಮಗಳು ಸತೀದೇವಿಯಾಗಿದ್ದಾಗ ಅಗ್ನಿಯನ್ನು ಸೃಷ್ಟಿ ಮಾಡಿ ಅಗ್ನಿಪ್ರವೇಶಿಸಿದ್ಧಳು. ಅದೇ ರೀತಿ ಈಗಲೂ ಸೃಷ್ಟಿಸಿದ್ದಾಳೆಂದು ತಿಳಿಯಬೇಕು.
ಉತ್ತಮ ಮಕ್ಕಳನ್ನು ಪಡೆಯಲು ಪಾರ್ವತಿ ಪರಮೇಶ್ವರರನ್ನು ಸೇವಿಸಿ ಪಡೆಯಬೇಕು. ಜಗನ್ನಾಥದಾಸರು ಹರಿಕಥಾಮೃತಸಾರದಲ್ಲಿ ಪಿನಾಕಿ ಭಾರ್ಯಾತನುಜ ಮೃದ್ಭವ ಎಂದಿದ್ದಾರೆ.
ಬ್ರಹ್ಮವೈವರ್ಥ ಪುರಾಣ ರೀತ್ಯಾ ಗಣಪತಿಯು ಜನನ ವೃತ್ತಾಂತ :
ಪಾರ್ವತಿ ತನಗೆ ಮಕ್ಕಳ ಪಡೆಯಲು ಶ್ರೀಹರಿಯ ಕುರಿತು ತಪಗೈದಳು. ಒಮ್ಮೆ ಶಿವಪಾರ್ವತಿಯರು ಏಕಾಂತದಲ್ಲಿರಲು, ಕೆಲವು ಋಷಿಗಳು ಆಗಮಿಸಿದರು. ಪಾರ್ವತಿ ಬಂದು ಋಷಿಗಳಿಗೆ ಆತಿಥ್ಯ ಭಿಕ್ಷೆ ನೀಡಲು ಹೋದಾಗ ಶಿವನ ವೀರ್ಯ ನೆಲದ ಮೇಲೆ ಬಿದ್ದಾಗ ಜನಿಸಿದ ಮಗುವೇ ಗಣಪತಿ.
ಗಣಪತಿಗೆ ಆನೆಮುಖ ಬಂದಿದ್ದು. ಇಲ್ಲಿಯೂ ಎರಡು ಪುರಾಣದಲ್ಲೂ ವ್ಯತ್ಯಾಸವಿದೆ.
ಸ್ಕಾಂದ ಪುರಾಣ ರೀತ್ಯಾ ಪಾರ್ವತಿ ಸ್ನಾನಕ್ಕೆ ಹೋಗುವ ಮುನ್ನ ಗಣಪತಿಯನ್ನು ಬಾಗಿಲಲ್ಲಿ ನಿಲ್ಲಿಸಿ ಹೋಗಿರುತ್ತಾರೆ. ಶಿವ ಬಂದಾಗ ಗಣಪತಿ ತಡೆಯುತ್ತಾನೆ. ಕೋಪಗೊಂಡ ಶಿವನು ಅವನ ತಲೆ ಕಡಿಯಲು, ಪಾರ್ವತಿ ಸ್ನಾನಗೃಹದಿಂದ ಬಂದು ನಡೆದುದನ್ನು ಅರಿತು, ಶಿವನಿಗೆ ಮಗನನ್ನು ಉಳಿಸಲು ಕೋರಲು, ಶಿವನು ತನ್ನ ಮಗನಿಗಾಗಿ ಪರಿತಪಿಸಿದ. ತನ್ನ ಮೃತ್ಯುವಿಗೆ ಯಾರು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿಹರೋ ಅವರು ತಲೆಯ ತನ್ನಿರಿ ಎನ್ನಲು ಉತ್ತರ ದಿಕ್ಕಿಗೆ ಮಲಗಿದ್ದ ಆನೆಯ ತಲೆಯನ್ನು ತರಲು ಶಿವನು ಅದನ್ನು ಗಣಪತಿಗೆ ಜೋಡಿಸಿ ಜೀವತುಂಬಿದನು.
ಲೇಖನ: ನರಹರಿ ಸುಮಧ್ವ
Discussion about this post