ಶಿವಮೊಗ್ಗ: ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ಈಗ ಬೀದಿ ಬೀದಿಗಳಲ್ಲಿ ಪ್ರಚುರಪಡಿಸುವ ಅನಿವಾರ್ಯತೆ ಇದೆ ಎಂದು ದುರ್ಗಿಗುಡಿ ಕನ್ನಡ ಸಂಘದ ಪ್ರಮುಖರಾದ ಸ.ನಾ. ಮೂರ್ತಿ ಹೇಳಿದರು.
ದುರ್ಗಿಗುಡಿಯಲ್ಲಿ ಚೆನ್ನುಡಿ ಬಳಗ, ಉತ್ತಿಷ್ಠ ಭಾರತ, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನಗಳು ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮಾಜಿ ಅವರ ಅಹಿಂಸಾ ತತ್ವ ಅಂದಿನ ದೇಶದ ಜನತೆಯ ಮೇಲೆ ಗಾಢವಾದ ಪರಿಣಾಮ ಬೀರಿದ್ದಲ್ಲದೆ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಪ್ರಮುಖ ಅಸ್ರ್ತವಾಯಿತು ಎಂದ ಅವರು ಗಾಂಧೀಜಿ ಅವರ ಅವಧಿಯಲ್ಲಿಯೇ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್, ವೀರ ಸಾವರಕರ ಅವರ ತ್ಯಾಗ ಬಲಿದಾನಗಳೂ ಮೇಳೈಸಿವೆ ಎಂದು ಅವರು ತಿಳಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರೀ ಅವರು ತಮ್ಮ ಸರಳ, ಸಜ್ಜನಿಕೆಯಿಂದ ದೇಶದಲ್ಲಿ ವಿಶಿಷ್ಟ ಆರ್ಥಿಕ ಶಿಸ್ತನ್ನು ತರುವ ಪ್ರಯತ್ನ ಮಾಡಿದರಲ್ಲದೆ ಗಡಿಯಲ್ಲಿ ಕಾಯುವ ಸೈನಿಕರಿಗೆ ಮತ್ತು ದೇಶದ ಬೆನ್ನೆಲುಬಾದ ರೈತರಿಗೆ ಗೌರವವನ್ನು ನೀಡುವುದರ ಮೂಲಕ ಇಡೀ ದೇಶದ ಪ್ರಜೆಗಳ ಪ್ರೀತಿಗೆ ಪಾತ್ರರಾಗಿದ್ದರು. ಶಾಸ್ರ್ರೀಜಿ ಅವರ ಆದರ್ಶಗಳೂ ಇಂದು ಪ್ರಸ್ತುತವಾಗಿವೆ ಎಂದರು.
ಪರಿಸರ ರಮೇಶ್, ಶಿವಮೊಗ್ಗ ನಂದನ್, ಬಿಜೆಪಿ ಶಕ್ತಿ ಕೇಂದ್ರದ ಜಾದವ್ ಮೊದಲಾದವರು ಸಾಂದರ್ಭಿಕವಾಗಿ ಮಾತನಾಡಿದರು.
ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬಾಲಕೃಷ್ಣ ನಾಯ್ಡು, ಅಜೇಯಕುಮಾರ್ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್ ಮಂಜುನಾಥ ಭಟ್ ಪ್ರಾರ್ಥಮೆ ಜಾಡೊದರಿ. ತ್ಯಾಗರಾಜ ಮಿತ್ಯಾಂತ ವಂದಿಸಿದರು.
Discussion about this post