ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಜೀವ- ದೇವಾದ್ವೈತಕ್ಕೆ ಪೀಠಿಕೆಯಾಗಿ ಜೀವ- ಜೀವಗಳ ನಡುವಿನ ಅದ್ವೈತದ ಪ್ರತೀಕವೇ ಮಹಾಮಂಡಲೋತ್ಸವ. ಪ್ರತಿಭಾ ಪ್ರದರ್ಶನಕ್ಕೆ ಇದು ವೇದಿಕೆ. ನಮಗೆ ನಮ್ಮ ಅಂತರಂಗದ ಪ್ರತಿಭೆಯನ್ನು ತೋರಿಸಿಕೊಡುವ ವೇದಿಕೆ ಎಂದು ಶ್ರೀಮಜ್ಜಗದ್ಗುರು. ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಮೂರು ದಿನಗಳ ಕಾಲ ನಡೆದ ಹವ್ಯಕ ಮಹಾಮಂಡಲೋತ್ಸವ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.

ಶಕಟಪುರ ಶ್ರೀಗಳ ಜತೆಗಿನ ಆತ್ಮೀಯ ಸಂಬಂಧವನ್ನು ಮೆಲುಕು ಹಾಕಿದ ಶ್ರೀಗಳು, ಹಲವು ಯತಿಗಳ ಜತೆ ಸಂವಾದ, ಭಾವಾದ್ವೈತ ನಡೆದರೂ, ಶಕಟಪುರ ಸ್ವಾಮೀಜಿಯವರ ಜತೆಗಿನ ಸಮಾಗಮ ಅವಿಸ್ಮರಣೀಯ. ಇದು ಮಠ, ಯತಿಗಳು ಮತ್ತು ಶಿಷ್ಯರ ನಡುವಿನ ಅದ್ವೈತ ಎಂದು ವಿಶ್ಲೇಷಿಸಿದರು. ವೃಷ ಎಂದರೆ ಧರ್ಮಸ್ವರೂಪ. ಇದನ್ನು ಧರ್ಮದ ಪ್ರತೀಕವಾಗಿ ಕೊಡುಗೆಯಾಗಿ ನೀಡಿದ್ದೇವೆ. ಸ್ವತ್ತುಗಳಿಗಿಂತ ಸಂಬಂಧ ದೊಡ್ಡದು. ಸಂಬಂಧ ಜೀವಚೈತನ್ಯವನ್ನು ಹೊಂದಿರಬೇಕು. ಸ್ವತ್ತುಗಳು ನಿರ್ಜೀವ ಎಂದು ವಿವರಿಸಿದರು.
ಶಕಟಪುರ ಶ್ರೀಗಳ ಗೌರವಾರ್ಥವಾಗಿ ಸುವರ್ಣ ಮಂಟಪ ಸೇವೆಯನ್ನು ನೆರವೇರಿಸಲಾಗುತ್ತಿದೆ ಎಂದರು.

ಪಾಂಡಿತ್ಯ ಎಷ್ಟಿದ್ದರೂ ಗುರುಭಕ್ತಿ ಇಲ್ಲದಿದ್ದರೆ ಏನೂ ಪ್ರಯೋಜನವಿಲ್ಲ ಎಂದು ಆಚಾರ್ಯ ಪದ್ಮಪಾದಾಚಾರ್ಯರು ಜಗತ್ತಿಗೆ ತೋರಿಸಿಕೊಟ್ಟರು. ಹಸ್ತಾಮಲಕಾರ್ಯರು ಯೋಗಶಾಸ್ತ್ರಕ್ಕಿಂತ ಜ್ಞಾನಮಾರ್ಗ ಶ್ರೇಷ್ಠ ಎನ್ನುವುದನ್ನು ವಿಶ್ವಕ್ಕೆ ತೋರಿಸಿಕೊಟ್ಟರು. ಗುರುಭಕ್ತಿಯಿಂದ ಜ್ಞಾನ ಪಡೆಯಬಹುದು ಎಂಬುದನ್ನು ಸಾಧಿಸಿ ತೋರಿಸಿದವರು ತೋಟಕಾಚಾರ್ಯರು. ಆಚಾರ್ಯರ ವಯೋವೃದ್ಧ, ಜ್ಞಾನವೃದ್ಧ ಶಿಷ್ಯರು ಸುರೇಶ್ವರಾಚಾರ್ಯರು. ಕರ್ಮಮಾರ್ಗ ತ್ಯಾಗ ಮಾಡಿದಾಗ ಜ್ಞಾನ ಪ್ರಾಪ್ತಿಯಾಗುತ್ತದೆ ಎನ್ನುವುದನ್ನು ತೋರಿಸಿದವರು ಇವರು ಎಂದು ಬಣ್ಣಿಸಿದರು.
ಹನ್ನೆರಡು ವರ್ಷಗಳ ಹಿಂದೆ ಶ್ರೀರಾಮಚಂದ್ರಾಪುರ ಮಠ ಮತ್ತು ಶಕಟಪುರಿಯ ನಡುವೆ ಅವಿನಾಭಾವ ಸಂಬಂಧ ಏರ್ಪಟ್ಟಿತು. ಉಭಯ ಮಠಗಳ ಸ್ನೇಹಸಂಬಂಧ ಸ್ಥಿರವಾದದ್ದು. ಯಾರೂ ಬಿಡಿಸಲಾಗದಂಥದ್ದು. ಅಮೂಲ್ಯ, ಅನಘ್ರ್ನ ಸ್ನೇಹವನ್ನು ಹನ್ನೆರಡು ವರ್ಷಗಳ ಕಾಲ ಪ್ರತೀಕ್ಷೆ ನಡೆಸಿ ಪಡೆದಂಥದ್ದು ಎಂದು ಹೇಳಿದರು.

ಕ್ರೀಡೆ ಎನ್ನುವುದು ಮಿನಿ ಯುದ್ಧ; ಆದರೆ ಯುದ್ಧ ಸಂಬಂಧಗಳನ್ನು ಕೆಡಿಸಿದರೆ ಕ್ರೀಡೆ ಸಂಬಂಧಗಳನ್ನು ಬೆಸೆಯುವಂಥದ್ದು ಎಂದು ಹವ್ಯಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಅಭಿಪ್ರಾಯಪಟ್ಟರು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ 700ಕ್ಕೂ ಹೆಚ್ಚು ಮಂದಿ ಕ್ರೀಡಾ ಹಾಗೂ ಬೌದ್ಧಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post