ಗೋಕರ್ಣ: ದೇಶದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆ ಸುಪ್ರೀಂ ಕೋರ್ಟ್ ಆದೇಶವನ್ನೇ ರಾಜಕೀಯ ಒತ್ತಡ ಮೀರಿಸುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ಅಕ್ಟೋಬರ್ 6ರಂದು ರಂದು ತಾಲೂಕು ಅಧಿಕಾರಿಗಳಿಗೆ ಗೋಕರ್ಣ ಮಹಾಬಲೇಶ್ವರ ದೇವಾಲಯದ ಸಮಗ್ರ ಆಡಳಿತವನ್ನು ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವಂತೆ ಸೂಚಿಸಿತ್ತು. ಆ ಆದೇಶದ ಮೇರೆಗೆ ದೇವಾಲಯದ ನಿರ್ವಹಣಾಧಿಕಾರ ಇಂದು ಬೆಳಗ್ಗೆ ಶ್ರೀಮಠಕ್ಕೆ ಹಸ್ತಾಂತರವಾಗುತ್ತಿತ್ತು, ಆದರೆ ರಾಜಕೀಯ ಒತ್ತಡದ ಕಾರಣದಿಂದಾಗಿ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸರ್ಕಾರಿ ವ್ಯವಸ್ಥೆಯ ದುರ್ಬಳಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ಗೋಕರ್ಣ ದೇವಾಲಯವನ್ನು ಶ್ರೀಮಠಕ್ಕೆ ಹಸ್ತಾಂತರಿಸಿ, ವರದಿ ನೀಡುವಂತೆ ಕುಮಟಾ ತಾಲೂಕು ಆಯುಕ್ತರಿಗೆ ಆದೇಶಿಸಿದ್ದು, ಅದರ ಅನ್ವಯ ಅಕ್ಟೋಬರ್ 8ರಂದು ಕುಮಟಾ ತಾಲೂಕು ಅಧಿಕಾರಿಗಳು ಶ್ರೀಮಠದ ಜಿ.ಕೆ. ಹೆಗಡೆಯವರಿಗೆ ಪತ್ರ ಬರೆದು ಅಕ್ಟೋಬರ್ 9ರಂದು ಬೆಳಗ್ಗೆ 10 ಗಂಟೆಗೆ ಹಸ್ತಾಂತರ ಮಾಡುತ್ತೇವೆ ಸಿದ್ಧರಾಗಿರಿ ಎಂದು ತಿಳಿಸಿದ್ದರು.
ಅದರಂತೆ, ಇಂದು ಬೆಳಗ್ಗೆ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿತ್ತು. ದೇವರ ಆಭರಣಗಳನ್ನು ಮಾಪನ ಮಾಡಿ ಹಸ್ತಾಂತರಿಸಲಾಗಿತ್ತು. ಈ ಮಧ್ಯೆ ಬಂದ ದೂರವಾಣಿ ಕರೆಯ ಆದೇಶದ ಮೇರೆಗೆ ಪ್ರಕ್ರಿಯೆಯನ್ನು ಅಧಿಕಾರಿಗಳು ಮಧ್ಯದಲ್ಲಿಯೇ ನಿಲ್ಲಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶ, ಅದನ್ನು ಅನುಸರಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ, ಕುಮಟಾ ತಾಲೂಕು ಅಧಿಕಾರಿಗಳಿಂದ ಹಸ್ತಾಂತರ ಪತ್ರ ಇವೆಲ್ಲವುಗಳು ಇದ್ದರೂ, ನ್ಯಾಯಬದ್ಧವಾಗಿ ನಡೆದಿದ್ದ ಹಸ್ತಾಂತರ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ. ಇದನ್ನು ಗಮನಿಸಿದಾಗ ರಾಜಕೀಯ ಒತ್ತಡ ಸುಪ್ರೀಂ ಕೋರ್ಟಿನ ಆದೇಶಕ್ಕಿಂತ ಮಿಗಿಲಾಯಿತೇ? ಸರ್ಕಾರೀ ವ್ಯವಸ್ಥೆಯನ್ನು ಹೀಗೂ ದುರ್ಬಳಕೆ ಮಾಡಿಕೊಳ್ಳಬಹುದೇ? ಎಂಬಿತ್ಯಾದಿ ಪ್ರಶ್ನೆ ಉದ್ಭವವಾಗುತ್ತವೆ ಎಂದು ಶ್ರೀಮಠ ಅನುಮಾನ ವ್ಯಕ್ತಪಡಿಸಿದೆ.
Discussion about this post