ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಹಾಲು ಉತ್ಪಾದಕರ ಸಹಕಾರ ಸಂಘಗಳು ಗುಣಮಟ್ಟದ ಹಾಲನ್ನು ಪಡೆದು ರೈತರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ಮೂಲಕ ಅವರ ಬದುಕಿಗೆ ಆಸರೆಯಾಗಬೇಕಾಗಿದೆ ಎಂದು ಕೋಚಿಮುಲ್ ನಿರ್ದೇಶಕರಾದ ಜೆ. ಕಾಂತರಾಜು ತಿಳಿಸಿದರು.
ನಗರದ ಹೊರವಲಯದಲ್ಲಿರುವ ಕೋಚಿಮುಲ್ ಹಾಲು ಒಕ್ಕೂಟದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪ್ರೋತ್ಸಾಹ ಧನದ ಚೆಕ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಾಲು ಒಕ್ಕೂಟದಲ್ಲಿ ಪ್ರತೀ ವರ್ಷವೂ ದತ್ತಿ ನಿಧಿಯಲ್ಲಿ ಗ್ರಾಮೀಣ ಭಾಗದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುವುದು. ಆಕಸ್ಮಿಕವಾಗಿ ಮರಣ ಹೊಂದಿದ ರಾಸುಗಳನ್ನು ಹೊಂದಿದ್ದ ರೈತರಿಗೆ ಹಾಗೂ ಅಪಘಾತದಲ್ಲಿ ಮೃತರಾದವರ ಕುಟುಂಬಗಳಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಒಕ್ಕೂಟವು ಕೇವಲ ಲಾಭಾಂಶವನ್ನು ನಿರೀಕ್ಷಿಸುವುದಲ್ಲದೆ, ಅದನ್ನು ಉಪಯುಕ್ತ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೋಚಿಮುಲ್ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಸುನಿಲ್, ಒಕ್ಕೂಟವು ಹಾಲು ಉತ್ಪಾದಕರಿಗೆ ಹಾಗೂ ರೈತರಿಗೆ ಬೆನ್ನೆಲುಬಾಗಿದ್ದು, ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಒಕ್ಕೂಟದ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ. ಸರ್ಕಾರ ಹಾಗೂ ಒಕ್ಕೂಟವು ಹೈನೋಧ್ಯಮವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಹಾಲಿನ ಪ್ರೋತ್ಸಾಹ ಧನವನ್ನು ಹೆಚ್ಚುವರಿ ಮಾಡಲಾಗಿದೆ. ಗ್ರಾಮೀಣ ಭಾಗದ ಸಾಕಷ್ಟು ಕುಟುಂಬಗಳಿಗೆ ಆಸರೆಯಾಗಿರುವ ಹೈನುಗಾರಿಕೆಯನ್ನು ಬಲಪಡಿಸಿದಲ್ಲಿ ಎಲ್ಲರೂ ಒಮ್ಮತದಿಂದ ಸಹಕಾರ ನೋಡಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಒಕ್ಕೂಟದ ದತ್ತಿ ನಿಧಿಯಲ್ಲಿ ಎಸ್’ಎಸ್’ಎಲ್’ಸಿ, ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ ರೈತರ ಮಕ್ಕಳಿಗೆ ಪ್ರೋತ್ಸಾಹ ಧನ, ರಾಸುಗಳ ವಿಮಾ ಹಣದ ಚೆಕ್’ಗಳನ್ನು ಹಾಗೂ ಅಪಘಾತದಲ್ಲಿ ನಿಧನ ಹೊಂದಿದ ಕುಟುಂಬದವರಿಗೆ ಚೆಕ್ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸ್ಥಳೀಯ ್ಸಮಸ್ಯೆಗಳ ಬಗ್ಗೆ ಉಪವ್ಯವಸ್ಥಾಪಕರ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ಮಹಿಳಾ ನಿರ್ದೇಶಕರಾದ ಸುನಂದಮ್ಮ, ಮೆಗಾ ಡೈರಿಯ ಉಪವ್ಯವಸ್ಥಾಪಕರಾದ ಹನುಮಂತಪ್ಪ, ತಾಲೂಕಿನ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಗಜರಾಜ್, ಮುಖಂಡರಾದ ನಾರಾಯಣಸ್ವಾಮಿ, ಎ. ಬಾಲಕೃಷ್ಣ ಹಾಗೂ ತಾಲೂಕಿನ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ರೈತರ ಸಂಕಷ್ಟಗಳಿಗೆ ಒಕ್ಕೂಟ ಸ್ಪಂಧಿಸಲಿ
ಇದೇ ಸಂದರ್ಭದಲ್ಲಿ ನಂಜಯ್ಯಗಾರಹಳ್ಳಿ ಹಾಲು ಒಕ್ಕೂಟದ ಅಧ್ಯಕ್ಷರಾದ ರಾಮಕೃಷ್ಣಾ ರೆಡ್ಡಿ ಮಾತನಾಡಿ, ಈ ಭಾಗದಲ್ಲಿ ಅಂತರ್ಜಲದ ಮಟ್ಟ ಕುಸಿದಿರುವ ಪರಿಣಾಮ ಜನ ಜಾನುವಾರುಗಳಿಗೆ ನೀರು ಮತ್ತು ಆಹಾರದ ತೀವ್ರ ಅಭಾವ ಏರ್ಪಟ್ಟಿದೆ. ಆದ್ದರಿಂದ ರೈತರ ಅನುಕೂಲಕ್ಕಾಗಿ ಹಾಲಿನ ಪ್ರೋತ್ಸಾಹ ದರವನ್ನು ಹೆಚ್ಚಳ ಮಾಡಿ ನೇರವಾಗಿ ರೈತರ ಖಾತೆಗೆ ಜಮಾ ಆಗುವಂತೆ ಮಾಡಬೇಕಾಗಿದೆ. ಇದರಿಂದ ಗ್ರಾಮೀಣ ಭಾಗದಿಂದ ರೈತಾಪಿ ವರ್ಗದವರ ಜೀವನವನ್ನು ಸುಧಾರಣೆ ಮಾಡಲು ಸಹಕಾರಿಯಾಗುತ್ತದೆ. ಹೈನೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರ ಮತ್ತು ಒಕ್ಕೂಟದ ಮೇಲೆ ಒತ್ತಡ ಹೇರಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post