ಗೌರಿಬಿದನೂರು: ಲೋಕ ಕಲ್ಯಾಣಕ್ಕಾಗಿ ಆದಿಪರಾಶಕ್ತಿ ವಾಸವೀ ಕನ್ಯಕಾಪರಮೇಶ್ವರಿ ದೇವಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಬೇಕು ಎಂದು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎ.ಎನ್. ರಾಜಣ್ಣ ಕರೆ ನೀಡಿದರು.
ನಗರದ ವಾಸವೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವೀ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ದೇವಸ್ಥಾನಗಳು ಪ್ರತೀ ಸಮುದಾಯದ ಸಂಘಟನಾ ಕೇಂದ್ರಗಳಾಗಿದ್ದು, ಪ್ರತಿ ನಿತ್ಯವೂ ಹತ್ತು ನಿಮಿಷಗಳ ಕಾಲವಾದರೂ ದೇವಸ್ಥಾನಗಳಿಗೆ ತೆರಳುವಂತಹ ಪದ್ಧತಿಯನ್ನು ನಾವು ರೂಡಿಸಿಕೊಳ್ಳಬೇಕಾಗಿದೆ. ಆದರೆ ಇಂದಿನ ವೇಗಾತ್ಮಕವಾದ ಜೀವನದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕನಿಷ್ಟ ವಾರಕ್ಕೆ ಒಮ್ಮೆಯಾದರೂ ದೇವಸ್ಥಾನಕ್ಕೆ ಹೋಗಲೇಬೇಕು ಎಂಬ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಾಗಿದೆ ‘ ಎಂದರು.
ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಬಿ.ಆರ್. ಶ್ರೀನಿವಾಸ ಮೂರ್ತಿ ಮಾತನಾಡಿ, ‘ನಮ್ಮಲ್ಲಿರುವ ಭಕ್ತಿ ಭಾವವನ್ನು ಮೂರ್ತ ರೂಪದಲ್ಲಿ ಕಾಣುವುದಕ್ಕಾಗಿಯೇ ಇಂದು ವೈಭವಯುತವಾಗಿ ವಾಸವೀ ಜಯಂತಿಯನ್ನು ಆಚರಿಸುತ್ತಿದ್ದೇವೆ. ಪ್ರತಿ ದಿನ ದೇವಿಗೆ ಹೊಸ ಸೀರೆಯನ್ನು ಉಡಿಸಬೇಕೆಂಬ ಸಂಕಲ್ಪವನ್ನು ನಾವು ಮಾಡಿದ್ದು, ಇಂದು ಭಕ್ತಾದಿಗಳ ಸಹಕಾರದಿಂದ ವರ್ಷದ ಮುನ್ನೂರ ಅರವತೈದು ದಿನವೂ ಹೊಸ ಸೀರೆಯನ್ನು ಉಡಿಸುತ್ತಿದ್ದೇವೆ ‘ ಎಂದರು.
ಆರ್ಯವೈಶ್ಯ ಮಂಡಳಿಯ ವತಿಯಿಂದ ವಿದ್ಯಾರ್ಥಿಗಳಿಗೆ ನೆರವಾಗುವಂತಹ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು, ಇವುಗಳನ್ನು ಫಲಾನುಭವಿಗಳು ಸದ್ಭಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ವಾಸವೀ ಜಯಂತಿಯ ಪ್ರಯುಕ್ತ ದೇವಿಗೆ ಬಂಗಾರದ ಸೀರೆಯನ್ನು ಉಡಿಸಿ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಇಡೀ ದೇವಸ್ಥಾನವು ನವವಧುವಿನಂತೆ ನಯನ ಮನೋಹರವಾಗಿ ಕಂಗೊಳಿಸುತ್ತಿತ್ತು.
ಬೆಂಗಳೂರಿನ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದಿಂದ ಬಂದಿದ್ದ ಆಗಮಿಕರು ದೇವಿಗೆ ವಿಶೇಷವಾದ ಆರತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮೂರು ದಿನಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ರಕ್ತದಾನ ಶಿಬಿರ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೇರಿದಂತೆ ರಾತ್ರಿ ವಿಶೇಷವಾದ ಮುತ್ತಿನ ಪಲ್ಲಕಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ವಾಸವೀ ದೇವಿಯ ಮೆರವಣಿಗೆಯನ್ನೂ ನಡೆಸಲಾಯಿತು.
ವಾಸವೀ ಜಯಂತಿಯ ಹಿನ್ನಲೆಯಲ್ಲಿ ನಗರದ ಎಲ್ಲಾ ವೈಶ್ಯ ಜನಾಂಗದ ಬಂದುಗಳೂ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಒಂದು ರೀತಿಯಲ್ಲಿ ಅಘೋಷಿತ ಬಂದ್ ಏರ್ಪಟ್ಟಿತ್ತು.
ಈ ಸಂದರ್ಭದಲ್ಲಿ ಮುಖಂಡರಾದ ರತ್ನಯ್ಯ ಶೆಟ್ಟಿ, ರಾಜೇಂದ್ರ ಪ್ರಸಾದ್, ಇ.ಎಸ್.ಸತೀಶ್ ಕುಮಾರ್, ವಾಸವೀ ಯುವಜನ ಸಂಘ, ವಾಸವೀ ಮಹಿಳಾ ಮಂಡಳಿ, ಆರ್ಯಪುತ್ರಿ ಮಂಡಳಿ, ವಾಸವೀ ವನಿತಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
(ವರದಿ: ಅಜಯ್ ಬಿ.ಎಂ., ಗೌರಿಬಿದನೂರು)
Discussion about this post