ಕಲ್ಪ ಮೀಡಿಯಾ ಹೌಸ್
ಹಾಸನ: ಯಾರಿಗೆ ಸಿಎಂ ಕುರ್ಚಿ ಎಂಬ ವಿಚಾರದಲ್ಲೇ ಆಂತರಿಕ ಜಗಳದಲ್ಲಿ ತಲ್ಲೀನವಾಗಿರುವ ಕಾಂಗ್ರೆಸ್ ಪಕ್ಷ ಮುಂದಿನ 20 ವರ್ಷಗಳ ವರೆಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ .
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು ಪಕ್ಷದಲ್ಲಿ ಸಮನ್ವಯತೆ ಇಲ್ಲ, ಪಕ್ಷದ ರೈಲು ಇನ್ನೂ ಟ್ರ್ಯಾಕ್ ಗೆ ಇಳಿದಿಲ್ಲ… ಕೇಂದ್ರದಲ್ಲೂ ಸಹ ಸಮರ್ಥ ವಿರೋಧ ಪಕ್ಷದ ನಾಯಕರು ಇಲ್ಲದೆ ತಬ್ಬಿಬ್ಬಾಗಿದೆ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ನಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಜಾತಿ ರಾಜಕೀಯದಲ್ಲಿ ತೊಡಗಿರುವ ಪಕ್ಷದಲ್ಲಿ ಸಂವಿಧಾನ ಬದಲಾವಣೆ ಮೂಲಕ ಜಾತಿಗೊಂದರಂತೆ ಸಿಎಂ ಕುರ್ಚಿಯನ್ನು ಸೃಷ್ಟಿ ಮಾಡಬೇಕು ಅಷ್ಟೇ… ಅದು ಸಹ ಕಷ್ಟ ಸಾಧ್ಯ ಆದ್ದರಿಂದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸುಳ್ಳು ಎಂದು ಹೇಳಿದರು.
ಎರಡು ವರ್ಷ ಬಿಎಸ್ ವೈ ಸಿಎಂ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿರುವ ಯಡಿಯೂರಪ್ಪ ಅವರು ಮುಂದಿನ ಮೂರನೇ ಅಲೆಯನ್ನು ಸಹ ಅವರ ನೇತೃತ್ವದಲ್ಲಿಯೇ ನಿರ್ವಹಣೆ ಮಾಡಲಾಗುವುದು ಹಾಗೂ 2 ವರ್ಷದವರೆಗೆ ಸಿಎಂ ಬದಲಾವಣೆ ಪ್ರಶ್ನೆ ಇಲ್ಲ ಎಂದು ಪುನರುಚ್ಚರಿಸಿದರು.
ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೊರೋನ ಹಾವಳಿ ಹೆಚ್ಚಿದ್ದ ಸಂದರ್ಭದಲ್ಲಿಯೂ ಸಹ ಮನೆಯಲ್ಲಿ ಕೂರದೆ ಹೊರಬಂದು ಜನರ ಸಂಕಷ್ಟವನ್ನು ಆಲಿಸಿದ್ದಾರೆ ಆದರೆ ನೆರೆ ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ಯಡಿಯೂರಪ್ಪ ಅವರ ರೀತಿ ಕಾರ್ಯನಿರ್ವಹಿಸಿಲ್ಲ ಎಂದು ಟೀಕಿಸಿದ ಅವರು ಯಡಿಯೂರಪ್ಪ ಅವರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜುಲೈ 5 ಬಳಿಕೆ ಲಾಕ್ ಡೌನ್ ಇನ್ನಷ್ಟು ಸಡಿಲ
ರಾಜ್ಯದಲ್ಲಿ ಜುಲೈ 5 ರಿಂದ ಇನ್ನಷ್ಟು ಲಾಕ್ಡೌನ್ ಸಡಿಲ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಜನರು ವ್ಯಾಪಾರ-ವಹಿವಾಟು ಇಲ್ಲದೆ ಸಂಕಷ್ಟದಲ್ಲಿರುವ ಕಾರಣ ಜುಲೈ ಐದರ ಮುಂಚಿತವಾಗಿಯೇ ಲಾಕ್ಡೌನ್ ಸಡಿಲಿಸುವ ಬಗ್ಗೆ ಮುನ್ಸೂಚನೆ ನೀಡಿದರು.
ಕರ್ನಾಟಕ ಕಾಂಗ್ರೆಸ್ ನಲ್ಲಿ ಬಂಡಾಯ ಏಳುವ ಸ್ಥಿತಿ ನಿರ್ಮಾಣವಾಗಿದೆ ಹಲವಾರು ಕಾಂಗ್ರೆಸ್ಸಿಗರು ಚುನಾವಣೆ ಒಂದು ವರ್ಷ ಇದ್ದಹಾಗೆ ಬಿಜೆಪಿಗೆ ಬರಲಿದ್ದಾರೆ ಎಂದ ಅವರು ಕಾಂಗ್ರೆಸ್ ಪಕ್ಷದಿಂದ 15 ಮಂದಿಯನ್ನು ನಾವು ಕರೆದುಕೊಂಡು ಬಂದಿದ್ದೇವೆ ಈ ಮೂಲಕ ನಮ್ಮ ಶಕ್ತಿಪ್ರದರ್ಶನ ಮಾಡಿದ್ದು ಅವರು ಬಿಜೆಪಿಯಿಂದ ಎಷ್ಟುಮಂದಿ ಕರೆದುಕೊಂಡು ಹೋಗುತ್ತಾರೆ ಕಾದು ನೋಡುವ ಎಂದು ತಿರುಗೇಟು ನೀಡಿದರು.
ಬಿಜೆಪಿ ಸರಕಾರದ ಬಗ್ಗೆ ಸ್ವಪಕ್ಷದ ಎಚ್.ವಿಶ್ವನಾಥ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಪಕ್ಷದ ಬಗ್ಗೆ ಸರ್ಕಾರದ ಬಗ್ಗೆ ಮಾತನಾಡಬಾರದು ಎಂದು ರಾಜ್ಯಕ್ಕೆ ಭೇಟಿ ನೀಡಿದ ಉಸ್ತುವಾರಿ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.
ಸಿ.ಪಿ. ಯೋಗೇಶ್ವರ್ ಅವರು ಎಕ್ಸಾಮ್ ಬರೆದಿದ್ದು ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶೋಕ್ ನಾನು ಅವರ ಸ್ಟೇಟ್ಮೆಂಟ್ ನೋಡಿಲ್ಲ ಹೀಗಾಗಿ ಅದರ ಬಗ್ಗೆ ಏನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post