ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಮಾತ್ರವಲ್ಲ ರಾಷ್ಟ್ರದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಿಜಾಬ್ ವಿವಾದದ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ.
ಇಂದು ಮುಂಜಾನೆಯಿಂದ ಸುಧೀರ್ಘ ಸಮಯದವರೆಗೂ ವಿಚಾರಣೆ ನಡೆಸಿದ ನ್ಯಾಯಪೀಠ ವಾದ-ಪ್ರತಿವಾದವನ್ನು ಆಲಿಸಿದೆ. ಇಂದು ಅಂತಿಮವಾಗಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದ್ದು, ವಾದ ಮಂಡಿಸುವಂತೆ ವಕೀಲರಿಗೆ ಸೂಚಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದೇನು?
ನಮಗೆ ಸಂವಿಧಾನವೇ ಭಗವದ್ಗೀತೆಯಾಗಿದ್ದು, ಪ್ರಮಾಣ ಮಾಡಿರುವಂತೆ ಸಂವಿಧಾನ ಏನು ಹೇಳಿದೆಯೋ ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿದರು.
ಹಿಜಾಬ್ ವಿವಾದದ ಅರ್ಜಿ ವಿಚಾರಣೆ ನಡೆಸಿದ ವೇಳೆ ಮಾತನಾಡಿರುವ ಅವರು, ಭಾವನೆಗಳನ್ನು ಪಕ್ಕಕ್ಕಿಡಿ, ಹಿಜಾಬ್ ಭಾವನಾತ್ಮಕ ವಿಚಾರವಾಗಬಾರದು ಎಂದಿದ್ದಾರೆ.ಇನ್ನು, ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪರೀಕ್ಷೆಗೆ ಎರಡು ತಿಂಗಳಿರುವ ವೇಳೆ ಅನಾವಶ್ಯಕ ವಿವಾದ ಸೃಷ್ಠಿಸಲಾಗುತ್ತಿದೆ. ಮೊದಲಿನಿಂದಲೂ ಹಿಜಾಬ್ ಧರಿಸಿ ತರಗತಿಗೆ ವಿದ್ಯಾರ್ಥಿನಿಯರು ತೆರಳುತ್ತಿದ್ದರು. ಆದರೆ, ವಿವಾದ ಭುಗಿಲೆದ್ದ ನಂತರ ತರಗತಿಗಳಲ್ಲಿ ಹಿಜಾಬನ್ನು ನಿಷೇಧಿಸಿ ಸರ್ಕಾರ ಆದೇಶಿಸಿದೆ ಪರೀಕ್ಷಾ ಸಂದರ್ಭದಲ್ಲಿ ಹಿಜಾಬ್ ಧರಿಸಿ ತರಗತಿಗೆ ಬರಲು ಅನುಮತಿ ನೀಡಿ ಎಂದು ಕೋರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಹಾಗಾದರೆ, ಎರಡು ತಿಂಗಳಾದ ನಂತರ ಈ ನಿಯಮ ಅಥವಾ ಕಾನೂನುಗಳನ್ನು ನೀವು ಪಾಲಿಸುತ್ತೀರಾ ಎಂದು ಪ್ರಶ್ನಿಸಿದರು.
ಇನ್ನು, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಹೈಕೋರ್ಟ್ನಲ್ಲಿ ವಾದ ಮಂಡಿಸಿ, ಸಾಂವಿಧಾನಿಕ ವಿಚಾರಗಳಲ್ಲಿ ಮಾತ್ರ ನಾವು ನಿರ್ಧಾರಗಳನ್ನು ತಿಳಿಸುತ್ತೇವೆ. ಆದರೆ, ಸಮವಸ್ತ್ರದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಕಾಲೇಜು ಆಡಳಿತ ಮಂಡಳಿಗೆ ಸ್ವಾಯತ್ತವಾಗಿವೆ. ಹಿಜಾಬ್ ಧರಿಸಿ ತರಗತಿಗೆ ಬರಲೇಬೇಕು ಎನ್ನುವ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮಂಡಳಿ ಅಥವಾ ಪ್ರಾಂಶುಪಾಲರ ಬಳಿ ವಿನಂತಿಸಬೇಕು ಎಂದು ನ್ಯಾಯಮೂರ್ತಿಗಳಿಗೆ ಸರ್ಕಾರದ ಪರವಾಗಿ ತಿಳಿಸಿದ್ದಾರೆ.
ಹಾಗೆಯೇ, ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಅವರು ವಾದ ಮಂಡಿಸಿ, ಸ್ಕಾರ್ಫ್ ಧರಿಸುವುದು ಮೂಲಭೂತವಾದ ಹಕ್ಕಲ್ಲ. ಈ ಬಗ್ಗೆ ಸರ್ಕಾರದ ಆದೇಶವೂ ಸಹ ಇದೆ. ಇದು ಆ ಮುಸ್ಲಿಂರ ಒಂದು ಸಾಂಪ್ರದಾಯಿಕ ಆಚರಣೆ ಅಷ್ಟೇ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಅಲ್ಲದೇ, ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅನುಮತಿ ನೀಡಿ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಧೀಶರು, ಕುರಾನ್ ಪ್ರಕಾರ ಹಿಜಾಬ್ ಧರಿಸುವುದು ಒಂದು ಧಾರ್ಮಿಕ ಪದ್ದತಿ. ಸರ್ಕಾರ ಕುರಾನ್ ವಿರುದ್ಧ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿದೆ.
ಬಟ್ಟೆ ಧರಿಸುವುದು ಸಂವಿಧಾನದಲ್ಲಿರುವ ಮೂಲಭೂತ ಹಕ್ಕು. ಅಭಿವ್ಯಕ್ತಿ ಸ್ವಾತಂತ್ರದ ಅನುಚ್ಛೇದ 19ಎ(1)ರ ಅಡಿಯಲ್ಲಿ ಈ ಹಕ್ಕನ್ನು ನೀಡಲಾಗಿದೆ. ಆದರೆ, ಈಗ ಸರ್ಕಾರದ ಸಮವಸ್ತ್ರ ಕಡ್ಡಾಯದ ಆದೇಶದ ಅಭಿವ್ಯಕ್ತಿ ಸ್ವಾತಂತ್ರದ ಹರಣವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.ಬೆಳಗ್ಗೆ ನಡೆಯುತ್ತಿದ್ದ ಪ್ರಕರಣದ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂಡೂಡಲಾಗಿತ್ತು. ಮಧ್ಯಾಹ್ನ ಆರಂಭವಾದ ವಿಚಾರಣೆಯ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್, ಮದ್ರಾಸ್ ಸೇರಿದಂತೆ ಹಲವು ನ್ಯಾಯಾಲಯಗಳು ಅದರಲ್ಲೂ ಅಮೇರಿಕಾ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಆ ಕೋರ್ಟ್, ಈ ಕೋರ್ಟ್ ತೀರ್ಪು ಎಂದು ಉಲ್ಲೇಖಿಸುವುದಲ್ಲ. ಬದಲಾಗಿ, ತೀರ್ಪು ನೀಡಿರುವ ನ್ಯಾಯಾಲಯ ಯಾವ ಸನ್ನಿವೇಶ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಆದೇಶಿಸಿದೆ ಎಂಬುದನ್ನು ಮೊದಲು ಪರಿಶೀಲಿಸಿ ಎಂದು ಚಾಟಿ ಬೀಸಿದೆ.
ಹಿಜಾಬ್ ಧರಿಸದಂತೆ ತಡೆಯುವ ಅಧಿಕಾರ ಯಾರಿಗೂ ಇಲ್ಲ. ಹಿಜಾಬ್ ವಿವಾದವನ್ನು ಅನಾವಶ್ಯಕವಾಗಿ ಕಾನೂನು ಸುವ್ಯವಸ್ಥೆಗೆ ತಳುಕು ಹಾಕಲಾಗುತ್ತಿದೆ ಎಂದ ವಕೀಲ ಕಾಮತ್, ಹಿಜಾಬ್ ಧರಿಸುವುದು ಮುಸ್ಲೀಮರ ಮೂಲಭೂತ ಹಕ್ಕು. ಬಾಲಕಿ ಮಾರುಕಟ್ಟೆಗೆ ಹಿಜಾಬ್ ಧರಿಸಿ ಹೋದರೆ ಸಮಸ್ಯೆಯಲ್ಲ, ಆದರೆ ಅದೇ ಹಿಜಾಬನ್ನು ತರಗತಿಗೆ ಹಾಕಿಕೊಂಡು ಹೋದರೆ ಆಗುವ ಸಮಸ್ಯೆಯೇನು ಎಂದು ವಾದ ಮಂಡಿಸಿದ್ದಾರೆ.
ನಾವು ಜಿಎಸ್’ಬಿ ಬ್ರಾಹ್ಮಣರು, ನನ್ನ ಮಗ ಹಣೆಗೆ ತಿಲಕ ಇಡುತ್ತಾನೆ. ಯಾರಿಗೋ ಬೇಸರವಾಗುತ್ತದೆ ಎಂದು ತಿಲಕ ಇಡಬೇಡ ಎಂದು ಅವನಿಗೆ ಹೇಳಲಾಗುತ್ತದೆಯೇ ಎಂದು ವಾದಿಸಿದ್ದಾರೆ ವಕೀಲ ಕಾಮತ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post