ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತದ ಬೆನ್ನೆಲುಬು ಕೃಷಿ/ರೈತ ಎಂಬುದು ಸರ್ವಥಾ ವಿಧಿತವಾಗಿದ್ದರೂ ಬಹಳಷ್ಟು ಕೃಷಿಕರಿಗೆ ಇಂದಿನ ಯುಗದ ತಂತ್ರಜ್ಞಾನಕ್ಕೆ ತಕ್ಕಂತೆ ಸಹಕಾರ ದೊರೆಯದೇ ತೊಂದರೆಯಾಗುತ್ತಿರುವುದೂ ಸಹ ತಿಳಿದಿರುವ ವಿಚಾರ. ಈ ರೀತಿಯ ರೈತರಿಗೆ ನೆರವಾಗುವ ಉದ್ದೇಶದಿಂದ ಆರಂಭವಾಗಿದೆ ‘ಅಗ್ರಿ ಫೈ’ ಎಂಬ ಸ್ಟಾರ್ಟಪ್.
ಸಮಗ್ರ ಕೃಷಿ ಬೆಳವಣಿಗೆಗಾಗಿ ರೈತರನ್ನು ಒಳಗೊಂಡಂತೆ ಈ ಸಂಬಂಧಿತ ಎಲ್ಲ ರೀತಿಯ ವ್ಯಾಪಾರಸ್ಥರನ್ನು ಒಂದೇ ಪ್ಲಾಟ್’ಫಾರಂ ಅಡಿಯಲ್ಲಿ ತಂದು, ಈ ಕ್ಷೇತ್ರವನ್ನು ಬಲವರ್ಧನೆಗೊಳಿಸುವ ಉದ್ದೇಶವನ್ನು ಈ ಆ್ಯಪ್ ಹೊಂದಿದ್ದು, ಇದಕ್ಕಾಗಿ ಒಂದು ಬಲಿಷ್ಠ ತಂಡ ಕಾರ್ಯ ನಿರ್ವಹಿಸುತ್ತಿದೆ.
ಪ್ರಮುಖವಾಗಿ, ಉತ್ತಮ ರೈತರು ಹಾಗೂ ವ್ಯಾಪಾರಸ್ಥರನ್ನು ಗುರುತಿಸಿ ಅವರಿಗೆ ಸಾಲಸೌಲಭ್ಯ ಒದಗಿಸುವ ಉದ್ದೇಶವನ್ನು ಈ ಅಗ್ರಿ ಫೈ ಆ್ಯಪ್ ಹೊಂದಿದೆ.
ಯಾಕೆ ಈ ಆ್ಯಪ್?
ದೇಶ, ವ್ಯವಸ್ಥೆ ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ಎಷ್ಟೇ ಮುಂದುವರೆಯುತ್ತಿದ್ದರೂ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಈಗಲೂ ಕೃಷಿ ಸಾಲ ಸೌಲಭ್ಯ ಅಷ್ಟು ಸುಲಭವಾಗಿಲ್ಲ. ಸಹಕಾರಿ ಹಾಗೂ ಖಾಸಗಿ ಬ್ಯಾಂಕ್’ಗಳು ಎಷ್ಟೇ ಇದ್ದರೂ ರೈತರಿಗೆ ಅಗತ್ಯವಾಗಿರುವ ಸಾಲ ಸಿಗುವುದು ಒಂದಷ್ಟು ದುಸ್ತರವಾಗಿದೆ. ಹೀಗಾಗಿ, ಇಂದಿಗೂ ಬಹಳಷ್ಟು ರೈತರು ಬೀಜ, ರಸಗೊಬ್ಬರ ಅಂಗಡಿ ಮಾಲೀಕರು ಹಾಗೂ ಎಂಪಿಎಂಸಿ ಮಾರುಕಟ್ಟೆಯಲ್ಲಿನ ಉತ್ಪನ್ನ ಖರೀದಿ ಮಾಡುವ ವ್ಯಾಪಾರಸ್ಥರನ್ನೇ ಅವಲಂಭಿಸಿದ್ದು, ರೈತನಿಗೆ ವರ್ಷದ ಬೆಳೆ ಬೆಳೆಯಲು ಅಗತ್ಯವಾದ ಬೀಜ, ರಸಗೊಬ್ಬರ ನೀಡುತ್ತಾರೆ. ಆನಂತರ, ಬೆಳೆ ಬಂದಾಗ ಆ ಹಣವನ್ನು ವಾಪಸ್ ಪಡೆಯುತ್ತಾರೆ. ಹೀಗೆ ಕೃಷಿಗೆ ನೆರವು ನೀಡುವಂತಹ ವ್ಯಾಪಾರಿಗಳೂ ಸಹ ಸೀಮಿತ ರೈತರೊಂದಿಗೆ ಮಾತ್ರ ವ್ಯವಹರಿಸುತ್ತಾರೆ. ಇಂತಹ ವ್ಯಾಪಾರಸ್ಥರನ್ನು ಗುರುತಿಸಿ ಅವರಿಗೆ ಅಗತ್ಯವಾದ ಸಾಲ ಸೌಲಭ್ಯವನ್ನು ಸುಲಭವಾಗಿ ನೀಡುವ ಉದ್ದೇಶವನ್ನು ಇದು ಹೊಂದಿದೆ.
ಎನ್’ಬಿಎಫ್’ಸಿ ಜೊತೆ ಒಪ್ಪಂದ
ಇನ್ನು, ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್ ಜೊತೆಯಲ್ಲಿ ಮಾತನಾಡಿದ ಅಗ್ರಿ ಫೈ ಮಾತೃಸಂಸ್ಥೆ ಅಗ್ರಿನೋವ್ ಟೆಕ್ನಾಲಜೀಸ್ ಫ್ರೈ.ಲಿ. ಸಹ ಸ್ಥಾಪಕ ಕೆ.ಆರ್. ರಘುಚಂದ್ರ, ಕೃಷಿ ಕ್ಷೇತ್ರದಲ್ಲಿ ದೈನಂದಿನವಾಗಿ ತೊಡಗಿಸಿಕೊಂಡ ವ್ಯಾಪಾರಸ್ಥರಿಗೆ ಸರಳವಾಗಿ ಸಾಲಸೌಲಭ್ಯ ಒದಗಿಸುವ ಸಲುವಾಗಿ ಕೆಲವು ಬ್ಯಾಂಕಿಂಗ್ ರಹಿತ ಹಣಕಾಸು ಸಂಸ್ಥೆಗಳೊಂದಿಗೆ ನಮ್ಮ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಆರಂಭಿಕವಾಗಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ದೇಶದಾದ್ಯಂತ ವಿಸ್ತರಣೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.ಈಗಾಗಲೇ ಕೃಷಿ ಕ್ಷೇತ್ರದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವವರು ಈ ಅ್ಯಪ್ ಡೌನ್’ಲೋಡ್ ಮಾಡಿಕೊಂಡು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಸಿಬ್ಬಂದಿ ಅವರ ವಹಿವಾಟು ಬಗ್ಗೆ ವರದಿ ತಯಾರಿಸಿ ಸಾಲ ಕೊಡಿಸಲು ನೆರವು ನೀಡುತ್ತಿದ್ದಾರೆ. ಕೃಷಿ ವ್ಯಾಪಾರಸ್ಥರಿಗೆ ಸಾಲದ ನೆರವು ನೀಡುವ ಮೂಲಕ ರೈತರಿಗೆ ಸಹಾಯವಾಗುತ್ತದೆ. ಇದಲ್ಲದೆ, ರೈತರಿಗೆ ನೇರವಾಗಿ ಕೆಲವು ತಾಂತ್ರಿಕ ಮಾಹಿತಿ ಸಹ ಒದಗಿಸಲು ವ್ಯವಸ್ಥೆ ಸಿದ್ಧಪಡಿಸಲಾಗುತ್ತದೆ ಎಂದರು.
ಹೇಗೆ ಕೆಲಸ ಮಾಡುತ್ತದೆ?
ಎರಡೂ ರಾಜ್ಯದ ಯಾವುದೇ ಜಿಲ್ಲೆ ಅಥವಾ ಹೋಬಳಿಯ ರೈತರು ತಮ್ಮ ಜಮೀನು ಹಾಗೂ ತಾವು ಬೆಳೆಯುವ ಬೆಳೆಯ ವಿವರವನ್ನು ಮೊದಲು ಈ ಆ್ಯಪ್’ನಲ್ಲಿ ದಾಖಲಿಸಬೇಕು. ಆನಂತರ ಆ ಪ್ರದೇಶದಲ್ಲಿ ಯಾವ ಕಾಲದಲ್ಲಿ ಮಳೆ ಬರುತ್ತದೆ, ಈ ವರ್ಷ ಯಾವ ಬೆಳೆ ಹೇಗೆ ಇಳುವರಿ ಬರಬಹುದು, ಯಾವ ಬೆಳೆಗೆ ಮಾರುಕಟ್ಟೆಯ ದರ ಎಷ್ಟಿರಬಹುದು, ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಬೇಡಿಕೆ ಸೃಷ್ಟಿಸುವಂತ ಧಾನ್ಯ ಅಥವಾ ತೋಟಗಾರಿಕಾ ಬೆಳೆ ಯಾವವು, ಬೆಳೆಗೆ ತಗುಲಬಹುದಾದ ರೋಗದ ಮಾಹಿತಿ ಮತ್ತು ಅದಕ್ಕೆ ಪರಿಹಾರ ಹೀಗೆ ಹತ್ತು ಹಲವು ಪ್ರಯೋಜನಗಳನ್ನು ರೈತರೂ ಪಡೆದುಕೊಳ್ಳಬಹುದು.
(ಮುಂದಿನ ಲೇಖನ ಶೀಘ್ರದಲ್ಲೇ ನಿರೀಕ್ಷಿಸಿ: ರೈತರೇ, ಕೃಷಿ ಖಾತಾ ಆ್ಯಪ್ ಡೌನ್’ಲೋಡ್ ಮಾಡಿ-ಸುಲಭ ಸಾಲಸೌಲಭ್ಯ ಪಡೆಯಿರಿ)
Discussion about this post