ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ(ವಿಜಯನಗರ) |
ಹಿಂದುಳಿದ ವರ್ಗಗಳಡಿ ಬರುವ ವಿವಿಧ ವರ್ಗಗಳ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಾಗ ತಂದೆಯ ಜಾತಿಯನ್ನೆ ಪರಿಗಣಿಸಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆ ತಿಳಿಸಿದರು.
ವಿಜಯನಗರ(ಹೊಸಪೇಟೆ) ಕ್ರೀಡಾ ಇಲಾಖೆಯ ಒಳಾಂಗಣ ಸಭಾಂಗಣದಲ್ಲಿ ಏರ್ಪಡಿಸಲಾದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮದು ಪುರುಷ ಪ್ರಧಾನ ಕುಟುಂಬವಾಗಿರುವುದರಿAದ ತಂದೆ ಯಾವ ಜಾತಿಗೆ ಸೇರಿರುತ್ತಾರೆ, ಅದೇ ಜಾತಿಯೇ ಮುಂದುವರೆಯುತ್ತದೆ. ಕೆಲವು ಸಂದರ್ಭದಲ್ಲಿ ಮೀಸಲಾತಿ ಪಡೆಯುವ ಉದ್ದೇಶದಿಂದ ತಾಯಿ ಅಥವಾ ಇನ್ನಾವುದೋ ಕಾರಣದಿಂದ ಬೇರೆ ಜಾತಿಯನ್ನು ಬರೆಯಿಸುತ್ತಾರೆ. ಆವಾಗ ಮೀಸಲಾತಿ ಪಡೆದು ವಿದ್ಯಾಭ್ಯಾಸ ಮಾಡಿ ನಂತರ ಉದ್ಯೋಗ ಪಡೆದಿದ್ದರೂ ಸಹ ಅನೂರ್ಜಿತವಾಗುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ತಹಶೀಲ್ದಾರರು ಪರಿಶೀಲನೆ ನಡೆಸಿ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ತಿಳಿಸಿ, ಅಗತ್ಯವಿದ್ದಲ್ಲಿ ಸ್ಥಳ ಮಹಜರು ಮಾಡಿದ ನಂತರವೇ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಬೇಕೆಂದರು.
ಕೆಲವರು ಮುಸ್ಲಿಂ ಆಗಿದ್ದರೂ ವರ್ಗ 1 ರಡಿ ಮೀಸಲಾತಿ ಪಡೆಯುತ್ತಾರೆ ಎಂದು ತಹಶೀಲ್ದಾರರು ಆಯೋಗದಿಂದ ಸ್ಪಷ್ಟನೆ ಬಯಸಿದರು. ಈ ವೇಳೆ ಆಯೋಗದ ಅಧ್ಯಕ್ಷರು ಸ್ಪಷ್ಟನೆ ನೀಡಿ ವರ್ಗ 1 ರಡಿ ಪಿಂಜಾರ, ದರವೇಶಿ, ನದಾಥ್ ಎಂದಿರುತ್ತದೆ, ಇವರು ವರ್ಗ 1 ರಡಿ ಬರುತ್ತಾರೆ, ಉಳಿದಂತೆ 2ಬಿ ರಡಿ ಎಲ್ಲಾ ಮುಸ್ಲಿಂ ಬರಲಿದ್ದು ಮುಸ್ಲಿಂ ಆಗಿ ವರ್ಗ 1 ರಡಿ ಜಾತಿ ನಮೂದಿಸಿದ್ದಲ್ಲಿ ಅವರ ಹಿಂದಿನ ಪೂರ್ವಜರ ಜಾತಿಯ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ತಿಳಿಸಿದರು.
ಸಕಾರಣ ನೀಡಿ ಜಾತಿ ಪ್ರಮಾಣ ಪತ್ರ ತಿರಸ್ಕರಿಸಿ; ಎಲ್ಲಾ ಜಾತಿಯವರಿಗೂ ಮೀಸಲಾತಿ ಇದ್ದು ಕೆಲವರು ಸಾಮಾನ್ಯ ವರ್ಗದವರು ನಮಗೆ ಮೀಸಲಾತಿ ಇಲ್ಲ ಎಂದುಕೊAಡಿರುವವರೂ ಸಹ ಸಾಕಷ್ಟು ಜನರಿದ್ದಾರೆ. ವರ್ಗ 1, 2 ಎ.ಬಿ, 3 ಎ.ಬಿ ಹಾಗೂ ಸಾಮಾನ್ಯದಲ್ಲಿ ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ನೀಡಲಾಗುತ್ತದೆ. ಆದರೆ ಮೀಸಲಾತಿ ಕ್ಲೆöÊಮ್ಸ್ ತಿರಸ್ಕರಿಸುವಾಗ ಸಕಾರಣ ನೀಡಬೇಕೆಂದು ತಿಳಿಸಿದರು.
ಹಾಸ್ಟೆಲ್ ಸೌಲಭ್ಯ; ವಿಜಯನಗರ ಜಿಲ್ಲೆಯಲ್ಲಿ 66 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು ಇದರಲ್ಲಿ 17 ಕಡೆ ಮಾತ್ರ ಬಾಡಿಗೆ ಕಟ್ಟಡದಲ್ಲಿವೆ. 37 ಮೆಟ್ರಿಕ್ಪೂರ್ವ, 29 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಂದ 5890 ಸ್ಥಾನಗಳಿವೆ. 66 ನಿಲಯ ಮೇಲ್ವಿಚಾರಕರಲ್ಲಿ 28 ಹುದ್ದೆಗಳು ಖಾಲಿ ಇವೆ. 124 ಅಡುಗೆಯವರ ಹುದ್ದೆಗಳು ಮಂಜೂರಾಗಿದ್ದು 70 ಹುದ್ದೆಗಳು ಭರ್ತಿಯಾಗಿವೆ. 170 ಅಡುಗೆ ಸಹಾಯಕರ ಹುದ್ದೆಗಳು ಮಂಜೂರಾಗಿದ್ದು ಇದರಲ್ಲಿ 53 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 25 ರಾತ್ರಿ ಕಾವಲುಗಾರರ ಹುದ್ದೆಗಳು ಭರ್ತಿಯಾಗಬೇಕಾಗಿದೆ. ಒಟ್ಟು ಜಿಲ್ಲೆಯಲ್ಲಿ ಮಂಜೂರಾದ 405 ಹುದ್ದೆಗಳಲ್ಲಿ 178 ಭರ್ತಿಯಾಗಿದ್ದು 227 ಖಾಲಿ ಹುದ್ದೆಗಳಿವೆ ಎಂದು ಪ್ರಭಾರ ಬಿಸಿಎಂ ಅಧಿಕಾರಿ ತೇಜಾನಂದರೆಡ್ಡಿ ಸಭೆಗೆ ತಿಳಿಸಿದರು.
ಸಮೀಕ್ಷೆ ವೇಳೆ ಜಾತಿ ವರ್ಗ ಬದಲಾವಣೆ, ಸ್ಥಿರತೆಗಳ ಮನವಿ; ಆಯೋಗವು ಈಗಾಗಲೇ ರಾಜ್ಯದ ಸುಮಾರು 16 ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸಮೀಕ್ಷೆ ಕೈಗೊಂಡಿದೆ. ಈ ವೇಳೆ ಅನೇಕ ಜಾತಿಯವರು ವರ್ಗ 2ಎ ರಡಿ ಮೀಸಲಾತಿ ಕೋರಿರುವ ಮನವಿ ಮತ್ತು 2ಎ ರಡಿ ಇತರೆ ಜಾತಿಗಳನ್ನು ಸೇರಿಸಬಾರದೆಂದು ಮನವಿ ಮಾಡಿದ ಅರ್ಜಿಗಳಿವೆ. ಮತ್ತು ಕೆಲವು ಜಾತಿಗಳು ಹಿಂದುಳಿದ ವರ್ಗಗಳ ಜಾತಿಯ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಮನವಿಗಳನ್ನು ಸ್ವೀಕರಿಸಲಾಗಿದೆ. ಮತ್ತು ಈ ವೇಳೆ ಬಾಲಮಂದಿರದಲ್ಲಿನ ಅನಾಥ ಮಕ್ಕಳ ಬಗ್ಗೆಯು ವಿಶೇಷ ಗಮನವನ್ನು ಆಯೋಗ ವಹಿಸಿದ್ದು ತಂದೆ, ತಾಯಿ ಇಲ್ಲದ ಮಕ್ಕಳಿಗೆ ಯಾವುದರಡಿ ಮೀಸಲಾತಿ ಕಲ್ಪಿಸಬೇಕೆನ್ನುವ ಬಗ್ಗೆ ಆಯೋಗ ಅಧ್ಯಯನ ಮಾಡಲಿದೆ ಎಂದ ಅವರು ರಾಜ್ಯದಲ್ಲಿ ಒಟ್ಟು 800 ಕ್ಕಿಂತಲೂ ಹೆಚ್ಚಿನ ಜಾತಿಗಳು ಬರಲಿದ್ದು ಇದರಲ್ಲಿ ಅನೇಕ ಉಪ ಜಾತಿಗಳು ಸೇರಲಿವೆ ಎಂದರು.
ಗಾಣಿಗ, ವೀರಶೈವ ಗಾಣಿಗ ಪ್ರತ್ಯೇಕ;
ಜಾತಿಯಲ್ಲಿ ಗಾಣಿಗ ಎಂದಿದ್ದಲ್ಲಿ ಇವರು 2ಎ ರಡಿ ಬರುತ್ತಾರೆ. ವೀರಶೈವ ಗಾಣಿಗ ಎಂದಿದ್ದಲ್ಲಿ ಇವರು 3ಬಿ ರಡಿ ಬರುತ್ತಾರೆ ಎಂದು ಆಯೋಗದ ಅಧ್ಯಕ್ಷರು ಸ್ಪಷ್ಟಪಡಿಸಿದರು. ಈ ವೇಳೆ ತಹಶೀಲ್ದಾರರು ಮಾತನಾಡಿ ಕೆಲವರು ವೀರಶೈವ ಗಾಣಿಗರಾಗಿದ್ದರೂ ಗಾಣಿಗ ಎಂದು ನಮೂದು ಮಾಡುತ್ತಾರೆ. ಈ ವೇಳೆ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ ಹಾಗೂ ಸ್ಥಳ ಪರಿಶೀಲನೆಯನ್ನು ನಡೆಸಿ ತೀರ್ಮಾನಿಸಲು ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಕಲ್ಯಾಣ್ ಕುಮಾರ್ ಹೆಚ್.ಎಸ್, ರಾಜಶೇಖರ್ ಬಿ.ಎಸ್, ಕೆ.ಟಿ.ಸುವರ್ಣ, ಶಾರದನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣರಾವ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post