ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ(ವಿಜಯನಗರ) |
ಹಂಪಿ ಉತ್ಸವ ಆಚರಣೆ ಅಂಗವಾಗಿ ವಿಶೇಷವಾಗಿ ಆಯೋಜಿಸಲಾಗಿರುವ ಧ್ವನಿ ಮತ್ತು ಬೆಳಕು ವಿಶೇಷ ಪ್ರದರ್ಶನ ಕಾರ್ಯಕ್ರಮವು ಜ.26ರಿಂದ ಫೆ.2ರವರೆಗೆ ನೆರವೇರಲಿದೆ ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ತಿಳಿಸಿದರು.
ಹಂಪಿಯ ಗಜಶಾಲೆ ಆವರಣದಲ್ಲಿ ಪ್ರದರ್ಶಿಸಲಾಗುವ ‘ವಿಜಯನಗರ ವೈಭವ’ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಸಿದ್ಧತೆ ಹಾಗೂ ಕಲಾವಿದರ ತಾಲೀಮನ್ನು ವೀಕ್ಷಿಸಿದರು.
ನಂತರ ಮಾತನಾಡಿದ ಸಚಿವರು, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನೆಲೆಗೊಳಿಸಲು ಗತವೈಭವವನ್ನು ಈ ಧ್ವನಿ-ಬೆಳಕು ಮೂಲಕ ಸಾರಲಿದೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿ ಆಯೋಜಿಸಿದ್ದು, ಸಾರ್ವಜನಿಕರು ಪ್ರಶಾಂತ ವಾತಾವರಣದಲ್ಲಿ ಗತವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಧ್ವನಿ ಮತ್ತು ಬೆಳಕು ಪ್ರದರ್ಶನದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಈಗಾಗಲೇ ತಾಲೀಮು ಆರಂಭಿಸಿದ್ದಾರೆ ಎಂದರು.
Also read: ಎನ್.ಇ.ಎಸ್ ಅಮೃತಮಹೋತ್ಸವ ಉಪನ್ಯಾಸ ಮಾಲಿಕೆಯಲ್ಲಿ ವಿಜ್ಞಾನಿ ಸುರೇಶ್
ಜ.25ಕ್ಕೆ ತುಂಗಾರತಿ ಕಾರ್ಯಕ್ರಮ; ಜ.25ರಂದು ಸಂಜೆ ಹಂಪಿ ವಿರುಪಾಕ್ಷ ದೇವಸ್ಥಾನದ ಹಿಂಭಾಗದ ನದಿ ತೀರದಲ್ಲಿ ತುಂಗಾರತಿ ನೆರವೇರಲಿದೆ ಎಂದರು.
ನಂತರ ಜಿಲ್ಲಾಧಿಕಾರಿ ಟಿ.ವೆಂಕಟೇಶ ಮಾತನಾಡಿ, ನಿಗದಿತ ಸಮಯದಲ್ಲಿ ಪ್ರದರ್ಶನಕ್ಕೆ ಅವಶ್ಯವುಳ್ಳ ಎಲ್ಲಾ ಸಿದ್ಧತೆಗೆ ಬೇಕಾದ ಸೌಲಭ್ಯ, ಅನುದಾನ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ರಾಜ್ಯ ಸರ್ಕಾರದಿಂದ ಸಿಕ್ಕಿದೆ. ಹಂಪಿ ಉತ್ಸವದ ಮುಖ್ಯ ಆಕರ್ಷಣೀಯವಾಗಿ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಸಿಎಂ ಉದ್ಘಾಟನೆ:
ಜ.27 ಹಂಪಿ ಉತ್ಸವದ ಉದ್ಘಾಟನೆ ನಡೆಯಲಿರುವ ಗಾಯಿತ್ರಿ ಪೀಠದ ಮುಖ್ಯವೇದಿಕೆಯಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಟಾರ್ಚ್ ಬೆಳಗುವ ಮೂಲಕ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸಾರಿಗೆ ವ್ಯವಸ್ಥೆ:
ಸಂಚಾರ ನಿರ್ವಹಣೆಗಾಗಿ ಏಕಮುಖ ರಸ್ತೆ ನಿರ್ಮಾಣವಾಗಲಿದ್ದು, ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ಗಳ ಸೇವೆ ಸಲ್ಲಿಸಲಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಉಪವಿಭಾಗಾಧಿಕಾರಿ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮೇಶ್ವರ, ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post