ಕಲ್ಪ ಮೀಡಿಯಾ ಹೌಸ್ | ಹೊಸಪೇಟೆ |
ನಗರದಲ್ಲಿರುವ ಶ್ರೀ ಚಿಂತಾಮಣಿ ಮಠಕ್ಕೆ ಶೃಂಗೇರಿ ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು #Shri Vidhushekara Bharthi Mahaswami ಚಿತ್ತೈಸಿದ್ದರು. ಜಗದ್ಗುರುಗಳು ಶ್ರೀಮಠದ ಕಾಶೀ ವಿಶ್ವೇಶ್ವರ ದೇವರಿಗೆ ಹಾಗೂ ಶಂಕರಾಚಾರ್ಯರಿಗೆ ಪುಷ್ಪ ಸಮರ್ಪಿಸಿ ಮಂಗಳಾರತಿ ನೆರವೇರಿಸಿದರು. ನಂತರದಲ್ಲಿ ಯತಿದ್ವಯರಿಬ್ಬರೂ ಗೋ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದರು.
ಚಿಂತಾಮಣಿ ಮಠದಲ್ಲಿ 30 ಶುದ್ಧ ದೇಸಿ ಹಸುಗಳನ್ನು ಸಾಕಲಾಗಿದೆ. ಗುರುಗಳು ಗೋವುಗಳಿಗೆ ಪೂಜೆ ಸಲ್ಲಿಸಿ ಪುಟ್ಟ ಕರುಗಳನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ಜಗದ್ಗುರುಗಳು ಝಾನ್ಸಿ ಎಂಬ ಪುಟ್ಟ ಕರುವನ್ನು ಮುದ್ದಾಡಿದರು.
ಇಂದಿನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಚಿಂತಾಮಣಿ ಮಠದ ಬಾಲ ಗುರುಕುಲಮ್ ವಿದ್ಯಾರ್ಥಿಗಳು ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಮುಂದೆ ಕಂಠಸ್ಥವಾಗಿದ್ದ ಭಗವದ್ಗೀತೆಯ 12ನೆ ಅಧ್ಯಾಯದ ಸಂಪೂರ್ಣ ಶ್ಲೋಕಗಳನ್ನು ಪಾರಾಯಣ ಮಾಡಿದರು. ಶ್ರೀ ಮಾತಾ ಸ್ತೋತ್ರ ಪಾರಾಯಣ ಸಮಿತಿಯವರು ಗುರುದ್ವಯರ ಮುಂದೆ ಭಜನೆ ಮಾಡಿದರು.
ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಏನೆಂದರೆ ಅದ್ವೈತ ಪರಂಪರೆಗೆ ಸೇವೆ ಸಲ್ಲಿಸಿದ ಐದು ಸಾಧಕರಿಗೆ ಅದ್ವೆÊತ ಚಿಂತಾಮಣಿ ಎಂಬ ಬಿರುದನ್ನು ನೀಡಿ 10,000 ರೂ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಅದ್ವೈತ ಚಿಂತಾಮಣಿಗಳೆಂದು ಬಿರುದು ಪಡೆದ ಸನ್ಮಾನಿತರು:
- ಸಿ. ಕೃಷ್ಣ ಭಟ್ಟರು
- ಹಿತ್ಳಲ್ಲಿ ಸೂರ್ಯನಾರಾಯಣ ಭಟ್ಟರು
- ಜಿ.ಆರ್. ಪಾಟೀಲರು
- ರಂಗೋಪಂತ ನಾಗರಾಜ್ ರಾವ್ ರವರು
- ಶ್ರೀಕಾಂತ್ ಋಗ್ವೇದಿಯವರು
ಚಿಂತಾಮಣಿ ಗುರುಗಳು ಹೊಸಪೇಟೆ ನಗರದ ವಿಪ್ರರನ್ನು ಒಗ್ಗೂಡಿಸಿ ಜಗದ್ಗುರುಗಳ ವಿಜಯನಗರ ಯಾತ್ರಾ ಸಮಿತಿಯನ್ನು ರಚಿಸಿ ತನ್ಮೂಲಕ ವಿಜಯನಗರ ಪ್ರಾಂತ್ಯದ ಯಾತ್ರೆಯು ಸಂಗೋಪಾಂಗವಾಗಿ ನಡೆಯುವಂತೆ ಮಾಡಿದ್ದಾರೆ.
ಶ್ರೀ ಚಿಂತಾಮಣಿ ಮಠದ ಪ್ರಸ್ತುತ 31ನೆ ಪೀಠಾಧಿಪತಿಗಳಾಗಿರುವ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು.
Also read: ಮುಡಾ ಹಗರಣ ಮುಚ್ಚಿಹಾಕಲು ಯತ್ನ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ: ವಿಪಕ್ಷ ನಾಯಕ ಆರ್. ಅಶೋಕ್
ವಿಧುಶೇಖರ ಭಾರತೀ ಶ್ರೀಗಳು ಮಾತನಾಡಿ, ಚಿಂತಾಮಣಿ ಸ್ವಾಮಿಗಳು ನಮಗೆ ಪ್ರೀತಿ ಪಾತ್ರರು. ಪೂರ್ವಶ್ರಮದಲ್ಲಿಯೇ ತಮ್ಮ ಲೌಕಿಕ ವೃತ್ತಿಯನ್ನು ತೊರೆದು ಗುರುಸೇವೆ ತತ್ವ ಪ್ರಚಾರವನ್ನೇ ತಮ್ಮ ಜೀವನದ ಮುಖ್ಯ ಗುರಿಯನ್ನಾಗಿಸಿಕೊಂಡಿದ್ದರು. ಅಂತಹವರು ಈ ಪ್ರಾಂತ್ಯಕ್ಕೆ ಪೀಠಾಧಿತಿಗಳಾಗಿರುವುದು ಅತ್ಯಂತ ಸಂತೋಷಕರವಾದ ವಿಷಯ ಎಂದರು.
ಶ್ರೀ ಚಿಂತಾಮಣಿ ಮಠಕ್ಕೆ ಬಹಳ ಪ್ರಾಚೀನವಾದ ಇತಿಹಾಸವಿದೆ. ಇಲ್ಲಿನ ಹಿಂದಿನ ಯತಿಗಳೆಲ್ಲ ತಪಸ್ಸು ಅನುಷ್ಠಾನವಂತರು. ಚಿಂತಾಮಣಿ ಸ್ವಾಮಿಗಳು ನಮ್ಮ ಬಳಿ ಆಗಾಗ ಬಂದು ಶಾಂಕರ ತತ್ವ ಪ್ರಚಾರದ ಬಗ್ಗೆ ಹಾಗೂ ಇತರೆ ಕಾರ್ಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ತತ್ವ ಶಂಕರದ ಮೂಲಕ ಅದ್ವೆÊತ ಪ್ರಚಾರ, ವಿದ್ಯಾರಣ್ಯರ ಬಗ್ಗೆ ಕೂಡ ದೃಶ್ಯಾವಳಿಗಳನ್ನು ಮಾಡಿದ್ದಾರೆ. ಚಿಂತಾಮಣಿ ಮಠವು ತಾತ್ವಿಕವಾಗಿ ಅಭಿವೃದ್ಧಿಯಾಗಿದೆ. ಲೌಕಿಕವಾಗಿಯೂ ಹೀಗೆ ಅಭಿವೃದ್ಧಿಯಾಗಲಿ. ಕೈಯಲ್ಲಿ ಸಾಧ್ಯವಾದವರು ಮಠದ ಕಾರ್ಯಗಳಿಗೆ ಸಹಾಯ ಮಾಡಬೇಕು. ಆಗದಿದ್ದರೆ ಸುಮ್ಮನಿರಬೇಕು. ತೊಂದರೆ ಮಾಡುವುದು, ಅಡ್ಡಿಮಾಡುವುದು, ಅಪಪ್ರಚಾರ ಮಾಡಿದರೆ ಅವರು ತಮ್ಮ ವಿನಾಶಕ್ಕೆ ತಾವೇ ಶಂಕುಸ್ಥಾಪನೆ ಮಾಡಿಕೊಂಡಂತೆ ಎಂಬ ಅನುಗ್ರಹದ ನುಡಿಗಳನ್ನಾಡಿದರು.
ಚಿಂತಾಮಣಿ ಮಠದ ಶ್ರೀಗಳು ಮಾತನಾಡಿ, ಜಗದ್ಗುರು ಶ್ರೀಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಬೇರೆ ಯಾರೂ ಅಲ್ಲ…ಜಗದ್ಗುರು ಶ್ರೀಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳೇ ಎಂದು ಕಥೆಯ ಮೂಲಕ ತಿಳಿಸಿಕೊಟ್ಟರು.
ಶೃಂಗೇರಿ ಮಠದ ನೂತನ ಆಡಳಿತಾಧಿಕಾರಿಗಳಾದ ಗುರುಸೇವ ನಿರತ ಪಿ.ಎ. ಮುರಳಿ ಅವರಿಗೆ ಚಿಂತಾಮಣಿ ಮಠದ ಆಡಳಿತಾಧಿಕಾರಿಗಳಾದ ಶ್ರೀಕಾಂತ್ ಋಗ್ವೇದಿಯವರು ಸನ್ಮಾನ ಮಾಡಿದರು.
ಸರಿಸುಮಾರು ಚಿಂತಾಮಣಿ ಮಠದಲ್ಲಿ ಒಂದು ಸಾವಿರ ಜನ ಸೇರಿದ್ದರು. ಎಲ್ಲರೂ ಶಂಕರಾಚಾರ್ಯರಿಗೆ ಜೈ ಕಾರ ಹಾಕಿ, ಮಹಾಪ್ರಸಾದ ಸ್ವೀಕರಿಸಿದರು.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post