ವಡೋದರಾ: ಇದು ಈ ದೇಶದ ಪ್ರಧಾನ ಸೇವಕ, ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಮಾತಿನಿಂದ ಪ್ರೇರಿತಗೊಂಡ ವ್ಯಕ್ತಿ ಲಕ್ಷ ಲಕ್ಷ ಸಂಪಾದನೆ ಮಾಡಿದ ಸತ್ಯ ಘಟನೆ…
ಪಕೋಡಾ ಮಾರಿ ಜೀವನ ನಡೆಸಬಹುದು ಎಂದು ಪ್ರಧಾನಿ ಮೋದಿ ಒಮ್ಮೆ ಹೇಳಿದ್ದನ್ನೇ ಅಸ್ತ್ರವನ್ನಾಗಿಸಿಕೊಂಡ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು, ಬೀದಿ ಬೀದಿಯಲ್ಲಿ ಪಕೋಡಾ ಮಾರುವಂತೆ ಅಣಕ ಮಾಡಿ ಕೇಂದ್ರ ಸರ್ಕಾರವನ್ನು ಹಾಗೂ ಪಕೋಡಾ ಮಾರುವವರನ್ನು ವ್ಯಂಗ್ಯ ಮಾಡಿದ್ದವು. ಆದರೆ, ಮೋದಿ ಹೇಳಿದ ಒಂದು ಮಾತಿನಿಂದ ಪ್ರೇರಿತನಾದ ಓರ್ವ ವ್ಯಕ್ತಿ ಪಕೋಡಾ ಮಾರಿ ಲಕ್ಷ ಲಕ್ಷ ಸಂಪಾದನೆ ಮಾಡಿ ತೋರಿಸಿದ್ದಾರೆ.

ಪ್ರಧಾನಿ ಮಾತಿನಿಂದ ಪ್ರೇರಿತಗೊಂಡ ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಸದಸ್ಯ ನಾರಾಯಣ ಭಾಯ್ ವಡೋದರಾದಲ್ಲಿ ಪಕೋಡಾ ಅಂಗಡಿಯನ್ನು ತೆರೆಯುತ್ತಾರೆ. ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ಬರೋಬ್ಬರಿ 300 ಕೆಜಿ ಪಕೋಡಾ ಮಾರುತ್ತಾರೆ. ಹೀಗೆ ಮಾರಾಟ ಮಾಡಿ ಒಂದು ತಿಂಗಳಿಗೆ ಅವರು ಗಳಿಸಿದ್ದು ಭರ್ಜರಿ 9 ಲಕ್ಷ ರೂ.

ವಾಸ್ತವವಾಗಿ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಮೊದಲ ನಿರುದ್ಯೋಗಿಯಾಗಿದ್ದರು. ಈ ವೇಳೆ ಮೋದಿಯವರ ಮಾತಿನಿಂದ ಪ್ರೇರಿತರಾಗಿ ವಡೋದರಾದಲ್ಲಿ ಪಕೋಡಾ ಅಂಗಡಿ ತೆರೆದು, ಅದಕ್ಕೆ ಶ್ರೀರಾಮ್ ದಲವಾಡಾ ಸೆಂಟರ್ ಎಂಬ ಹೆಸರನ್ನಿಟ್ಟರು.

ಒಂದು ಮಳಿಗೆಯಿಂದ ಆರಂಭಿಸಿದ ಇವರು ಪ್ರಸ್ತುತ ವಡೋದರಾದಾದ್ಯಂತ 35 ಶಾಖೆಗಳನ್ನು ಹೊಂದಿದ್ದಾರೆ. ಇವರು ಪಕೋಡಾ ಸ್ಟಾಲ್ ಆರಂಭಿಸಿದ ನಂತರ ಸುಮಾರು ಎರಡು ತಿಂಗಳಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡರು. ಪ್ರತಿದಿನ ಬೆಳಗ್ಗೆ 7ರಿಂದ 11 ಗಂಟೆಯವರೆಗೂ ಇವರ ಸ್ಟಾಲ್ ತೆರೆದಿರುತ್ತದೆ.
ಈ ಮೂಲಕ ಪಕೋಡಾ ಮಾರಿ ಜೀವನ ಕಟ್ಟಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಗೆ ವ್ಯಂಗ್ಯ ಮಾಡಿದ್ದ ಕಾಂಗ್ರೆಸ್ಗೆ ನಾರಾಯಣ ಭಾಯ್ ತಕ್ಕ ಉತ್ತರ ನೀಡಿದ್ದಾರೆ.


















