ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಬಾಳೆ ತೋಟದ ಆರೈಕೆ ಸರಿಯಾಗಿ ಮಾಡಿದಾಗ, ಕೀಟ ರೋಗಗಳನ್ನುಕಡಿಮೆ ಮಾಡಿದಾಗ ಉತ್ತಮ ಬೆಳೆ ತೆಗೆಯಲು ಸಾಧ್ಯ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೈತರಿಗೆ ತಿಳಿಸಿದರು.
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ ಆನರ್ಸ್ ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬಾಳೆಯಲ್ಲಿ ಸಮಗ್ರ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುಂಪು ಚರ್ಚೆಯಲ್ಲಿ ವಿದ್ಯಾರ್ಥಿಗಳು ಮಾತನಾಡಿದರು.
ಬಾಳೆಹಣ್ಣು ವರ್ಷವಿಡಿ ಸುಲಭವಾಗಿ ಹಾಗೂ ಕಡಿಮೆ ಬೆಲೆಯಲ್ಲಿ ಸಿಗುವ ಅತ್ಯುತ್ತಮವಾದ ಹಣ್ಣು. ಇದು ರುಚಿಕರ ಮಾತ್ರವಲ್ಲದೆ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಕೇವಲ ಹಣ್ಣು ಮಾತ್ರವಲ್ಲದೆ ಬಾಳೆ ಗಿಡದ ಬಾಳೆ ಹೂವು, ಬಾಳೆದಿಂಡು ಮತ್ತು ಬಾಳೆ ಎಲೆಗಳ ಸಹ ಜನರ ಸಂಸ್ಕೃತಿ ಮತ್ತು ಅಡುಗೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಆದ ಕಾರಣದಿಂದ ರೈತರು ಇದನ್ನು ಕೆಲವೊಂದು ಕಡೆ ಮುಖ್ಯ ಬೆಳೆಯಾಗಿ ಹಾಗೂ ಅಂತರ ಬೆಳೆಗೆ ಬೆಳೆಯುತ್ತಾರೆ ಎಂದರು.
ಹೀಗೆ ಬಾಳೆಯ ಬೆಳವಣಿಗೆ ಹಂತದಲ್ಲಿ ಒಂದಲ್ಲ ಒಂದು ಕೀಟ ಮತ್ತು ರೋಗದ ಹಾವಳಿ ಇರುತ್ತದೆ. ಕೆಲವೊಂದು ಕೀಟ ರೋಗಗಳು ಕಡಿಮೆ ಪ್ರಮಾಣದಲ್ಲಿ ಹಾನಿ ಮಾಡಿದರೆ ಕೆಲವೊಂದು ಪೂರ್ತಿ ಬೆಳೆಯನ್ನೇ ನಾಶ ಮಾಡಿ ರೈತರನ್ನು ಸಂಕಷ್ಟಕ್ಕಿಡುಮಾಡುತ್ತವೆ. ಅದಕ್ಕೆ ಈ ಸಮಸ್ಯೆಯಿಂದ ರೈತರನ್ನು ಪಾರು ಮಾಡಲು ಕೃಷಿ ವಿದ್ಯಾರ್ಥಿಗಳ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಗುಂಪು ಚರ್ಚೆಯಲ್ಲಿ ಕೃಷಿ ವಿದ್ಯಾರ್ಥಿಗಳಾದ ವೈಶಾಲಿ ಮತ್ತು ಗಜೇಂದ್ರರವರು ಮಾತನಾಡಿ, ಬಾಳೆಯಲ್ಲಿ ಹೇಗೆ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಮಾಡಬಹುದೆಂದು ಒಂದೊಂದಾಗಿ ವಿವರಿಸಿದರು.
ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಕೀಟಗಳಾದ ಗಡ್ಡೆ ಕೊರೆಯುವ ಮೂತಿಹುಳು, ಹುಸಿ ಕಾಂಡ ಕೊರೆಯುವ ಮೂತಿಹುಳು, ಬಾಳೆಯ ಪತಂಗ ಹಾಗೂ ರೋಗಗಳಾದ ಪನಾಮ ಸೊರಗು ರೋಗ, ಮೊಕೊ ಸೊರಗು ರೋಗ, ಹಣ್ಣು ತುದಿ ಕೊಳೆರೋಗ, ಸಿಗಟೋಕ ಎಲೆ ಚುಕ್ಕೆ ರೋಗ ಮತ್ತು ಗಡ್ಡೆ ಕೊಳೆ ಮತ್ತು ಸುಳಿಕೊಳೆ ರೋಗದ ಲಕ್ಷಣಗಳು, ಹಾನಿಯ ವಿಧ ಹಾಗೂ ಅವುಗಳನ್ನು ಯಾವ ರೀತಿ ನಿರ್ವಹಣೆ ಮಾಡಬಹುದೆಂದು ವಿವರಿಸಿದರು.
ಕೇವಲ ರಾಸಾಯನಿಕ ವಿಧಾನಗಳಲ್ಲದೆ ಸಾವಯುವ ವಿಧಾನಗಳಿಂದ ಯಾವ ರೀತಿ ನಿರ್ವಹಿಸಬೇಕೆಂದು ತಿಳಿಸಿಕೊಟ್ಟರು. ರೋಗ ಮತ್ತು ಕೀಟಕ್ಕೆ ಅನುಗುಣವಾಗಿ ಔಷಧಿಯನ್ನು ಯಾವ ರೀತಿ ಬಳಸಬೇಕೆಂದು ತಿಳಿಸಿದರು ಗುಂಪು ಚರ್ಚೆಯ ಕೊನೆಯಲ್ಲಿ ರೈತರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















