ಬೆಂಗಳೂರು: ನಿಮ್ಮ ಧಮ್ಕಿಗಳಿಗೆಲ್ಲಾ ಹೆದರುವವನು ನಾನಲ್ಲ, ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ನಮ್ಮದು. ನೀವು ಏನು ಮಾಡಿದಕ್ಕು ಪ್ರತಿಯಾಗಿ ತಿರುಗೇಟು ನೀಡಲು ನಮಗೂ ಬರುತ್ತದೆ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚಾಟಿ ಬೀಸಿದ್ದಾರೆ.
ಪರ್ಸೆಂಟೇಜ್ ಜನಕ ಎಂದು ತಮ್ಮ ವಿರುದ್ಧ ಆರೋಪ ಮಾಡಿದ್ದ ಕುಮಾರಸ್ವಾಮಿ ವಿರುದ್ದ ಇಂದು ಮಾತನಾಡಿದ ಬಿಎಸ್ವೈ, ಕುಮಾರಸ್ವಾಮಿ ಮತ್ತು ಕುಟುಂಬದವರೂ ಅನೇಕ ಭೂ ಹಗರಣ ಮಾಡಿದ್ದರು. ಪುಸ್ತಕ ಮುದ್ರಿಸಿ ಹಂಚಿದ್ದು, ಇದರಲ್ಲಿ ಗುಟ್ಟೇನಿಲ್ಲ. ರಾಜ್ಯದ ಇತಿಹಾಸದಲ್ಲಿ ಅವರ ಕುಟುಂಬ ಮಾಡಿದಷ್ಟು ಭೂ ಹಗರಣಗಳನ್ನು ಬೇರೆ ಯಾರೂ ಮಾಡಿಲ್ಲ ಎಂದು ಕಿಡಿ ಕಾರಿದರು.
ಸಿಎಂ ಸ್ಥಾನ ಶಾಶ್ವತ ಅಲ್ಲ ಎಂದು ಚಾಟಿ ಬೀಸಿದ ಬಿಎಸ್ವೈ, ಸೇಡು ತೀರಿಸಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಸೇಡು ತೀರಿಸಿಕೊಳ್ಳುವ ರಾಜಕಾರಣ ಮಾಡಿರಲಿಲ್ಲ ಎಂದರು.

















