ಬೆಂಗಳೂರು: ಸ್ಯಾಂಡಲ್ ವುಡ್ನ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ(90) ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಸದಾಶಿವ ಅವರು ನಿನ್ನೆಯೇ ಕೊನೆಯುಸಿರೆಳೆದಿದ್ದು, ಇಂದು ಸುದ್ದಿ ಹೊರಬಿದ್ದಿದೆ ಎಂದು ವರದಿಯಾಗಿದೆ.
ಸಾಯುವ ಮುನ್ನ ಸದಾಶಿವ್ ಅವರು ನನ್ನ ಕೊನೆಯ ಸುದ್ದಿ ನನ್ನ ಕುಟುಂಬದವರಿಗೆ ಬಿಟ್ಟು ಬೇರೆಯವರಿಗೆ ತಿಳಿಯಬಾರದು ಎಂದಿದ್ದರು ಎನ್ನಲಾಗಿದೆ. ಬನಶಂಕರಿಯ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆಯನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕುಮಟಾದಲ್ಲಿ ತಿರುಗಾಡುತ್ತಿದ್ದರು. ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ನಟರಾದ ಶಿವರಾಜ್ ಕುಮಾರ್, ಸುದೀಪ್ ಮೊದಲಾದವರು ನೆರವಾಗಿದ್ದರು. ಆ ಬಳಿಕ ಕುಟುಂಬದವರೊಂದಿಗೆ ವಾಸವಾಗಿದ್ದರು.
ಕನ್ನಡ ಧಾರವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಸದಾಶಿವ ಬ್ರಹ್ಮಾವರ್ ಅವರು ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್ಕುಮಾರ್, ಸುದೀಪ್, ದರ್ಶನ್.. ಹೀಗೆ ಕನ್ನಡ ಚಿತ್ರರಂಗದ ನಾಲ್ಕು ಜನರೇಷನ್ ಸ್ಟಾರ್ಗಳೊಂದಿಗೆ ಈ ಹಿರಿಯ ಕಲಾವಿದ ಅಭಿನಯಿಸಿದ್ದರು. ಕೊನೆಯದಾಗಿ ಶಿವರಾಜ್ ಕುಮಾರ್ ಅಭಿನಯದ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲಿ ನಟಿಸಿದ್ದರು.
Discussion about this post