ಭದ್ರಾವತಿ: ಲೋಕಸಭೆಗೆ ರಾಜ್ಯದಲ್ಲಿ ಎರಡನೆಯ ಹಂತದ ಮತದಾನ ಇಂದು ನಡೆಯುತ್ತಿದ್ದು, ನಗರದಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆ ಹಾಗೂ ಭಾರೀ ಗಾಳಿಯ ಪರಿಣಾಮ ಸುಮಾರು ಒಂದು ಗಂಟೆಯಷ್ಟು ಕಾಲ ಮತದಾನಕ್ಕೆ ಅಡ್ಡಿಯಾಗಿತ್ತು.

ಮಧ್ಯಾಹ್ನ 1.30ರ ವೇಳೆಗೆ ಮೋಡಕವಿದ ವಾತಾವರಣ ಆವರಿಸಿದ್ದು, 2.30ರ ವೇಳೆಗೆ ಸುಮಾರು 45 ನಿಮಿಷಗಳ ಕಾಲ ಮಳೆ ಸುರಿಯಿತು. ಮಳೆಗಿಂತಲೂ ಹೆಚ್ಚಾಗಿ ಭಾರೀ ಗಾಳಿ ಬೀಸಿದ ಪರಿಣಾಮ ಮತ ಚಲಾವಣೆಗಾಗಿ ಬಂದಿದ್ದ ಮತದಾರರು ಕೆಲ ಕಾಲ ಚದುರಿಹೋದರು.

ಬೇಸಿಗೆಯ ಬಿಸಿಲಿಗೆ ಒಣಗಿಹೋಗಿದ್ದ ಮರದ ಕೊಂಬೆಗಳು ಭಾರೀ ಗಾಳಿಯ ಪರಿಣಾಮ ಹಲವೆಡೆ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರಕ್ಕೆ ಕೊಂಚ ಅಡ್ಡಿಯಾಗಿತ್ತು.

ತಾಲೂಕು ಕಚೇರಿ ರಸ್ತೆಯಲ್ಲಿ ಮರದ ಸಣ್ಣ ಸಣ್ಣ ಕೊಂಬೆಗಳು ಬಿದ್ದಿದ್ದ ಪರಿಣಾಮ ದ್ವಿಚಕ್ರ ವಾಹನ ಸಂಚಾರಕ್ಕೆ ಕೊಂಚ ಅಡಚಣೆಯಾಗಿತ್ತು. ಸುಮಾರು 4 ಗಂಟೆಯವರೆಗೂ ನಗರದಲ್ಲಿ ಮೋಡಕವಿದ ವಾತಾವರಣವಿದ್ದು, ಮತದಾನಕ್ಕೆ ಅಲ್ಪ ಅಡ್ಡಿಯಾಗುತ್ತದೆಯೇ ಎಂಬ ಆತಂಕ ಮೂಡಿದೆ.
















