ಮಂಡ್ಯ: ಲೋಕಸಭಾ ಚುನಾವಣೆ ಕಾವು ಒಂದೆಡೆ ಏರುತ್ತಿರುವಂತೆಯೇ ಇನ್ನೊಂದೆಡೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಪ್ತ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೈಸೂರಿನ ಚಿನಕುರಳಿಯಲ್ಲಿರುವ ಪುಟ್ಟರಾಜು ಅವರ ಮನೆ ಮೇಲೆ ಬೆಳಗ್ಗೆ ಐಟಿ ದಾಳಿ ನಡೆದಿದ್ದು, ಮೈಸೂರಿನ ವಿಜಯನಗರದಲ್ಲಿರುವ ಪುಟ್ಟರಾಜು ಅಣ್ಣನ ಮಗ ಅಶೋಕ್ ಮನೆ ಮೇಲೆಯೂ ದಾಳಿ ನಡೆದಿದೆ.
ನಸುಕಿನ ವೇಳೆಯಲ್ಲಿ ಆಗಮಿಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಚುನಾವಣೆಯ ವೇಳೆಯಲ್ಲಿಯೇ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ತಂಡದಲ್ಲಿರುವ ಎಲ್ಲ ಅಧಿಕಾರಿಗಳಿಗೆ ಸಿಆರ್’ಪಿಎಫ್ ಯೋಧರ ಭದ್ರತೆ ಒದಗಿಸಲಾಗಿದೆ.
ಇನ್ನು ಐಟಿ ದಾಳಿ ಕುರಿತಂತೆ ಮಾತನಾಡಿರುವ ಪುಟ್ಟರಾಜು, ದಾಳಿ ಕುರಿತಾಗಿ ನಮಗೆ ಮೊದಲೇ ಶಂಕೆಯಿದ್ದು, ಇದು ರಾಜಕೀಯ ಪ್ರೇರಿತವಾಗಿದೆ ಎಂದಿದ್ದಾರೆ.
ನಾವು ಈ ಐಟಿ ದಾಳಿಗೆಲ್ಲಾ ಹೆದರುವುದಿಲ್ಲ. ಎಲ್ಲ ದಾಖಲೆಗಳೂ ಸಹ ಸರಿಯಾಗಿವೆ. ನಾವು ನಡೆಸುತ್ತಿರುವ ಎಲ್ಲ ಉದ್ಯಮಗಳ ಕುರಿತಾಗಿನ ದಾಖಲೆಗಳನ್ನು ಹೊಂದಿದ್ದೇವೆ ಎಂದಿದ್ದಾರೆ.
ಬೆಂಗಳೂರಿನ ಉದ್ಯಮಿಗಳಿಗೂ ಐಟಿ ಶಾಕ್
ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಬೆಂಗಳೂರಿನ ಹಲವು ಉದ್ಯಮಿಗಳ ಮನೆಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿದೆ.
ಬೆಂಗಳೂರು ಉದ್ಯಮಿ ಸೌತ್ ಎಂಡ್ ಸರ್ಕಲ್’ನಲ್ಲಿರುವ ಸಿದ್ದಿಕ್ ಶೇಟ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಸೌತ್ ಎಂಡ್ ಸರ್ಕಲ್ ಬಳಿ ಇರೋ ಸಿದೀಕ್ ಸೆಟ್ ಮನೆ ಮೇಲೆ ದಾಳಿಯಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಸಿದ್ದಿಕ್ ಸೇಟ್ ಮೂಲತಃ ಜೋಳದ ವ್ಯಾಪಾರಿ ಎಂದು ಹೇಳಲಾಗಿದ್ದು ಮೂರು ಜನ ಅಧಿಕಾರಿಗಳ ತಂಡ ಅನೇಕ ಮಾಹಿತಿ ಕಲೆ ಹಾಕಿ ತೆರಳಿದೆ.
Discussion about this post