ಜೈಪುರ: ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್’ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ಕ್ರಮ ಆರಂಭವಷ್ಟೆ. ಮುಂದೇನಾಗುತ್ತದೆ ಎಂದು ಕಾದು ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಭಾರತದ ರಾಜತಾಂತ್ರಿಕತೆಗೆ ದೊರೆತ ದೊಡ್ಡ ಗೆಲುವಿದು. ಉಗ್ರವಾದವನ್ನು ಬೇರುಸಹಿತ ನಿರ್ನಾಮ ಮಾಡುವುದರಲ್ಲಿ ನಮ್ಮ ದೇಶಕ್ಕೆ ದೊರೆತ ಬಹುದೊಡ್ಡ ಯಶಸ್ಸಾಗಿದೆ ಎಂದಿದ್ದಾರೆ.
ಮಸೂದ್ ಅಜರ್ ನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಒಮ್ಮತದಿಂದ ಘೋಷಿಸಲಾಯಿತು ಎಂಬುದು ಸಮಾಧಾನಕರ ವಿಷಯ, ಆಗದೇ ಇರುವುದಕ್ಕಿಂತ ವಿಳಂಬವಾಗಿ ಆಗಿದೆ ಎಂದಿದ್ದಾರೆ.
ಇನ್ನು, ಭಾರತದ ಒತ್ತಡಕ್ಕೆ ಮಣಿದ ಚೀನಾ ಉಗ್ರ ಮಸೂದ್ ಅಜರ್ ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಆಕ್ಷೇಪಣೆ ಹಿಂಪಡೆದ ಹಿನ್ನೆಲೆಯಲ್ಲಿ ಇದೀಗ ವಿಶ್ವಸಂಸ್ಧೆಯ ಭದ್ರತಾ ಮಂಡಳಿ ಅಜರ್’ನನ್ನು ಜಾಗತಿಕ ಪಟ್ಟಿಗೆ ಸೇರಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ದಾಳಿ ಬಳಿಕ ಜೈಶ್ ಇ ಮೊಹಮ್ಮದ್ ಉಗ್ರಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕು ಎಂದು ವಿಶ್ವಸಂಸ್ಧೆಯ ಭದ್ರತಾ ಮಂಡಳಿಗೆ ಮನವಿ ಮಾಡಿತ್ತು.

















