ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.
ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.
ಹರತಾಳು, ಮಾರುತಿಪುರ, ಬ್ರಹ್ಮೇಶ್ವರ, ಜಯನಗರ, ರಾಮಚಂದ್ರಾಪುರ, ಸಂಪೆಕಟ್ಟೆ, ಮಾವಿನಕೊಪ್ಪ, ಕರಂಗೊಳ್ಳಿ ಭಾಗಗಳಲ್ಲಿ ಒಲವು-ನಿಲುವು ಹೀಗಿದೆ:
ಹರತಾಳು:
ಈ ಗ್ರಾಮ ಪಂಚಾಯ್ತಿಯಲ್ಲಿ 5 ಗ್ರಾಮಗಳಿವೆ. ಸುಮಾರು 1800 ಮತಗಳಿರುವ ಇಲ್ಲಿ, ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಶೇ.60ರಷ್ಟು ಮತ ಪಡೆದಿತ್ತು. ಇಲ್ಲಿನ ನಂಜುವಳ್ಳಿಯಲ್ಲಿ ಸುಮಾರು 800 ಮತಗಳಿದ್ದು, ಯುವ ಮತದಾರರ ಸಂಖ್ಯೆ ಶೇ.25ರಷ್ಟಿದೆ.
ಚುನಾವಣೆ ಘೋಷಣೆಯಾದ ಮೇಲೆ ಯಾವ ಪಕ್ಷದ ಪ್ರಮುಖ ನಾಯಕರು ಯಾರೂ ಬಂದಿಲ್ಲ. ಇಲ್ಲಿನ ಜನ ಪಕ್ಷವನ್ನು ನೋಡುತ್ತಾರೆಯೇ ವಿನಾ, ವ್ಯಕ್ತಿಯನ್ನಲ್ಲ. ಅಲ್ಲದೇ, ಇಲ್ಲಿಯೂ ಸಹ ಮೋದಿ ಅಲೆ ಕೆಲಸ ಮಾಡುವ ಸಾಧ್ಯತೆಯಿದೆ.
-ಮಧುಸೂಧನ್, ಕೃಷಿಕರು, ಹರತಾಳು
ಮೋದಿ ಅಲೆಯಿಂದಾಗಿ ಬಿಜೆಪಿಗೆ ಕೊಂಚ ಮಾತ್ರ ಹೆಚ್ಚು ಮತ ಬರಬಹುದು. ಜಾತಿಯ ವಿಚಾರವೂ ಇಲ್ಲಿನ ಜನರ ಅಂಶವಾಗಿದ್ದು, ಇದೂ ಸಹ ಸಾಕಷ್ಟು ಕೆಲಸ ಮಾಡುತ್ತದೆ.
-ರಾಮಚಂದ್ರ, ಕೃಷಿಕರು, ಹರತಾಳು
ಮಾರುತಿಪುರ:
ಈ ಗ್ರಾಮ ಪಂಚಾಯ್ತಿಯಲ್ಲಿ ಆರು ಬೂತ್, 25 ಗ್ರಾಮಗಳಿದ್ದು, ಸುಮಾರು 4.5 ಸಾವಿರ ಮತದಾರಿದ್ದಾರೆ. ಇಲ್ಲಿನ ಗ್ರಾಮ ಪಂಚಾತ್’ನಲ್ಲಿ ಬಿಜೆಪಿಯೇ ಲೀಡ್ ಆಗಿದ್ದರೂ, ಮೀಸಲಾತಿಯಿಂದಾಗಿ ಅಧ್ಯಕ್ಷಗಿರಿ ಬೇರೆ ಪಕ್ಷಕ್ಕೆ ಹೋಗಿದೆ.
ನಮ್ಮಲ್ಲಿ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಬಡವರಿಗೆ ದೊರೆತಿದ್ದು, ಇದು ಮೋದಿ ಅಲೆಯನ್ನು ಸೃಷ್ಠಿಸಿದೆ. ಆದರೆ, ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್ ವ್ಯತ್ಯಯ ನಿರಂತರವಾಗಿದೆ. ಈ ಭಾಗದಲ್ಲಿ ಈ ಸಮಸ್ಯೆಯನ್ನು ಪರಿಹಾರ ಮಾಡಿದರೆ, ರೈತಾಪಿ ವರ್ಗಕ್ಕೆ ಸಹಾಯವಾಗಲಿದೆ.
-ದೇವೇಂದ್ರ, ಕೃಷಿಕ, ಮಾರುತಿಪುರ
ನಮ್ಮೂರಲ್ಲಿ ವಿದ್ಯುತ್ ವ್ಯತ್ಯಯದ್ದೇ ಮುಖ್ಯ ಸಮಸ್ಯೆಯಾಗಿ ಕಾಡುತ್ತಿದೆ. ದಿನಕ್ಕೆ 3-4 ಗಂಟೆ ವಿದ್ಯುತ್ ಇದ್ದರೆ ಹೆಚ್ಚು. ಇದನ್ನು ಮೀರಿ ಇದ್ದರೂ ಸಿಂಗಲ್ ಫ್ಯೂಸ್ ಆಗಿರುತ್ತದೆ. ಆದರೂ ಚುನಾವಣೆ ಎಂದು ನೋಡುತ್ತಿರುವಾಗ ದೇಶದ ವಿಚಾರವೂ ಮುಖ್ಯವಾಗಿದ್ದು, ರಾಷ್ಟ್ರದ ಬಡವರ್ಗಕ್ಕೆ ಕೇಂದ್ರ ಸರ್ಕಾರ ನೀಡಿರುವ ಹಲವು ಯೋಜನೆಗಳು ಉಪಕಾರಿಯಾಗಿದೆ ಎಂದಷ್ಟೇ ಹೇಳುತ್ತೇನೆ.
-ಅಶೋಕ್, ಮಾರುತಿಪುರ
ಹಾಲಿ ಸಂಸದರು ಜನರಿಗೆ ಸ್ಪಂದಿಸುತ್ತಾರೆ. ಅಲ್ಲದೇ ಸ್ಥಳೀಯ ಶಾಸಕರಿಂದ ಅಭಿವೃದ್ಧಿ ಕಾರ್ಯಗಳೂ ಸಹ ನಡೆಯುತ್ತಿದ್ದು, ಇದರೊಂದಿಗೆ ಮೋದಿ ಅಲೆಯೂ ಸಹ ಸೇರಿಕೊಂಡಿದೆ. ಆದರೆ, ಸ್ಥಳೀಯ ಸಮಸ್ಯೆಗಳಿಗೆ ಇನ್ನೂ ಸ್ಪಂದಿಸಬೇಕಿದೆ. ಅಲ್ಲದೇ ಚುನಾವಣೆ ವಿಚಾರದಲ್ಲಿ ಜಾಗೃತಿ ಇನ್ನೂ ಹೆಚ್ಚಿನದಾಗಿ ಮೂಡಬೇಕಿದ್ದರೂ, ನಮ್ಮಲ್ಲಿ ಜನ ಸ್ಥಳೀಯ ಸಮಸ್ಯೆಗಿಂತಲೂ ಈ ಚುನಾವಣೆಯಲ್ಲಿ ದೇಶದ ರಕ್ಷಣೆ ಹಾಗೂ ಅಭಿವೃದ್ಧಿಯನ್ನು ನೋಡುತ್ತಿದ್ದಾರೆ. ದೇಶ ಚೆನ್ನಾಗಿದ್ದರೆ ಮಾತ್ರ ನಾವೂ ಚೆನ್ನಾಗಿರುತ್ತೇವೆ.
-ಸಂದೇಶ್, ಎಸ್. ಶಿವರಾಜ್, ಗಣಪತಿ(ಪುರಪ್ಪೆಮನೆ),
ಬ್ರಹ್ಮೇಶ್ವರ:
ಸುಮಾರು 1198 ಮತಗಳಿರುವ ನಮ್ಮಲ್ಲಿ ಉಪಚುನಾವಣೆಯಲ್ಲಿ 899 ಮತ ಚಲಾವಣೆಯಾಗಿದ್ದು, 600ಕ್ಕೂ ಅಧಿಕ ಬಿಜೆಪಿಗೆ ಚಲಾವಣೆಯಾಗಿದ್ದು, ಉಳಿದದ್ದು ಮೈತ್ರಿ ಪಕ್ಷಕ್ಕೆ ಹೋಗಿತ್ತು. ನಮ್ಮೂರಲ್ಲಿ ಮತ ಹಾಕುವ ವೇಳೆ ಜಾತಿ ನೋಡುತ್ತಾರೆ. ಅದನ್ನು ಮೀರಿ ನಮ್ಮಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಓವರ ಹೆಡ್ ಟ್ಯಾಂಕ್ ಆಗಬೇಕಿದೆ. ಇದನ್ನು ಮಾಡಿಕೊಡುವವರಿಗೆ ನಮ್ಮ ಬೆಂಬಲ.
ನಾವು ಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಆದರೆ, ಈಗ ನಮ್ಮ ಪಕ್ಷದ ಚಿನ್ಹೆಯೇ ಇಲ್ಲದಿರುವುದರಿಂದ ಅನಿವಾರ್ಯವಾಗಿ ಬಿಜೆಪಿಯನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ.
ನಾವು ಕೃಷಿಕರಾಗಿದ್ದು, ನಮಗೆ ಇಲ್ಲಿ ವಿದ್ಯುತ್ ಸಮಸ್ಯೆಯೇ ಮುಖ್ಯವಾಗಿ ಕಾಡುತ್ತಿದೆ. ಅಲ್ಲದೇ, ಇಲ್ಲಿನ ಮುಖಂಡರು ನಮಗೆ ತಾರತಮ್ಯ ಮಾಡುತ್ತಿದ್ದು, ಸರ್ಕಾರಿ ಯೋಜನೆಗಳು ನಮಗೆ ದೊರೆತಿಲ್ಲ. ಹೀಗಾಗಿ, ಯಾರನ್ನು ಬೆಂಬಲಿಸುವುದು ಎಂಬುದನ್ನು ಇನ್ನೂ ತೀರ್ಮಾನ ಮಾಡಿಕೊಂಡಿಲ್ಲ.
ಸರ್, ಯಾವುದೇ ವಿಚಾರವಿರಲಿ ನಮಗೆ ದೇಶ ಮೊದಲು, ಉಳಿದದ್ದೆಲ್ಲಾ ಆನಂತರ. ಹೀಗಾಗಿ, ನಾವು ಕೇಂದ್ರದ ಕೆಲಸಗಳನ್ನು ನೋಡಿ ಬೆಂಬಲಿಸುತ್ತೇವೆ. ನಮ್ಮಲ್ಲಿ ಮೋದಿ ಅಲೆಯಿದ್ದು, ಇದು ಶೇ.10ರಷ್ಟು ಮತವನ್ನು ಬಿಜೆಪಿಗೆ ತಂದುಕೊಡುತ್ತದೆ. ಇದೆಲ್ಲದರ ಹೊರತಾಗಿ, ನಮ್ಮೂರಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಬಿಎಸ್’ಎನ್’ಎಲ್ ಟವರ್ ಆಗಿದ್ದು ನಮಗೆ ದೊಡ್ಡ ಉಪಕಾರವಾಗಿದೆ.
ಸರ್, ಜನ ಈಗ ಮೋದಿ ಅಥವಾ ಬಿಎಸ್’ವೈ ಅನ್ನುತ್ತಿಲ್ಲ. ಬದಲಾಗಿ ದೇಶದ ವಿಚಾರವನ್ನು ಮೊದಲು ಮಾತನಾಡುತ್ತಾರೆ. ಅಂದರೆ ಜನ ಅಷ್ಟು ಪ್ರಜ್ಞಾವಂತರಾಗಿದ್ದು, ಚಿಂತಿಸುತ್ತಾರೆ. ಇಲ್ಲಿ ಶೇ.50ರಷ್ಟು ಈಡಿಗರಿದ್ದು, ಸ್ಥಳೀಯ ಶಾಸಕರು ಇನ್ನೂ ಹೆಚ್ಚು ಸಕ್ರಿಯರಾಗಬೇಕು. ಒಟ್ಟಾರೆ ಇಲ್ಲಿ 50:50 ಅವಕಾಶಗಳು ಇಬ್ಬರೂ ಅಭ್ಯರ್ಥಿಗಳಿಗಿದೆ.
-ಚನ್ನಬಸಪ್ಪ, ಮಾರುತಿಪುರ
ಜಯನಗರ:
ಮೇಲಿನ ಬಸಗಿ ಗ್ರಾಮ ಪಂಚಾಯ್ತಿಯ ಇಲ್ಲಿ 9 ಹಳ್ಳಿಗಳಿದ್ದು, ಅಂದಾಜು 5 ಸಾವಿರ ಮತದಾರರಿದ್ದಾರೆ. ಉಪಚುನಾವಣೆಯಲ್ಲಿ ಶೇ.75ರಷ್ಟು ಮತದಾನವಾಗಿದ್ದು, ಇದರಲ್ಲಿ 60-40 ಹಂಚಿಕೆಯಾಗಿತ್ತು. ಅಂದರೆ, ಬಿಜೆಪಿಗೆ ಲೀಡ್ ದೊರೆತಿತ್ತು. ಹಾಲಿ ಸಂಸದರು ಜನರಿಗೆ ಹೆಚ್ಚು ಸ್ಪಂದಿಸುತ್ತಿದ್ದು, ಇಲ್ಲಿ ಮೋದಿ ಅಲೆಯೂ ಸಹ ಬಲವಾಗಿದೆ. ನಮ್ಮೂರಿನಲ್ಲಿ ನೀರು ಹಾಗೂ ವಿದ್ಯುತ್ ಸಮಸ್ಯೆ ತಾಂಡವವಾಡುತ್ತಿದ್ದು, ದೂರು ನೀಡಿ ನೀಡಿ ಸಾಕಾಗಿದೆ. ಬಿಎಸ್’ಎನ್’ಎಲ್ ನೆಟ್’ವರ್ಕ್ ಸಹ ತೊಂದರೆಯಿದೆ.
ರಾಮಚಂದ್ರಾಪುರ:
ಈ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಉಪಚುನಾವಣೆಯಲ್ಲಿ ಸುಮಾರು 630 ಮತಗಳೊಂದಿಗೆ ಬಿಜೆಪಿಗೆ ಲೀಡ್ ದೊರೆತಿತ್ತು. ನಮ್ಮದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿದ್ದು, ಈಗಿನ ಶಾಸಕರು ಜನರಿಗೆ ಸಿಗುತ್ತಾರೆ. ಮೋದಿ ಅಲೆಯೂ ಸಹ ನಮ್ಮ ಊರಿನಲ್ಲಿದೆ.
ಸಂಪೆಕಟ್ಟೆ:
ನಮ್ಮೂರಿನಲ್ಲಿ ವಿದ್ಯುತ್ ಹಾಗೂ ರಸ್ತೆ ಸಮಸ್ಯೆಯಿದೆ. ಯಾರು ಬಂದರೂ ಸಹ ಇದನ್ನು ಪರಿಹಾರ ಮಾಡಲಿಲ್ಲ. ಈಗ ಚುನಾವಣೆ ಬಂದ ವೇಳೆಯಲ್ಲಿ ರಸ್ತೆ ಮಾಡಲಾಗುತ್ತಿದೆ ಅಷ್ಟೆ. ಶಾಸಕರು ಹಾಗೂ ಸಂಸದರು5 ವರ್ಷದಲ್ಲಿ ಬಂದಿಲ್ಲ. ಆದರೆ, ಈ ಚುನಾವಣೆಗಾಗಿ ಬಂದಿದ್ದಾರೆ.
ಮಾವಿನಕೊಪ್ಪ:
ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪಿಯ ಇಲ್ಲಿ, ಸುಮಾರು 4 ಸಾವಿರ ಮತದಾರರಿದ್ದಾರೆ. ಉಪಚುನಾವಣೆಯಲ್ಲಿ ಶೇ.47ರಷ್ಟು ಬಿಜೆಪಿಗೆ ಹಾಗೂ ಶೇ.23ರಷ್ಟು ಇತರರಿಗೆ ಮತ ಚಲಾವಣೆಯಾಗಿತ್ತು. ಇಲ್ಲಿ ಮೋದಿ ಅಲೆ ಜೋರಾಗಿದ್ದು, ಇದೇ ವಾತಾವರನ್ನು ಕಾಯ್ದುಕೊಂಡಿದ್ದೇ ಆದರೆ, ಬಿಜೆಪಿಗೆ ಲೀಡ್ ನಿಶ್ಚಿತ. ಇದೇ ವೇಳೆ ಶಾಸಕ ಹಾಲಪ್ಪ ಜನ ಸಾಮಾನ್ಯರಿಗೆ ದೊರೆಯುತ್ತಿಲ್ಲ ಎಂಬ ಆರೋಪ ಜೋರಾಗಿದೆ.
1 ಸಾವಿರ ಮತಗಳನ್ನು ಹೊಂದಿರುವ ಇಲ್ಲಿ, ಕಳೆದ ಬಾರಿ 811 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ ಸುಮಾರು 600 ಬಿಜೆಪಿಗೆ ಒಲಿದಿತ್ತು. ಈ ಬಾರಿ ಸುಮಾರು ಶೇ.75ರಷ್ಟು ಮಂದಿ ಕೇಂದ್ರ ಸರ್ಕಾರವನ್ನು ಬೆಂಬಲಿಸುವ ವಾತಾವರಣ ನಮ್ಮಲ್ಲಿದೆ. ಹಾಲಿ ಸಂಸದರ ಕೆಲಸ ಹಾಗೂ ಮೋದಿ ಅಲೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿಗೆ ಸಹಕಾರಿಯಾಗಲಿದೆ. ಆದರೂ, ಶಾಸಕರು ಕ್ಷೇತ್ರದಲ್ಲಿ ಇನ್ನೂ ಹೆಚ್ಚಾಗಿ ಜನಾನುರಾಗಿಯಾಗಬೇಕಿದೆ.
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಹಿಂದೆ ಪ್ರಾಬಲ್ಯವನ್ನು ಕೊಂದಿದ್ದ ಕಾಗೋಡು ತಿಮ್ಮಪ್ಪ ಅವರ ವರ್ಚಸ್ಸು ಈ ಭಾಗದಲ್ಲಿ ಕಡಿಮೆಯಾಗಿದ್ದು, ಬಿಜೆಪಿಗೆ ಹೆಚ್ಚಿನ ಒಲವಿದೆ. ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಹಾಗೂ ನೀರಿನ ಸಮಸ್ಯೆ ಈ ಭಾಗದಲ್ಲಿ ವಿಪರೀತವಾಗಿದ್ದು, ಇದು ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ಹೆಚ್ಚಾಗಿದೆ ಎನ್ನುವುದು ಬಹುತೇಕರವಾದ.
ಮೂಲಭೂತ ಅಗತ್ಯಗಳು ಇಲ್ಲಿ ಒಂದಷ್ಟು ಆಗಿದ್ದರೂ, ವಿದ್ಯುತ್ ಕೊರತೆ ತಾಂಡವಾಡುತ್ತಿರುವುದು ಸ್ಥಳೀಯರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಮೋದಿ ಅಲೆಯೂ ಸಹ ಇಲ್ಲಿ ಕೆಲಸ ಮಾಡಲಿದ್ದು, ಬಂಗಾರಪ್ಪ ಅವರ ಹೆಸರು ಮೈತ್ರಿ ಅಭ್ಯರ್ಥಿಗೆ ಒಂದಷ್ಟು ವರದಾನವೂ ಆಗಲಿದೆ. ಒಟ್ಟಾರೆಯಾಗಿ ನೋಡುವುದಾದರೆ ಇಲ್ಲಿ ಬಹುತೇಕ ಸಮಸಮ ಕಾದಾಟವಿದ್ದರೂ, ಗಡಿ ಅಂತರದಲ್ಲಿ ಹಾಲಿ ಸಂಸದರಿಗೆ ಒಲಿಯುವ ಸಾಧ್ಯತೆಯಿದೆ ಎನ್ನಬಹುದು.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Discussion about this post