ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸುಳ್ಯ: ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದ್ದು, ನಾಳೆ ಅಥವಾ ನಾಡಿದ್ದು, ಏಳು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಪುಟ ವಿಸ್ತರಣೆಯ ನಿರ್ಧಾರದ ಬೆನ್ನಲ್ಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯೂ ಸಹ ದೊಡ್ಡದಾಗುತ್ತಲೇ ಇದೆ. ಇದೇ ವೇಳೆ ದಕ್ಷಿಣ ಕನ್ನಡದ ಸುಳ್ಯ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಎಸ್. ಅಂಗಾರ ಅವರು ಈ ಬಾರಿಯಾದರೂ ಸಚಿವರಾಗುತ್ತಾರೆಯೇ ಎಂಬ ಪ್ರಶ್ನೆ ಈಗ ಮತ್ತೆ ಎದುರಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಗಾರ ಅವರಿಗೆ ಸಂಪುಟ ಸೇರುವ ಭಾಗ್ಯ ಮಾತ್ರ ದೊರೆತೇ ಇಲ್ಲ. ಹೀಗಾಗಿ, ಈ ಬಾರಿಯಾದರೂ ಅವರು ಸಚಿವರಾಗಬೇಕು ಎಂದು ಬೆಂಬಲಿಗರು ಹಾಗೂ ಸ್ಥಳೀಯ ಮುಖಂಡರು ಪಕ್ಷದ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಆದರೆ ಸ್ಥಳೀಯ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಅಂಗಾರ ಅವರಿಗೆ ಸಚಿವ ಸ್ಥಾನ ದೂರದ ಮಾತೇ ಸರಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸುಳ್ಯ ಬಿಜೆಪಿಯಲ್ಲಿ ಇತ್ತೀಚೆಗೆ ಗರಿಗೆದರಿರುವ ಭಿನ್ನಮತದ ಭೂತ ಪಂಚಾಯತ್ ಚುನಾವಣೆಯಲ್ಲೂ ಸಾಕಷ್ಟು ಪರಿಣಾಮ ಬೀರಿದೆ. ಅಲ್ಲದೇ ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ನೋಡುವುದೇ ಆದರೂ, ಐದು ಬಾರಿ ಶಾಸಕರಾಗಿದ್ದರೂ ಬಹಳಷ್ಟು ಗುರುತರವಾದ ಕೆಲಸಗಳು ಆಗಿಲ್ಲ. ದೂರದೃಷ್ಠಿತ್ವದ ಮಹತ್ತರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಇನ್ನೂ ಆಗಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಈ ಬೆಳವಣಿಗೆಗಳನ್ನೆಲ್ಲ ಗಮನಿಸಿರುವ ಬಿಜೆಪಿ ನಾಯಕತ್ವವು ಅಂಗಾರ ಅವರ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅಂಗಾರ ಅವರಿಗೆ ಸಚಿವ ಸ್ಥಾನ ದಕ್ಕದು ಎಂದು ಸ್ಥಳೀಯ ಬಿಜೆಪಿಯ ಆಂತರಿಕ ವಲಯಗಳು ಹೇಳುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post