ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಗುರು ಶಿಷ್ಯ ಸಂಬಂಧಕ್ಕೆ ಶ್ರೇಷ್ಟ ಉದಾಹರಣೆ ಡಾ. ಎಸ್ ರಾಧಕೃಷ್ಣನ್, ಮಕ್ಕಳಿಗೆ ತಂದೆ-ತಾಯಿ, ಶಾಲಾ ಶಿಕ್ಷಕರು, ಆಧ್ಯಾತ್ಮಿಕ ಗುರು ಎಂಬ ಮೂವರು ಮಾರ್ಗದರ್ಶಕರಿದ್ದು ಈ ಮೂವರು ಶ್ರೇಷ್ಟರಾದರೆ ಮಕ್ಕಳ ಭವಿಷ್ಯ ಅತೀ ಶ್ರೇಷ್ಟವಾಗಿ ಮೂಡಿಬರುತ್ತದೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಚಾರ್ಯ ವೈ. ಪಾಂಡುರಂಗ ನಾಯಕ್ ಹೇಳಿದರು.
ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಇಲ್ಲಿನ ಕ್ರೈಸ್ಟ್ ಕಿಂಗ್ Christ King ಶಿಕ್ಷಣ ಸಂಸ್ಥೆಯ ‘ಫಾ.ಎಫ್.ಪಿ.ಎಸ್ ಮೋನಿಸ್’ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಶಿಕ್ಷಕರಿಗೆ ಗೌರವ ನೀಡಿದರೆ ಮಕ್ಕಳ ಮನಸ್ಸಿನಲ್ಲಿಯೂ ತಮ್ಮ ಶಿಕ್ಷಕರ ಬಗ್ಗೆ ಗೌರವ ಮೂಡಲು ಸಾಧ್ಯ ಎಂದರು.
ಬೆಳ್ಮಣ್ಣುವಿನ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲಿಡ್ವಿನ್ ಅರಾನ್ಹ ಅವರಿಗೆ ‘ಕ್ರೈಸ್ಟ್ಕಿಂಗ್ ಶಿಕ್ಷಕ ರತ್ನ’ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರೆಂಜಾಳ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ಅಣ್ಣಿ.ಎಂ ಅವರಿಗೆ ‘ಕ್ರೈಸ್ಟ್ಕಿಂಗ್ ಕ್ರೀಡಾ ಶಿಕ್ಷಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಣ್ಣಿ.ಎಂ ಅವರು ತಮ್ಮ ವಿದ್ಯಾರ್ಥಿಗಳ ಬಾಯಿಯಿಂದ ಗುರುಗಳ ಬಗ್ಗೆ ಸಾರ್ಥಕ್ಯದ ಮಾತುಗಳನ್ನು ಕೇಳಿದರೆ ಅದಕ್ಕಿಂತ ಮಿಗಿಲಾದ ಪ್ರಶಸ್ತಿ ಇನ್ನೊಂದಿಲ್ಲ. ಮಕ್ಕಳು ಕ್ರೀಡೆಯಲ್ಲಿ ಸಾಧನೆ ಮಾಡಲು ಪೋಷಕರ ಬೆಂಬಲ ಅತೀ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ, ಒಂದು ದೇಶ ಸೂಪರ್ ಪವರ್ ಆಗುವುದಿದ್ದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದು ಶಕ್ತಿ ಅಡಗಿದ್ದು ಅದನ್ನು ಗುರುತಿಸಿ ಹೊರಗೆಳೆಯುವುದು ಶಿಕ್ಷಕರ ಕಾರ್ಯ. ಸಮಾಜದ ಕೆಡುಕುಗಳನ್ನು ಗುಣಪಡಿಸಲು ಇರುವ ಒಂದೇ ಮದ್ದು ಶಿಕ್ಷಣ. ವಿದ್ಯಾವಂತ, ಬುದ್ಧಿವಂತ ಹಾಗೂ ಪ್ರಜ್ಞಾವಂತ ಜನರು ಇರುವ ದೇಶ ಸಮೃದ್ಧವಾಗಿರುತ್ತದೆ ಎಂದು ಹೇಳಿದರು.
ಸಂಸ್ಥೆಯ ಪದವಿಪೂರ್ವ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ ಹಾಗೂ ಶಿಕ್ಷಕ ರಕ್ಷಕ ಸಂಘದ ಪದವಿಪೂರ್ವ ವಿಭಾಗದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.
Also read: Films with native flavor is Pan Indian: Ashok Kashyap
ಸಂಸ್ಥೆಯ ಹಿಂದಿ ಉಪನ್ಯಾಸಕಿ ಸುನೀತ ಸಾಲಿಯಾನ್ ಹಾಗೂ ಪ್ರಾಥಮಿಕ ಶಾಲಾ ಸಹಶಿಕ್ಷಕಿ ಶಾಜಿದಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ವೃಂದದವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ರೈಸ್ಟ್ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ವಾಲ್ಟರ್ ಡಿಸೋಜ, ಉಪಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಶಿಕ್ಷಕ ರಕ್ಷಕ ಸಂಘದ ಪ್ರಾಥಮಿಕ ವಿಭಾಗದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಸುಪ್ರಿಯಾ, ಜ್ಯೋತಿ ಬಬಿತಾ, ಶಕೀಲಾ ಶೆಟ್ಟಿ, ಸರಿಟಾ ನೊರೋನ್ಹ, ಗ್ರೆಟ್ಟಾ ತಾವ್ರೋ, ಒಲಿವಿಯಾ, ಕವಿತಾ ಪಾಯಸ್, ವನಿತಾ, ಲವಿಟಾ ಡಿಸೋಜ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ – ರಕ್ಷಕ ಸಂಘದ ಸದಸ್ಯ ಉದಯರವಿ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಅಧ್ಯಕ್ಷೆ ಹೇಮಲತಾ ವಂದಿಸಿದರು. ಸದಸ್ಯ ರಾಜೇಶ್ ಹಾಗೂ ವಿದ್ಯಾರ್ಥಿನಿ ಜಿಯಾ ಆಂಟೋನಿಯಾ ಕುಟಿನ್ಹೊ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post