ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಪ್ರತಿ ತಂದೆತಾಯಿಗಳೂ ತಮ್ಮ ಮಕ್ಕಳನ್ನು ಕಠಿಣ ಪರಿಶ್ರಮಿಗಳನ್ನಾಗಿ ರೂಪಿಸಿ, ಅವರ ಜೀವನ ಉನ್ನತ ಮಟ್ಟಕ್ಕೆ ಏರುದಂತೆ ಮಾಡಬೇಕು ಎಂದು ಮೂಡಬಿದ್ರೆ ಜೈನ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಖ್ಯಾತ ವಿದ್ವಾಂಸ ಮುನಿರಾಜ ರೆಂಜಾಳ ಕರೆ ನೀಡಿದರು.
ಇಲ್ಲಿನ ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಆರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ವಿದ್ಯಾವಂತರಾಗಿ ತಮ್ಮ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಂಡು ತಾವೂ ಚೆನ್ನಾಗಿ ಬದುಕಬೇಕು. ತಂದೆ ತಾಯಿಗಳು ಮಕ್ಕಳಿಗೆ ಅತಿಯಾದ ಸೌಲಭ್ಯ ನೀಡಿ ಹಾಳು ಮಾಡದೆ ಮಕ್ಕಳನ್ನು ಕಠಿಣ ಪರಿಶ್ರಮಿಗಳನ್ನಾಗಿ ರೂಪಿಸಬೇಕು ಎಂದರು.
ಕೆಲಸವನ್ನು ಮುಂದೂಡುವುದು, ಸೋಮಾರಿತನ, ಕೆಟ್ಟದರ ಕಡೆಗಿನ ಆಕರ್ಷಣೆ, ಸಮಯವನ್ನು ವ್ಯರ್ಥ ಮಾಡುವುದು, ಅತಿಯಾದ ಭಾವನಾತ್ಮಕತೆ ಮುಂತಾದವುಗಳನ್ನು ಮಕ್ಕಳು ತ್ಯಜಿಸಬೇಕು ಎಂದು ಹೇಳಿದರು.
Also read: ನಾನು ಮತ್ತು ಮಂಜುನಾಥ್ ಇಬ್ಬರು ಗೆಲ್ಲುತ್ತೇವೆ | ಆಯನೂರು ಮಂಜುನಾಥ್ ವಿಶ್ವಾಸ
ಕಾರ್ಕಳದ ಉದ್ಯಮಿ ವಿವೇಕಾನಂದ ಶೆಣೈ ಅವರು ಮಾತನಾಡಿ, “ಮಕ್ಕಳು ತಮ್ಮ ತಂದೆ ತಾಯಿ ಪಡುವ ಪರಿಶ್ರಮವನ್ನು ಮನಗಾಣಿಸಿಕೊಂಡು ಅದಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಓದಿನಕಡೆ ಗಮನ ನೀಡಿ ಸಾಧನೆ ಮಾಡಬೇಕು” ಎಂದು ಹೇಳಿದರು.
ಕ್ರೈಸ್ಟ್ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಮಕ್ಕಳು ಶಿಕ್ಷಣವನ್ನು ಶಿಕ್ಷೆ ಎಂದು ಪರಿಗಣಿಸದೆ ಶಿಕ್ಷಣವನ್ನು ಆನಂದಿಸುತ್ತಾ ಆಸ್ವಾದಿಸಬೇಕು. ನಾಳೆ ಏನಾಗಬೇಕು ಎಂಬುದನ್ನು ಇವತ್ತೇ ನಿರ್ಧರಿಸಬೇಕು. ಮಕ್ಕಳು ತಮ್ಮನ್ನು ತಾವು ಧನಾತ್ಮಕ ಬದಲಾವಣೆಗಳಿಗೆ ಒಳಪಡಿಸಿಕೊಳ್ಳಬೇಕು” ಎಂದು ಹೇಳಿದರು.
ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮಿ ನಾರಾಯಣ ಕಾಮತ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು.
ಸಂಸ್ಥೆಯ ಸಮಾಲೋಚಕಿ ಡಾ.ಸಿಸ್ಟರ್ ಶಾರ್ಲೆಟ್ ಸಿಕ್ವೇರಾ ಹಾಗೂ ಶಿಕ್ಷಕ-ರಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮೌನೇಶ್ವರ ಆಚಾರ್ಯ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ನೀಡಿದರು.
ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಢಾಲ್ಫ್ ಕಿಶೋರ್ ಲೋಬೊ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಣಿತಶಾಸ್ತ್ರ ಉಪನ್ಯಾಸಕಿ ಭಾರತಿ ನಾಯಕ್ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















