ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ನಮ್ಮ ಸೈನಿಕರು ನಮ್ಮ ಹೆಮ್ಮೆ, ಏಕೆಂದರೆ ಭಾರತೀಯ ಸೈನಿಕರಿಗೆ ಇರುವಷ್ಟು ಸಾಮಾರ್ಥ್ಯ ಹಾಗೂ ಸಮರ್ಪಣಾ ಮನೋಭಾವ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ, ಸೈನಿಕರು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುದರಿಂದ ದೇಶವು ಶಾಂತಿಯುತವಾಗಿ ನಿದ್ರಿಸುತ್ತದೆ ಎಂದು ವಾಗ್ಮಿ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯ ತಿಳಿಸಿದರು.
ಇಲ್ಲಿನ ಕ್ರೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನೂತನ ಇಂಟರ್ಯಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭ ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ನ ಅಧ್ಯಕ್ಷರಾದ ರೋ. ಇಕ್ಬಾಲ್ ಅಹಮದ್ ಮಾತನಾಡಿ, ರೋಟರಿ ಕ್ಲಬ್ ಅನೇಕ ಸಾರ್ವಜನಿಕ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುವುದರ ಮೂಲಕ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತಿದೆ. ವೃತ್ತಿ ಮಾರ್ಗದರ್ಶನ ಮತ್ತು ವೈದ್ಯಕೀಯ ತಪಾಸಣೆ ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತದೆ. ಇದರಿಂದಾಗಿ ಸಮಾಜದ ಅನೇಕ ಅಶಕ್ತ ಜನರಿಗೆ ಪ್ರಯೋಜನವಾಗುತ್ತದೆ. ಮಕ್ಕಳು ಕೂಡಾ ಮುಂದೆ ಸಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
Also read: ನಿಂದನೆಗಳನ್ನು ಸಮರ್ಥವಾಗಿ ಎದುರಿಸಿ: ವಿದ್ಯಾರ್ಥಿಗಳಿಗೆ ನಿವೇದನ್ ನೆಂಪೆ ಕಿವಿಮಾತು
ಕಾರ್ಕಳ ವಲಯ ರೋಟರಿ ಕ್ಲಬ್ ಸಂಯೋಜಕರಾದ ರೋ.ಜ್ಯೋತಿ ಪದ್ಮನಾಭ್ರವರು ಸಂಘದ ಕಾರ್ಯವೈಖರಿಯ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಗಣ್ಯರು ಅಮರ ಜವಾನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದರು.
ವೇದಿಕೆಯಲ್ಲಿ ಕ್ರೈಸ್ಟ್ಕಿಂಗ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಕಾಮತ್, ಕಾರ್ಕಳ ರೋಟರಿ ಕ್ಲಬ್ ಕಾರ್ಯದರ್ಶಿ ರೋ. ಗಣೇಶ್ ಸಾಲ್ಯಾನ್, ಉಪಾಧ್ಯಕ್ಷ ರೋ. ಬಾಲಕೃಷ್ಣ ಹಾಗೂ ಕಾರ್ಕಳ ರೋಟರಿ ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಇಂಟರ್ಯಾಕ್ಟ್ ಅಧ್ಯಕ್ಷ ಒಂಬತ್ತನೇ ತರಗತಿಯ ಅನುಷ್ ಡಿ ಶೆಟ್ಟಿ ಕ್ಲಬ್ ಕಾರ್ಯಯೋಜನೆಯ ಬಗ್ಗೆ ತಿಳಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆಯವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು. ಸಂಸ್ಥೆಯ ಇಂಟರ್ಯಾಕ್ಟ್ ಕಾರ್ಯದರ್ಶಿ ಒಂಬತ್ತನೇ ತರಗತಿಯ ವಿಶೋನ್ ಶೆಲ್ಟನ್ ಸಲ್ಡಾನ್ಹ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















