ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿದ್ದ ಅಪ್ಪಾಜಿ ಗೌಡರ ಆಕಸ್ಮಿಕವಾದ ನಿಧನ ಭದ್ರಾವತಿ ರಾಜಕಾರಣದಲ್ಲಿ ಶೂನ್ಯ ಉಂಟು ಮಾಡಿದೆ.
ತಮ್ಮ ವ್ಯಕ್ತಿಗತ ಪ್ರಭಾವ, ಸ್ವಭಾವ, ಕಾರ್ಯ ಚಟುವಟಿಕೆ, ಆತ್ಮೀಯತೆ ಕಾರಣಕ್ಕೆ ಜನಮಾನಸವನ್ನು ಆವರಿಸಿಕೊಂಡ ವಿಶೇಷ ನಾಯಕರಾಗಿದ್ದರು ಅಪ್ಪಾಜಿಗೌಡರು.
ಯವಕರಾಗಿದ್ದಾಗಲೇ ಗೌಡರು ಗಡಸುತನಕ್ಕೆ, ಗೌಡರ ಗತ್ತಿಗೆ. ಆದರೆ ಸರಳವಾಗಿ ಆತ್ಮೀಯವಾಗಿ ಜನ ಸಾಮಾನ್ಯರ ನಾಯಕತ್ವ ವಹಿಸಿ, ಜನರಿಂದ ಗುರುತಿಸಿಲ್ಪಟ್ಟು ಶಾಸಕರಾಗಿ ಆಯ್ಕೆ ಆದರು ಗೌಡರು. ಭದ್ರಾವತಿಯ ಸಾಮಾಜಿಕ, ರಾಜಕೀಯ, ಕುಟುಂಬದ ಪಂಚಾಯಿತಿ, ಊರು ಪಂಚಾಯಿತಿ, ಕುರಿತು ಪರಿಹಾರ ಮಾಡುವುದು ಸಹಜ ಸ್ವಭಾವ ಗೌಡರದ್ದು ಆಗಿತ್ತು.
ನಿಷ್ಠುರವಾದ ನ್ಯಾಯ ತೀರ್ಮಾನಕ್ಕೆ ಬದ್ದತೆ ಇದ್ದವರು. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷಕ್ಕೆ ಬರುವಂತೆ ಕೇಳಿದಾಗಲೂ ಅವರ ಆಯ್ಕೆ ಜನತಾದಳ ಆಗಿದ್ದು ಆ ಪಕ್ಷಕ್ಕೆ ಭೀಮಬಲವನ್ನೇ ತಂದಿತು. ಭದ್ರಾವತಿಯಲ್ಲಿ ಮಾತ್ರ ಅಲ್ಲದೇ ಜಿಲ್ಲೆಯಲ್ಲಿ ಶಕ್ತಿ ಆದರು. ಶಾಸಕರಾಗಿ, ಸಭೆಗಳಲ್ಲಿ ಗೌಡರ ಮಾತು ಕೇಳುವುದೇ ಒಂದು ಸೊಗಸು. ಗ್ರಾಮ್ಯ ಭಾಷೆ ಸೊಗಡು, ನೇರ ಪ್ರಸ್ತಾಪ, ಬಡವರ ಧ್ವನಿಯಾಗಿ ಮಾತುಗಳು, ಅಧಿಕಾರಿಗಳು ತಬ್ಬಿಬ್ಬಾಗಿ ಉತ್ತರ ನೀಡುವಂತೆ ಮೊನಚು ಮಾತಿನ ಶೈಲಿ, ತಳಹಂತದಿಂದ ವಿಷಯ ಸಂಗ್ರಹ, ಗೌಡರ ವೈಶಿಷ್ಟ್ಯವಾದರೆ ಅವರ ಸಹಜವಾದ ಗಡಸುತನದ ಧ್ವನಿ ಮೇಲ್ಕಂಡ ಎಲ್ಲಕ್ಕೂ ಮೆರುಗು ತರುತ್ತಿತ್ತು.
ಜಿಲ್ಲೆಯ ಎಲ್ಲಾ ಪಕ್ಷಗಳು ಹಿರಿಯ ನಾಯಕರುಗಳಾದ ಕಾಗೋಡು ತಿಮ್ಮಪ್ಪ, ಯಡ್ಯೂರಪ್ಪ, ಬಂಗಾರಪ್ಪ, ಈಶ್ವರಪ್ಪ, ಅವರುಗಳ ಜೊತೆ ಗೌರವ ಪೂರ್ಣ ಸ್ನೇಹ, ಸಲಿಗೆ, ಆತ್ಮೀಯತೆ ಅವರು ಗಳಿಸಿದ್ದರು. ಹಾಗೇ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಆರಗ ಜ್ಞಾನೇಂದ್ರ, ಆಯನೂರು ಮಂಜುನಾಥ, ಕಿಮ್ಮನೆ ರತ್ನಾಕರ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ರುದ್ರೇಗೌಡರು ಎಲ್ಲರಿಗೂ ಹಿರಿಯ ರಾಜಕಾರಣಿಯಂತೆ ವ್ಯವಹರಿಸುತ್ತಾ ಸ್ನೇಹಿತರೂ ಆಗಿದ್ದು ವಿಶೇಷ.
ತಮಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಅನೇಕ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ಸದಸ್ಯರು ಇಷ್ಟ ಪಡುವ ವ್ಯಕ್ತಿತ್ವ ಅಪ್ಪಾಜಿಗೌಡರದ್ದಾಗಿತ್ತು. ಅವರ ಆಕಸ್ಮಿಕ ನಿಧನ ಅವರ ಪಕ್ಷದ ಕಾರ್ಯಕರ್ತರಲ್ಲಿ ಅನಾಥ ಪ್ರಜ್ಞೆ ತಂದಿದೆ. ಹಾಗೇ ಶಿವಮೊಗ್ಗ ಜಿಲ್ಲೆಯ ರಾಜಕಾರಣಿಗಳು ಆತ್ಮೀಯರಾದವರೊಬ್ಬರನ್ನು ಕಳೆದ ಕೊಂಡ ಮನೋಸ್ಥಿತಿಯಲ್ಲಿದ್ದಾರೆ. ಒಟ್ಟಿನಲ್ಲಿ ಗೌಡರ ನಿಧನ ರಾಜಕೀಯ ಕಾರ್ಯಕರ್ತರಲ್ಲಿ ಖಿನ್ನತೆಯನ್ನು ತಂದಿದೆ ಎಂದರೆ ಅತಿಶಯೋಕ್ತಿಯಲ್ಲ.
ಅಪ್ಪಾಜಿಗೌಡರಂತ ಸ್ವಭಾವದ ರಾಜಕಾರಣಿಗಳು ಬೇಕು. ಇದು ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ ನುಡಿಗಳು.
-ಭಾನುಪ್ರಕಾಶ
ವಿಧಾನ ಪರಿಷತ್ ಮಾಜಿ ಸದಸ್ಯ
ಮತ್ತೂರು
Get In Touch With Us info@kalpa.news Whatsapp: 9481252093
Discussion about this post