ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಳೆದ ಕೆಲವು ದಿನಗಳಿಂದ ಮಾಯವಾಗಿದ್ದ ಮಳೆ ಇಂದು ಸಂಜೆ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಅಬ್ಬರಿಸಿದ್ದು, ಹಲವೆಡೆ ಹಾನಿಯುಂಟು ಮಾಡಿದೆ.
ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಸಹ ಮಳೆ ಸುರಿದಿದ್ದು, ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು.
ನಗರದ ಹೃದಯಭಾಗ ಭೂತನಗುಡಿಯಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಚರಂಡಿ ಹಾಗೂ ರಸ್ತೆಯಿಂದ ಮಳೆಯ ನೀರು ನುಗ್ಗಿದ್ದು, ಕೆಲವು ಮನೆಗಳಲ್ಲಿ 1 ಅಡಿವರೆಗೂ ನೀರು ನುಗ್ಗಿದೆ.
ಈ ಕುರಿತಂತೆ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಅವೈಜ್ಞಾನಿಕ ರಸ್ತೆ ಹಾಗೂ ಡ್ರೈನೇಜ್ ಕಾಮಗಾರಿಯೇ ಇಂದು ಮಳೆ ನೀರು ಮನೆಗಳಿಗೆ ನುಗ್ಗಲು ಕಾರಣ. ಹಿರಿಯ ನಾಗರಿಕರು, ಚಿಕ್ಕ ಮಕ್ಕಳು ಮನೆಗಳಲ್ಲಿದ್ದು ನೀರು ನುಗ್ಗಿರುವ ಕಾರಣ ತೊಂದರೆಯುಂಟಾಗಿದೆ. ರಾತ್ರಿಯೆಲ್ಲಾ ನಿದ್ದೆಗೆಟ್ಟು ನೀರು ಎತ್ತಿ ಹೊರ ಹಾಕುವ ಪರಿಸ್ಥಿತಿ ಉಂಟಾಗಿದೆ ಎಂದು ದೂರಿದ್ದಾರೆ.
ಇಂತಹುದ್ದೇ ಪರಿಸ್ಥಿತಿ ಹಲವು ವರ್ಷಗಳಿಂದ ಇದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Get In Touch With Us info@kalpa.news Whatsapp: 9481252093







Discussion about this post