ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಜೋಗ ಜಲಪಾತ ಸರ್ವಋತು ಪ್ರವಾಸೀ ತಾಣವಾಗಿ ಅಭಿವೃದ್ಧಿ ನಡೆಸಲು ಈಗಾಗಲೇ ನೀಲನಕ್ಷೆ ತಯಾರಾಗಿ ಸರ್ಕಾರದಿಂದ ಹಣ ಮಂಜೂರಾಗಿದೆ.
ಇದೀಗ, ಮಾನ್ಯ ಮುಖ್ಯಮಂತ್ರಿಗಳಿಂದ ಕಳುಹಿಸಲ್ಪಟ್ಟ ಕೆಪಿಟಿಸಿಎಲ್ ಎಂಡಿ, ಜಂಗಲ್ ಲಾಡ್ಜ್ ಎಂಡಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಅರಣ್ಯ ಇಲಾಖೆ ಮುಖ್ಯಸ್ಥರು ಸ್ಥಳೀಯ ಅಧಿಕಾರಿಗಳು, ಎಂಎಡಿಬಿ ಅಧ್ಯಕ್ಷ ಶ್ರೀ ಗುರುಮೂರ್ತಿ, ಕಾರ್ಯಪಡೆ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ, ಪ್ರಸನ್ನ ಕೆರೆಕೈ ಅವರನ್ನೊಳಗೊಂಡ ಸಭೆಯಲ್ಲಿ ಕನಸುಗಾರ ಸಂಸದ ಶ್ರೀ ಬಿ.ವೈ. ರಾಘವೇಂದ್ರ ಅವರು ಕಾರ್ಯಾನುಷ್ಠಾನಕ್ಕೆ ಬೇಕಾದ ಸಿದ್ದತೆ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಸುಮಾರು 3 ಗಂಟೆ ನಡೆದ ಸಭೆ ಹಾಗೂ ಕೆಲಸದ ಅಗತ್ಯವಿರುವ ಸ್ಥಳಗಳಿಗೆ ಭೇಟಿ ಕೂಡಾ ನೀಡಲಾಯಿತು.
ಜಿಲ್ಲೆ-ರಾಜ್ಯ-ರಾಷ್ಟ್ರಕ್ಕೆ ಮಾದರಿಯಾಗುವುದಕ್ಕಿಂತ ಇದೊಂದು ವಿಶ್ವವಿಖ್ಯಾತ ಪ್ರವಾಸಿ ತಾಣವಾಗಬೇಕು. ವರ್ಷ ಪೂರ್ತಿ ವಿಶ್ವದಾದ್ಯಂತ ಪ್ರವಾಸಿಗರು ಮೆಚ್ಚಿ ಬರಬೇಕು, ಸ್ಥಳೀಯರಿಗೆ ಉದ್ಯೋಗದಾಯಿನಿಯಾಗಬೇಕು, ಮಲೆನಾಡಿನ ಸೊಬಗು ಉಳಿಸಿಕೊಂಡು, ಭವಿಷ್ಯದ ಯೋಜನೆಗಳಿಗೂ ತಳಪಾಯವಾಗುವ ದೃಷ್ಠಿಯಲ್ಲಿ ಜೋಗ ಅಭಿವೃದ್ಧಿಯಾಗಬೇಕು.
ಇಲ್ಲಿನ ಹಸಿರು-ನೆಲ-ಜಲ ತಾಣಗಳ ರಮಣೀಯತೆ ಉಳಿಸಿಕೊಂಡು ಆಕರ್ಷಣೀಯವಾಗಿಸಬೇಕು. ಅದಕ್ಕಾಗಿ ಕೆಲಸ ಪ್ರಾರಂಭಕ್ಕಿಂತ ಮೊದಲು ಸಾಧಕ-ಭಾದಕ ಚರ್ಚಿಸಲು ಈ ಸಭೆ ಕರೆದಿದ್ದೇನೆ. 2020ರ ಆರ್ಥಿಕ ವರ್ಷದಲ್ಲಿ ಕನಿಷ್ಠ ಅರ್ಧ ಭಾಗ ಕೆಲಸ ಮುಗಿಯಬೇಕು. ನಮ್ಮ ಜಿಲ್ಲೆಯ ಅಂಬುತೀರ್ಥದಲ್ಲಿ ಹುಟ್ಟಿ ಜೋಗದಲ್ಲಿ ಜಲಧಾರೆ ಹರಿಸುತ್ತಿರುವ ಶರಾವತಿ ತೀರ ಪ್ರೇಕ್ಷಣೀಯ ಸ್ಥಳವಾಗಿ ವಿಶ್ವವಿಖ್ಯಾತಿ ಪಡೆಯಲು ಬೇಕಾದ ಅಂಶಗಳನ್ನು ದೂರದೃಷ್ಠಿಯಿಂದ ನಾವು ಕಾರ್ಯರೂಪಕ್ಕೆ ತರಬೇಕೆಂದು ಸಂಸದ ಶ್ರೀ ಬಿ.ವೈ. ರಾಘವೇಂದ್ರ ತಮ್ಮ ಪ್ರಸ್ತಾವನೆ ಭಾಷಣದಲ್ಲಿ ಸಭೆಗೆ ಮನವರಿಕೆ ಮಾಡಿದರು.
ಇದರಲ್ಲಿ ಕೇವಲ ಅಭಿವೃದ್ಧಿ ಮಾತ್ರ ಪರಿಗಣಿಸದೇ ಸಂಸದರು ದೂರದೃಷ್ಠಿ ಆಲೋಚನೆ, ಪರಿಸರ ಸ್ನೇಹಿ ವಿಚಾರಗಳು, ಎಲ್ಲ ಮಾದರಿಯ ಪ್ರವಾಸಿ ತಾಣ ಮಾಡುವ ಕಲ್ಪನೆ ಹಾಗೂ ಪ್ರವಾಸಿಗರ ಅನುಕೂಲ ಕಲ್ಪಿಸುವ ಹುಮ್ಮಸ್ಸು ಕಂಡಿದ್ದು ವಿಶೇಷ.
ಜಂಗಲ್ ಲಾಡ್ಜ್ ಎಂಡಿ ಶರ್ಮಾ ಅವರು ಮಾತನಾಡಿ, ತಲಕಳಲೆ ಡ್ಯಾಂ ಹಿನ್ನೀರಿನಲ್ಲಿ ಜಲಸಾಹಸ, ದೋಣಿ ವಿಹಾರ ಎಲ್ಲ ಮಾಡಬಹುದು. ಹತ್ತಿರದ ಹಿನ್ನೀರಿನ ಜಾಗಕ್ಕೆ ಅರ್ಧ ದಿನದ ಜಲಕ್ರೀಡೆಗೆ-ವಿಹಾರಕ್ಕೆ ಅನುಕೂಲ ಮಾಡಲು ಸೂಚಿಸಿದರು. ಅಗತ್ಯವಿದ್ದರೆ ಅರಣ್ಯ ಇಲಾಖೆ ಸಹಾಯ ಪಡೆಯಬಹುದೆಂದರು. ಪಕ್ಕದಲ್ಲಿ ಇರುವ ಮೇಲ್ದಂಡೆಯನ್ನು ವಿಶೇಷ ಮಕ್ಕಳ ಪಾರ್ಕ್ ಮಾಡಲು ಅನುಮತಿಯಿತ್ತರು.
ಕೆಪಿಟಿಸಿಎಲ್ ಎಂಡಿ ಶ್ರೀ ಪೊನ್ನುರಾಜ್ ಮಾತನಾಡಿ, ತಮ್ಮ ಇಲಾಖೆ ಸರ್ವ ಋತುವಿನಲ್ಲೂ ಜಲಪಾತ ಮಾಡಲು ನೀರು ಬಿಡುತ್ತೇನೆಂದೂ, ಅಗತ್ಯವಿರುವ ಸೇತುವೆ, ಸುರಂಗ ನಿರ್ಮಾಣ ಮಾಡಲು ಸೂಚಿಸಿದರು. ಲಿಂಗನಮಕ್ಕಿಯಿಂದ ನೇರ ಜಲಪಾತಕ್ಕೆ ಸರ್ವಕಾಲದಲ್ಲೂ ಬಿಟ್ಟು ಜಲಪಾತದಲ್ಲಿ ನೀರು ಹರಿಯುವಂತೆ(ಶನಿವಾರ-ಭಾನುವಾರ) ವ್ಯವಸ್ಥೆ ಮಾಡುವುದಾಗಿ ತಿಳಿಸಿ, ಜಲವಿಹಾರಕ್ಕೆ ಹಲವು ತಾಣಗಳನ್ನು ಜೋಡಿಸುವಂತೆ ಸಲಹೆ ನೀಡಿದರು.
1 ದಿನ-2 ದಿನದ ಪ್ರವಾಸದ ಏರ್ಪಾಡು ಮಾಡಲು, ಎಬಿ ಸೈಟ್’ನಿಂದ ಕೆಪಿಸಿ ಹತೋಟಿಯಲ್ಲಿರುವ ಜಾಗಗಳಿಗೆ ಅವರ ವಾಹನದಲ್ಲೇ ಕರೆದೊಯ್ಯುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಶ್ರೀ ರಮೇಶ್ ಮಾತನಾಡಿ, ಆಕರ್ಷಣೆ ಮಾಡಿ, ಜನ ಲಭ್ಯವಾಗುವಂತೆ, ತಂಗಲು ವ್ಯವಸ್ಥೆ, ಊಟೋಪಚಾರ, ಸಾಂಸ್ಕೃತಿಕ ಚಟುವಟಿಕೆ ನಡೆಸುವ ಮೂಲಕ ಹೆಚ್ಚಿನ ಸೌಲಭ್ಯ ಸಿಗುವಂತೆ ಮಾಡಲು ಇಲಾಖೆ ಸಿದ್ದವಿದೆ. ಕೂಡಲೇ ಅಗತ್ಯವಿರುವ ಯೋಜನಾ ಅಂಗೀಕಾರ ಪಡೆಯುತ್ತೇವೆ ಎಂದರು.
ಜಲಪಾತದ ಕೆಳಗಿಳಿದು ನೀರು ಮುಟ್ಟಿ ಆಹ್ಲಾದಿಸಲು ಲಿಫ್ಟ್ ವ್ಯವಸ್ಥೆ, ವಯಸ್ಸಾದವರು ಹಾಗೂ ವಿಕಲಾಂಗರುಗಳಿಗೆ ವಿಶೇಷ ವಾಹನ ಅನುಕೂಲ ಕಲ್ಪಿಸಿದರೆ ಜೋಗ ಗುಂಡಿ ನೋಡುವ ಕನಸು ನನಸಾಗುತ್ತದೆ ಎಂದರು.
ಅದಲ್ಲದೇ, ವಿವಿಧ ಇಲಾಖೆಯ ಸಹಭಾಗಿತ್ವ ಇರುವುದರಿಂದ ಸಮನ್ವಯತೆ ಸಂಕಲ್ಪ ಸಿದ್ದಿ ಸಾಧಿಸಲು ಸೂಚಿಸಿದರು.
ಜಿಲ್ಲಾಧಿಕಾರಿ ಶ್ರೀ ಶಿವಕುಮಾರ್ ಮಾತನಾಡಿ, ಇಲ್ಲಿ ನೀರಿನ ಫೌಂಟೇನ್, ಆಂಪಿಥಿಯೇಟರ್, ವೀಕ್ಷಣಾ ಗೋಪುರ, ರೋಪ್ ವೇ, ಜಲಸಾಹಸ ತಾಣ, ವಸತಿಗೃಹ ನಿರ್ಮಾಣ, ಹೊಟೇಲ್, ಕರಕುಶಲ ವಸ್ತು ಮಾರಾಟ, ವಿವಿಧ ಮಾರಾಟ ಮಳಿಗೆ, ಸ್ವಚ್ಛ ಸುಂದರ ಊಟೋಪಚಾರ ಸಿಗುವಂತೆ ಯೋಜನೆ ಸಿದ್ದವಾಗಿದೆ. ಮೇಲ್ಬಾಗದಲ್ಲಿರುವ 15 ಗುಂಟೆ ಜಾಗದಲ್ಲಿ ನಿಸರ್ಗ ಚಿಕಿತ್ಸಾಲಯ, ಔಷಧಿವನ ನಿರ್ಮಾಣ ಮಾಡಲು ಯೋಜಿಸಬೇಕು ಎಂದರು.
ಎಂಎಡಿಬಿ ಅಧ್ಯಕ್ಷ ಶ್ರೀ ಗುರುಮೂರ್ತಿ ಮಾತನಾಡಿ, ಜೋಗ ಸುತ್ತ ಇರುವ ಹಿನ್ನೀರಿನಲ್ಲಿರುವ ಕೆಪಿಸಿಗೆ ಸೇರಿದ ಜಾಗ ಎಷ್ಟಿದೆ ಎಂದು ಸರ್ವೆ ನಡೆಸಿ, ಹತ್ತಿರದ ಹಳ್ಳಿಗಳಿಗೆ ಸೌಲಭ್ಯ ಕಲ್ಪಿಸುವ ಸಾಧ್ಯತೆಯನ್ನು ಅಂದಾಜು ಮಾಡಲು ಶ್ರೀ ಪೊನ್ನುರಾಜ್ ಅವರಲ್ಲಿ ಮನವಿ ಮಾಡಿದರು.
ಸುತ್ತಲಿನ ಹಳ್ಳಿಗಳಿಗೆ ಅಭಿವೃದ್ಧಿ ಕಲ್ಪಿಸಿದರೆ ಅವರೂ ಸ್ಥಳೀಯ ಪ್ರವಾಸಿ ಪ್ರೇರಕರಾಗುತ್ತಾರೆ ಎಂದರು.
ಮಾನ್ಯ ಸಂಸದರು ಕೊನೆಯಲ್ಲಿ ಜೋಗ ವಿಶ್ವವಿಖ್ಯಾತ ಮಾಡಲು ಶ್ರಮಿಸೋಣ, ನೆಲ-ಜಲ-ಪ್ರಾಕೃತಿಕ ಸೌಂದರ್ಯವನ್ನು ಚೆನ್ನಾಗಿಟ್ಟುಕೊಂಡು ಆಕರ್ಷಣೀಯ ಮಾಡೋಣ. ಈ ಹಂತದಲ್ಲಿ 120 ಕೋಟಿ ಸಿಕ್ಕಿದೆ. ಕಾಲಾನುಕ್ರಮದಲ್ಲಿ ಇನ್ನೂ ಹೆಚ್ಚಿಗೆ ಸೌಲಭ್ಯ ಕಲ್ಪಿಸಬಹುದು. ಕೇವಲ ಉತ್ಸಾಹವಿದ್ದರೆ ಸಾಲದು, ಸಮನ್ವಯತೆ, ಬದ್ದತೆ, ಕಾಲಮಿತಿ, ದೂರದೃಷ್ಠಿಯಿಂದ ಕೆಲಸ ಮಾಡಿ ಸಾಧಿಸೋಣ ಎಂದರು.
ಗಮನಾರ್ಹ ಅಂಶವೆಂದರೆ ಹಿನ್ನೀರಿನ ಅರಣ್ಯದಲ್ಲಿ ಶಿವಪ್ಪನಾಯಕನ ಕಾಲದ ಮ್ಯೂಸಿಯಂ ಇದೆ. ಅದನ್ನು ಅಭಿವೃದ್ಧಿಪಡಿಸಿ ಚರಿತ್ರಾರ್ಹ ಮಾಡಲು ಶ್ರೀ ಪೊನ್ನುರಾಜ್ ಸೂಚಿಸಿದ್ದನ್ನು ಸಭೆ ಒಪ್ಪಿ, ಇದೇ ಯೋಜನೆಯಲ್ಲಿ ಅದರ ವೆಚ್ಚವನ್ನು ಭರಿಸಲು ಸಂಸದರು ಸೂಚಿಸಿದರು.
ಯೋಜನಾ ತಜ್ಞ ಶ್ರೀ ರಂಗನಾಥ್, ಮುಖ್ಯಮಂತ್ರಿಗಳ ಕಚೇರಿಯ ಶ್ರೀ ಸುರೇಶ್, ಶ್ರೀ ರಾಜಪ್ಪ ಮತ್ತಿತರ ಹಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಸಲಹೆ ನೀಡಿದರು.
ಕೊನೆಯಲ್ಲಿ ನನಗನಿಸುದಿಷ್ಟು
ಅಂದು ಕಾಡ ನಡುವೆ ಬೀಳುತ್ತಿರುವ ಜಲಪಾತ ನೋಡಿ ಅಭಿವೃದ್ಧಿಯ ಕಡೆ ಚಿಂತಿಸಿ ವಿದ್ಯುತ್ ಉತ್ಪಾದನೆ ಮಾಡಿದರು. ನಂತರ ಅಭಿವೃದ್ಧಿ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಇತ್ತೀಚಿನ ವರ್ಷದಲ್ಲಿ ಸೌಲಭ್ಯ ವಂಚಿತವಾಗಿ ಹಾಳುಬಿದ್ದಿತ್ತು. 60 ವರ್ಷಗಳ ನಂತರ ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಜೋಗ ಜಲಪಾತ ನಳನಳಿಸುವಂತೆ ಮಾಡುವ ಕನಸು ಕಂಡರು. ಇದೀಗ ಸಂಸದ ಬಿವೈಆರ್, ಹರತಾಳು ಹಾಲಪ್ಪ ಸೇರಿ ಜೋಗ ಜಲಪಾತದ ವೈಭವ ಮರುಕಳಿಸುವಂತೆ ಮಾಡಲು ಹಗಲಿರುಳು ಶ್ರಮಿಸಿ, ಕಾರ್ಯಾನುಷ್ಠಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಕೇವಲ 3 ತಿಂಗಳಲ್ಲಿ ಪಟ್ಟು ಬಿಡದೇ ಯೋಜನಾ ಮಂಜೂರಾತಿ ಪಡೆದು ಕೆಲಸ ಪ್ರಾರಂಭಿಸಿದ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಮಾನ್ಯ ಮುಖ್ಯಮಂತ್ರಿಗಳನ್ನು ಈಗಷ್ಟೇ ಅಲ್ಲದೇ ಭವಿಷ್ಯದ ಪೀಳಿಗೆಯೂ ನೆನಪಿಸಿಕೊಳ್ಳುತ್ತದೆ.
Get In Touch With Us info@kalpa.news Whatsapp: 9481252093
Discussion about this post