ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶೇಷವಾದ ಕ್ಷಮತೆ ಇರುತ್ತದೆ. ಕ್ಷಮತೆಗೆ ಸಂವಾದಿಯಾದ ಪದಗಳೆಂದರೆ ಯೋಗ್ಯತೆ, ಅರ್ಹತೆ, ಪರಾಕ್ರಮ ಇತ್ಯಾದಿಗಳು. ಸಾಮಾನ್ಯವಾಗಿ ನಾವು ವಿಶೇಷವಾದ ಅರ್ಹತೆಯನ್ನು ’ಪ್ರತಿಭೆ’ ಎಂದು ಕರೆಯುತ್ತೇವೆ. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಪ್ರತಿಭೆಯನ್ನು ‘ಹೊಳಹು’ ಎಂದು ಕರೆದಿದ್ದಾರೆ. ಆದ್ದರಿಂದ ಪ್ರತಿಭೆಯೆಂದರೆ ಹೊಳೆದದ್ದು. ತಿಳಿದದ್ದಲ್ಲ. ಭಟ್ಟ ತೌತನೆಂಬ ಕಾವ್ಯ ಮೀಮಾಂಸಕ ಪ್ರತಿಭೆಯನ್ನು ಹೀಗೆ ವ್ಯಾಖ್ಯಾನಿಸಿದ್ದಾನೆ. ಪ್ರಜ್ಞಾ ನವನವೋನ್ಮೇಷಶಾಲಿನಿ. ಎಂದರೆ ಹೊಸ ಹೊಸ ಭಾವನೆಗಳನ್ನು ಕಾಣುವ ಪ್ರಜ್ಞೆಯೇ ಪ್ರತಿಭೆ. ಉನ್ಮೇಷ ಎಂದರೆ ಹೊಳಹು. ಪ್ರತಿಭೆಗೆ ಸಂವಾದಿಯಾಗಿ ಅನೇಕ ಪದಗಳಿವೆ. ಹೊಳಹು, ದೀಪ್ತ, ಕಾಂತಿ, ಕಲ್ಪನಾಶಕ್ತಿ, ಬುದ್ಧಿಶಕ್ತಿ, ಮೇಧಾಶಕ್ತಿ, ಕೌಶಲ, ನಿಪುಣತೆ, ದಕ್ಷತೆ, ಚತುರತೆ, ಜಾಣತನ ಮುಂತಾದವುಗಳು ಮುಖ್ಯವಾದುದು. ಪಾಶ್ಚಿಮಾತ್ಯರಲ್ಲಿ ಪ್ರತಿಭೆಗೆ ಸಂವಾದಿಯಾಗಿ Talent, Genius, Imagination ಮುಂತಾದ ಪದಗಳನ್ನು ಬಳಸುತ್ತಾರೆ.
ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಕ್ಷೇತ್ರದಲ್ಲಿ ಪ್ರತಿಭೆಯನ್ನು ಹೊಂದಿರುತ್ತಾನೆ. ಈ ಅಪೂರ್ವವಾದ ಪ್ರತಿಭೆ ವ್ಯಕ್ತಿಯ ಸುಪ್ತ ಪ್ರಜ್ಞೆಯಲ್ಲಿರುತ್ತದೆ ಎಂದು ವಿದ್ವಾಂಸರ ಅಭಿಪ್ರಾಯ. ಸತತ ಅಭ್ಯಾಸ, ನಿರಂತರ ಪ್ರಯೋಗಗಳಿಂದ ಈ ಸುಪ್ತ ಪ್ರಜ್ಞೆಯಲ್ಲಿರುವ ಪ್ರತಿಭೆಗಳು ಬೆಳಕಿಗೆ ಬರುತ್ತದೆ. ಕೆಲವು ವಿಶೇಷವಾದ ವ್ಯಕ್ತಿಗಳಲ್ಲಿ ಹಲವಾರು ಪ್ರತಿಭೆಗಳಿರುತ್ತವೆ. ಪುರಾಣ ಇತಿಹಾಸದಲ್ಲೂ ಅಂತಹ ವ್ಯಕ್ತಿಗಳು ಸಿಗುತ್ತಾರೆ. ಪ್ರಸ್ತುತ ನಾವು ಅನೇಕ ಮಂದಿಯನ್ನು ಉದಾಹರಿಸ ಬಹುದಾದರೂ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಅಬ್ರಹಾಂ ಬೆಂಜಮಿನ್ ಡೀ ವಿಲ್ಲಿಯರ್ಸ್ (A. B. De Villiers) ಒಬ್ಬ ಒಳ್ಳೆಯ ಉದಾಹರಣೆ.
ಕ್ರಿಕೆಟ್ ಆಟದಲ್ಲಿ ಮಿಸ್ಟರ್ 360 ಡಿಗ್ರಿ ಎಂಬ ಬಿರುದು ಇದೆ. ಸಮಸ್ತ ಜಗತ್ತು ಅವರ ದಾಂಡಿಗತನವನ್ನು ಮೆಚ್ಚಿಕೊಂಡಿದೆ. ಗೂಟ ರಕ್ಷಣೆ (Wicket Keeping) ಯಲ್ಲಿ ಹಾಗೂ ಕ್ಷೇತ್ರ ರಕ್ಞಣೆಯಲ್ಲೂ ಮಾಗಿದ ಆಟಗಾರ. ಪಳಗಿದ ಗಾಲ್ಫ್ ಕ್ರೀಡಾಪಟು. ರಗ್ಬಿ ಹಾಗೂ ಲ್ವಾನ್ ಟೆನ್ನಿಸ್ ಆಟಗಳನ್ನೂ ಆ ಕ್ರೀಡೆಗಳನ್ನು ನೆಚ್ಚಿಕೊಂಡವರಂತೆ ಆಡಬಲ್ಲರು. ಕಾಲ್ಚೆಂಡಾಟದಲ್ಲೂ ಸರಿ ಮಿಗಿಲೆನಿಸಿದವರು. ಒಳ್ಳೆಯ ಡಿಸ್ಕೋ ಡ್ಯಾನ್ಸರ್. ಸಂಗೀತ ಗಾಯನದಲ್ಲೂ ತೊಡಗಿಕೊಂಡವರು. ಒಳ್ಳೆಯ ಈಜುಗಾರ. ಮೇಲಾಗಿ ವಿದ್ಯಾಭ್ಯಾಸದಲ್ಲೂ ಸ್ಥಾನ ಕಾಯ್ದಿರಿಸಿಕೊಂಡವರು. ಒಬ್ಬ ವ್ಯಕ್ತಿ ಪ್ರತಿಭೆ ಹತ್ತು ಹಲವು. ಕುಮಾರಿ ಶ್ರಾವ್ಯ ಭಾಸ್ಕರ್ ಶೆಟ್ಟಿಯವರ ಪ್ರತಿಭೆ ಹಾಗೂ ಸಾಧನೆಗಳನ್ನು ಗಮನಿಸಿದಾಗ ಎ.ಬಿ.ಡಿ. ಮನಸ್ಸಿನಂಗಳಲ್ಲಿ ಹಾದುಹೋಗುತ್ತಾರೆ.
ಉಡುಪಿ, ಮೂಡುಬೆಳ್ಳೆ ನೆಲ್ಲಿಬೆಟ್ಟು ಶ್ರೀಭಾಸ್ಕರ್ ಶೆಟ್ಟಿ ಹಾಗೂ ಶಿರ್ಲಾಲ್ ರಾಧಾ ನಿವಾಸ ಶ್ರೀಮತಿ ಆಶಾ ಶೆಟ್ಟಿ ದಂಪತಿಗಳ ಕಿರಿಯ ಮಗಳು ಶ್ರಾವ್ಯ. ಹಿರಿಯ ಮಗಳು ಶುಭಾ ಅವರು ಆಹಾರ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಸ್ನಾತಕ ಪದವಿ ಇತ್ತೀಚೆಗೆ ಮುಗಿಸಿದ್ದಾರೆ. ಶ್ರಾವ್ಯ ಅವರು ನವಿಮುಂಬೈ ನೆರುಳ್ ವಿದ್ಯಾಭವನ್ ಆಂಗ್ಲ ಮಾಧ್ಯಮ ಶಾಲೆಯಿಂದ ಪ್ರೌಢ ಶಿಕ್ಷಣ ಪಡೆದವರು. ಒಂದನೆ ತರಗತಿಯಿಂದ ಹತ್ತನೆ ತರಗತಿ ತನಕ ಪ್ರಥಮ ಸ್ಥಾನವನ್ನು ಎಂದೂ ಬಿಟ್ಚುಕೊಟ್ಟವರಲ್ಲ. ಎಸ್’ಎಸ್’ಸಿ. ಅಂತಿಮ ಪರೀಕ್ಷೆಯಲ್ಲಿ 96.40% ಅಂಕಗಳನ್ನು ಪಡೆದು ಶಾಲೆಯಲ್ಲೇ ಪ್ರಥಮ ಸ್ಥಾನ ಪಡೆದವರು. ನಂತರ ನೆರುಳ್ ಸೌತ್ ಇಂಡಿಯನ್ ಎಜುಕೇಷನ್ ಸೊಸೈಟಿ (S.I.E.S) ಕಾಲೇಜನ್ನು ಸೇರಿ ವಾಣಿಜ್ಯ ವಿಭಾಗದಲ್ಲಿ H.S.C. ಮಾಡಿದರು. ಈ ವರ್ಷ ನಡೆದ ದ್ವಿತೀಯ ವರ್ಷದ ಅಂತಿಮ ಪರೀಕ್ಷೆಯಲ್ಲಿ 92.3% ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಮುಂದೆ ಅಲ್ಲಿಯೇ ಬಿ. ಕಾಂ ಪದವಿ ಮಾಡುತ್ತ C.A. ಮಾಡುವ ಉದ್ದೇಶ ಹೊಂದಿದ್ದಾರೆ. ಇದು ಅವರು ಪಠ್ಯ ಹಾಗೂ ಶಾಲಾ ವಿದ್ಯಾಭ್ಯಾಸದಲ್ಲಿ ಸಾಧಿಸಿದ ಸಾಧನೆ.
ಒಂದು ಗಿಡದ ಸಮಗ್ರ ಬೆಳವಣಿಗೆಗೆ ಮಣ್ಣು, ನೀರು, ಪರಿಸರ, ಸೂರ್ಯ ರಶ್ಮಿ ಮುಂತಾದ ಪೂರಕ ಅಂಶಗಳ ಅವಶ್ಯಕತೆ ಹೇಗೆ ಇದೆಯೋ ಹಾಗೆಯೇ ಒಂದು ಮಗುವಿನ ಸರ್ವತೋಮುಖ ವಿಕಸನಕ್ಕೆ ಶಾಲೆಯ ಶಿಕ್ಷಕರ, ಪೋಷಕರ, ಸೂಕ್ತ ವೇದಿಕೆಗಳು ಮುಖ್ಯ ಪಾತ್ರವಹಿಸುತ್ತವೆ. ಶ್ರಾವ್ಯ ಅವರಿಗೆ ತಂದೆ ತಾಯಿಯ ಸಂಪೂರ್ಣ ಪ್ರೋತ್ಸಾಹ ಹಾಗೂ ಸಹಕಾರ ದೊರೆಯುತ್ತಿತ್ತು. ಶಾಲೆ ಹಾಗೂ ಶಿಕ್ಷಕರ ಸ್ಪಂದನೆಯೂ ಪೂರಕವಾಗಿಯೇ ಇತ್ತು. ಶ್ರಾವ್ಯ ಅವರು ತಮ್ಮ ಹತ್ತರ ಹರೆಯದಲ್ಲಿ ಮಕ್ಕಳ ಬಯಲು ವಿಶ್ವವಿದ್ಯಾಲಯ ಎಂದು ಕರೆಯಲ್ಪಡುವ ’ಚಿಣ್ಣರ ಬಿಂಬ’ ಎಂಬ ಸಂಸ್ಥೆಯನ್ನು ಸೇರಿದರು.
ಚಿಣ್ಣರ ಬಿಂಬ
ಮುಂಬೈ ಮಹಾನಗರ ಮತ್ತು ಸುತ್ತ ಮುತ್ತಣದ ಉಪನಗರಗಳ ತುಳು ಕನ್ನಡಿಗರ ಮಕ್ಕಳ ಸರ್ವಾಂಗೀಣ ಪ್ರಗತಿಯ ಪ್ರಕಲ್ಪಕ್ಕೆ ಪಣತೊಟ್ಟ ಸಂಸ್ಥೆ. 2003 ರಲ್ಲಿ ಹಿರಿಯ ಪೋಲಿಸ್ ಅಧಿಕಾರಿಯಾಗಿದ್ದ ಶ್ರೀ ಪ್ರಕಾಶ್ ಭಂಡಾರಿಯವರ ನೇತೃತ್ವ ಹಾಗೂ ದೂರದರ್ಶಿತ್ವದೊಂದಿಗೆ ಶ್ರೀ ವಿಜಯಕುಮಾರ್ ಶೆಟ್ಟಿ, ತೋನ್ಸೆ ಅವರ ಕಲಾಜಗತ್ತು ಸಂಸ್ಥೆಯ ಸಹಭಾಗಿತ್ವದಲ್ಲಿ ಆರಂಭಗೊಂಡ ಚಿಣ್ಣರಿಗಾಗಿರುವ ಕಲಿಕಾ ಸಂಸ್ಥೆ. ಕೇವಲ ಐವತ್ತು ಚಿಣ್ಣರಿಂದ ಆರಂಭವಾದ ಚಿಣ್ಣರ ಬಿಂಬ ಇಂದು ಐದು ಸಾವಿರ ಚಿಣ್ಣರು, ನಗುವ, ಅರಳುವ, ಕಲಿಯುವ, ಉಲಿಯುವ, ನಲಿಯುವ, ಬಲಿಯುವ ಬಯಲು ವಿಶ್ವವಿದ್ಯಾಲಯವಾಗಿದೆ. ಇಪ್ಪತ್ತೈದಕ್ಕಿಂತ ಹೆಚ್ಚು ಶಾಖೆಗಳಲ್ಲಿ ನೂರರಷ್ಟು ಸ್ವಯಂ ಪ್ರೇರಿತ ಶಿಕ್ಷಕರು ಚಿಣ್ಣರ ಬಿಂಬದಲ್ಲಿ ಕಾರ್ಯ ನಿರತರಾಗಿದ್ದಾರೆ. ಇಲ್ಲಿ ಏಳರಿಂದ ಹದಿನಾಲ್ಕರ ಹರೆಯದ ಚಿಣ್ಣರನ್ನು ಚಿನ್ಮಯರನ್ನಾಗಿಸುವ ಗುರುಕುಲ ಮಾದರಿಯ ಪ್ರಯೋಗಾತ್ಮಕವಾದ ಶಿಕ್ಷಣವನ್ನು ಕರಕತಗೊಳಿಸಲಾಗುತ್ತದೆ. ಚಿಣ್ಣರಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುತ್ತ ಚಿನ್ನದ ಹೊಳಪನ್ನು ಭರಿಸುವ ಚೀನಿವಾರರ ತೆರನಾದ ಕಲಾ ಪ್ರೌಢಿಮೆಯ ಪ್ರಶಿಕ್ಷಣ ನೀಡಲಾಗುತ್ತದೆ. ಚಿಣ್ಣರ ಬಿಂಬದಲ್ಲಿ ಸಂಸ್ಕೃತಿ, ಸಂಸ್ಕಾರ, ಭಾಷೆ, ಭಜನೆ, ನೃತ್ಯ, ಸಂಗೀತ, ಸಾಹಿತ್ಯ, ಕಲೆ ಇತ್ಯಾದಿಗಳೊಂದಿಗೆ ನಾಡು – ನುಡಿಯ ಬಗ್ಗೆ ವಿಶೇಷವಾಗಿ ಅಸ್ಥೆಯಿಂದ ಕಲಿಸಲಾಗುತ್ತದೆ. ಜನ್ಮಭೂಮಿಯೊಂದಿಗೆ ಕರ್ಮಭೂಮಿಗೂ ಸಮತೂಕದ ಮಹತ್ವವನ್ನು ನೀಡಲಾಗುತ್ತದೆ. ಕಳೆದ ಹದಿನೇಳು ವರ್ಷಗಳಿಂದ ಪ್ರಕಾಶ್ ಭಂಡಾರಿ ಮತ್ತು ಅವರ ಸಂಪೂರ್ಣ ಪರಿವಾರ ಚಿಣ್ಣರ ಈ ಪರಿವರ್ತನ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಚಿಣ್ಣರ ಬಿಂಬದ ಮಕ್ಕಳ ಪ್ರತಿಭೆಯನ್ನು ಕಣ್ಣಾರೆ ಕಂಡ ಕರ್ನಾಟಕ ಸರಕಾರದ, ಸಂಸ್ಕೃತಿ ಇಲಾಖೆಯ ಪ್ರತಿನಿಧಿಗಳು, ಕನ್ನಡ ಚಿತ್ರರಂಗದ ಗಣ್ಯರು ಮೂಕವಿಸ್ಮಿತರಾಗಿದ್ದಾರೆ.
ಕುಮಾರಿ ಶ್ರಾವ್ಯ ಅವರು ಚಿಣ್ಣರ ಬಿಂಬದ ಶಿಷ್ಯೆಯಾದ ಬಳಿಕ ತಮ್ಮಲ್ಲಿರುವ ಪ್ರತಿಭೆಯನ್ನು ಚಿಣ್ಣರ ಬಿಂಬದ ಒಳಗೂ ಹೊರಗು ಪ್ರಚಾರ ಪಡಿಸುವ ಅವಕಾಶಗಳನ್ನು ಕಳೆದುಕೊಂಡವರಲ್ಲ. ಇವರು ನೆರುಳ್ ಶಿಬಿರದ ವಿದ್ಯಾರ್ಥಿಯಾಗಿದ್ದವರು. ಚಿಣ್ಣರ ಬಿಂಬ ಅವರಿಗೆ ಕುಣಿಯುವ ಕಾಲುಗಳಿಗೆ ಕಾಲ್ಗೆಜ್ಜೆ ಕಟ್ಟಿದಂತೆ, ಉಲಿಯುವ ಬಾಯಿಗೆ ಸ್ವರವಾದಂತೆ ವರವಾಯಿತು.
ಚಿಣ್ಣರ ಬಿಂಬದ ಕುರ್ಲಾ ವಲಯ ಹಾಗೂ ಐರೋಲಿ ಪ್ರಾದೇಶಿಕ ಸಮಿತಿಗಳಲ್ಲಿ ಕಾರ್ಯಕ್ರಮ ನಿರೂಪಿಸಿದ್ದಾರೆ. ಚಿಣ್ಣರ ಬಿಂಬದಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಗಳಲ್ಲಿ ನಾಲ್ಕು ವರ್ಷ ಭಾಗವಹಿಸಿದ್ದಾರೆ. ಶ್ರಾವ್ಯ ಅವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಅವರಲ್ಲಿರುವ ಪ್ರತಿಭೆ ಒಂದಲ್ಲ ಎರಡಲ್ಲ. ಹತ್ತು ಹಲವು ಪ್ರತಿಭೆಗಳ ಸಂಗಮ ಎನ್ನಬಹುದು. ಭಾಷಣ, ಪ್ರಬಂಧ, ನಿರೂಪಣೆ, ಸಂಗೀತ, ಜಾನಪದ ನೃತ್ಯ, ಸಮೂಹ ನೃತ್ಯ, ಭರತನಾಟ್ಯ, ನಾಟಕ, ಪ್ರಹಸನ, ಸಂಸ್ಕೃತ ಶ್ಲೋಕ, ಯಕ್ಷಗಾನ, ಕರಾಟೆ, ಖೊ ಖೋ ಮುಂತಾದ ಕ್ಷೇತ್ರಗಳಲ್ಲಿ ಪರಿಣತರು ಮತ್ತು ಬಹುಮಾನಿತರು. ಅಭಿಜಾತ ಕಲೆ ಭರತನಾಟ್ಯವನ್ನು ಗುರು ಅನುರಾಧ ಜಾಲ್ನವಾಲರಿಂದ ಕಲಿಯುತ್ತಿದ್ದಾರೆ. ಸದಾನಂದ್ ಶೆಟ್ಟಿ, ಕಟೀಲು ಅವರ ಭ್ರಾಮರಿ ಯಕ್ಷನೃತ್ಯ ಕಲಾನಿಲಯದಿಂದ ಯಕ್ಷಗಾನವನ್ನು ಅಭ್ಯಾಸ ಮಾಡುತ್ತಿದ್ದಾರೆ. ಕದಂಬ ಕೌಶಿಕೆಯ ಶ್ರೀದೇವಿ ವೀರ ಅಭಿಮನ್ಯು ಪ್ರಸಂಗದ ಧರ್ಮರಾಯ, ಲವಕುಶ ಕಾಳಗದ ಬ್ರಹ್ಮ (ತುಳು) ಮಹಿಷಾಸುರ ಮರ್ಧಿನಿಯ ಮಾಲಿನಿ (ಮರಾಠಿ) ಮುಂತಾದ ಪಾತ್ರಗಳನ್ನು ಮಾಡಿ ಗುರುಗಳಿಂದಲೂ, ಪ್ರೇಕ್ಷಕರಿಂದಲೂ ಮೆಚ್ಚಿಸಿಕೊಂಡಿದ್ದಾರೆ.
ಪ್ರಶಸ್ತಿ ಪುರಸ್ಕಾರಗಳು
ಚಿಣ್ಣರ ಬಿಂಬ, ಶಾಲೆ, ಕಾಲೇಜು, ಸಂಘ, ಸಂಸ್ಥೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರು. 2017 ರಲ್ಲಿ ಬಾರಾಮತಿಯಲ್ಲಿ ನಡೆದ ರಾಜಕೀಯ ನೇತಾರ ಶರದ್ ಪವಾರ್ ಅವರ ರಾಜಕೀಯ ಜೀವನದ ಸುವರ್ಣ ಮಹೋತ್ಸವದಲ್ಲಿ ಮಹಾರಾಷ್ಟ್ರ ರಾಜ್ಯ ಮಟ್ಟದ ಪ್ರಬಂಧ (ಆಂಗ್ಲ ಭಾಷೆಯಲ್ಲಿ) ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 2019ರಲ್ಲಿ ಗ್ವಾಲಿಯರ್’ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಭರತನಾಟ್ಯ ನೃತ್ಯ ಸ್ಪರ್ಧೆಯಲ್ಲಿ ಶ್ರಾವ್ಯ ಅವರ ತಂಡ ದ್ವಿತೀಯ ಬಹುಮಾನ ಗಳಿಸಿದೆ. ಯಕ್ಷಗಾನದಲ್ಲಿ ಭ್ರಮರ ಚೇತನ ಪುರಸ್ಕಾರ ಪಡೆದಿದ್ದಾರೆ. ನೆರುಳ್ ರಂಗಭೂಮಿಯ ರಜತ ಮಹೋತ್ಸವದಲ್ಲಿ ಅಶೋಕ್ ಕುಮಾರ್ ಕೊಡ್ಯಡ್ಕ ಅವರ ನಿರ್ದೇಶನದಲ್ಲಿ ಕಾರ್ಯಕ್ರಮ ನಿರೂಪಿಸಿದ್ದಾರೆ. ರಂಗಭೂಮಿಯ ಜಾನಪದ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಹಲವು ಸಲ ಪ್ರಶಸ್ತಿ ಪಡೆದವರು. 2017 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಜೆ. ವಿ. ಎಂ. ಮೆಹ್ತಾ ಕಾಲೇಜ್ ’ಗೂಂಜ್’ ದ ಬ್ಯಾಟಲ್ ಆಫ್ ನ್ಯಾಕ್ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ (2018). ವಿದ್ಯಾಭವನ್ ಶಾಲೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿ (2017). ಕಲ್ವಾ ಫ್ರೆಂಡ್ಸ್ – ಜಾನಪದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ (2017). ರಾಷ್ಟ್ರ ಮಟ್ಟದ ಮುಕ್ತ ಚಾಂಪಿಯನ್ಶುಪ್ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ (ಸುವರ್ಣ ಪದಕ). ಸೈಂಟ್ ಜ್ಸೇವಿಯರ್ ಕಾಲೇಜ್ – ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ (2019) S.I.E.S. ಪದವಿ ಪೂರ್ವ ಕಾಲೇಜ್ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ (2019) ಸ್ಪರ್ಧೆಯಲ್ಲಿ ಡಿಸ್ಟಿಂಕ್ಷನ್ (2013) ಹೀಗೆ ಯಾದಿ ಬೆಳೆಯುತ್ತ ಹೋಗುತ್ತದೆ.
ಮಗುವು ಹೂಗಳನ್ನು ತುಂಬಿಸಬಹುದಾದ ಒಂದು ಹೂದಾನಿಯಲ್ಲ. ಅದು ಹಚ್ಚಿ ಬಳಸಬಹುದಾದ ದೀಪ-ಫ್ರೆಂಚ್ ದಾರ್ಶನಿಕ ಫ್ರಾಂಕಾಯ್ ರೆಬೆಲೈ. ಮಕ್ಕಳ ವ್ಯಕ್ತಿತ್ವಕ್ಕೆ ವಿಶಿಷ್ಟವಾದ ಸಂಸ್ಕೃತಿ, ಸಂಸ್ಕಾರ ಬೆಳೆಯುವುದು ತಂದೆ, ತಾಯಿ, ಸೋದರ, ಸೋದರಿ, ಗುರುಗಳು, ಸಂಗಡಿಗರು ಹಾಗೂ ಪರಿಸರದಿಂದ. ಶ್ರಾವ್ಯ ಅವರಿಗೆ ಈ ಎಲ್ಲ ಪೂರಕವಾದ ಅಂಶಗಳು ಭವಿಷ್ಯದಲ್ಲೂ ಪ್ರಾಪ್ತವಾಗಲಿ ಎಂದು ಹಾರೈಸೋಣ.
Get In Touch With Us info@kalpa.news Whatsapp: 9481252093
Discussion about this post