ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ತನ್ನ ಊರಿಗೆ ತೆರಳಲು ಯಾವೊಂದೂ ಬಸ್ ನಿಲ್ಲಿಸದ ಕಾರಣ ಕೋಪಗೊಂಡ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಸರ್ಕಾರಿ ಬಸ್’ಗೆ ಕಲ್ಲು ಎಸೆದು ಹಾನಿಗೊಳಿಸಿದ ಪರಿಣಾಮ ಆಕೆಗೆ 5,000 ಸಾವಿರ ರೂ. ದಂಡ ವಿಧಿಸಲಾಗಿದೆ.
ಜಿಲ್ಲೆಯ ಹೊಸಪೇಟೆಯಲ್ಲಿ ಈ ಘಟನೆ ನಡೆದಿದ್ದು, ಹೊಸಪೇಟೆಗೆ ಹೊರಟಿದ್ದ ಬಸ್ ಹೊಸಲಿಂಗಾಪುರ ಬಳಿ ಬರುತ್ತಿದ್ದಂತೆ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬಾಕೆ ಬಸ್’ಗೆ ಕಲ್ಲೆಸೆದಿದ್ದಾಳೆ. ಬಳಿಕ ಬಸ್ ನಿಲ್ಲಿಸಿದ ಚಾಲಕ ಆಕೆಯನ್ನು ಹತ್ತಿಸಿಕೊಂಡಿದ್ದಾನೆ. ನಂತರ ಪ್ರಯಾಣಿಕರ ಸಮೇತ ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್ಸನ್ನು ತಂದಿದ್ದಾನೆ.
ಠಾಣೆಗೆ ಬಂದ ಚಾಲಕ ದೂರು ನೀಡಲು ಮುಂದಾಗಿದ್ದಾನೆ. ಆದರೆ, ಈ ವೇಳೆ ಸ್ಥಳಕ್ಕೆ ಬಂದ ಡಿಪೋ ಮ್ಯಾನೇಜರ್ 5,000 ರೂ. ದಂಡ ಪಾವತಿಸುವಂತೆ ಮಹಿಳೆಗೆ ಸೂಚಿಸಿದ್ದು, ಇದಕ್ಕೆ ತಪ್ಪಿದಲ್ಲಿ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆಯ ಬಳಿಕ ಮಹಿಳೆ ಕ್ಷಮೆ ಕೇಳಿದ್ದು, ಪೊಲೀಸರಿಗೆ ಮನವಿ ಮಾಡಿ ದಂಡ ಕಟ್ಟಿ ಅದೇ ಬಸ್’ನಲ್ಲಿ ತೆರಳಿದ್ದಾಳೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಹಿಳೆ, ತಾನು ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದು, ಬಸ್ಸಿಗಾಗಿ ಕಾದರೂ ಯಾವೊಂದು ಬಸ್ ನಿಲ್ಲಿಸಲಿಲ್ಲ. ತನ್ನ ಜೊತೆ ಇನ್ನೋರ್ವ ಮಹಿಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಇದರಿಂದ ಕೋಪಗೊಂಡು ಬಸ್’ಗೆ ಕಲ್ಲೆಸೆದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post