ಕಲ್ಪ ಮೀಡಿಯಾ ಹೌಸ್
ಕೊಪ್ಪಳ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಕೋಟಿ ಐವತ್ತು ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 15 ಸಾವಿರ ದಿನಸಿ ಕಿಟ್ಗಳನ್ನು ವಿತರಣೆ ಕಾರ್ಯಕ್ರಮಕ್ಕೆ ಹಸಿರು ಬಾವುಟವನ್ನು ಹಾರಿಸುವುದರ ಮೂಲಕ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದರು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಸಿದ್ದರಾಮಯ್ಯನವರು ಮತ್ತೊಮ್ಮೆ ತಾವು ಈ ರಾಜ್ಯದ ಒಬ್ಬ ಶ್ರೇಷ್ಠ ಮುಖ್ಯಮಂತ್ರಿ ಮತ್ತು ಅತ್ಯುತ್ತಮ ಜನನಾಯಕ ಎಂದು ಸಾಬೀತು ಪಡಿಸಿದರು ಎಂದರು

ಸರ್ವಥಾ ಎಂದಿಗೂ ಇವರು ರಾಜ್ಯದ ಸರ್ವಜನರ ಪರ, ಮತ್ತು ತಾನು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂದು ನಡೆದುಕೊಳ್ಳುವ ವ್ಯಕ್ತಿ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿನ ಆಡಳಿತ ಕೆಟ್ಟು ಹೋಗಿರುವುದರಿಂದ ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಲಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ. ಇದು ಅವರವರ ವೈಯಕ್ತಿಕ ಅಭಿಪ್ರಾಯ ಅಷ್ಟೆ. ಪಕ್ಷದ ಹಿತದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಸರಿಯಾಗಿಯೇ ಹೇಳಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿಯೇ ಹೋಗೋಣ ಎಂದಿದ್ದಾರೆ. ಇದಕ್ಕೂ ನಾವು ಬದ್ಧವಾಗಿದ್ದೇವೆ. ನಾಯಕತ್ವದ ಕುರಿತು ನಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಯಾದರು. ಪಕ್ಷಕ್ಕೆ ದ್ರೋಹ ಮಾಡಿ ಪಕ್ಷ ಬಿಟ್ಟವರು ಮತ್ತೆ ಕಾಂಗ್ರೆಸ್ಗೆ ಸೇರಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ವ್ಯಾಪಾರಕ್ಕಾಗಿ ನಮ್ಮ ಪಾರ್ಟಿ ಬಿಟ್ಟುಹೋದವರಿಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ನಮ್ಮ ಪಕ್ಷ ಬಿಟ್ಟು ಅಲ್ಲಿ ಹೋದವರಿಗೆ ಅಲ್ಲಿ ಹೋಗಿ ಕುಳಿತವರಿಗೆ ಉತ್ತರ ಕೊಡುವುದಿಲ್ಲ. ಪಕ್ಷಬಿಟ್ಟು ಹೋದವರನ್ನು ಯಾವುದೇ ಕಾರಣಕ್ಕೂ ಸೇರಿಸುವುದಿಲ್ಲ. ನಮ್ಮ ಪಕ್ಷಕ್ಕೆ ದ್ರೋಹ ಬಗೆದು ಮೋಸ ಮಾಡಿದವರಿಗೆ ಮತ್ತೆ ಅವಕಾಶವಿಲ್ಲ. ಕಾಂಗ್ರೆಸ್ನಲ್ಲಿ ಯಾವುದೇ ಬಣ ಇಲ್ಲ. ಇರುವುದು ಒಂದೇ ಬಣ. ಅಖಿಲ ಭಾರತ ಕಾಂಗ್ರೆಸ್ ಬಣ ಎಂದರು.
ಡಿ.ಕೆ. ಶಿವಕುಮಾರ್ ದೆಹಲಿ ಪ್ರಯಾಣದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಡಿ.ಕೆ. ಶಿವಕುಮಾರ್ ನನಗೆ ಹೇಳಿ ಹೋಗಿದ್ದಾರೆ. ನನಗೆ ಪರ್ಸನಲ್ ಕೆಲಸ ಇದೆ ಅಂತಾ . ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ನವರು ಬೆಳಗ್ಗೆ ಬೆಂಗಳೂರಿನಿಂದ ವಿಮಾನ ಮೂಲಕ ಕೊಪ್ಪಳಕ್ಕೆ 11.30ಕ್ಕೆ ಆಗಮಿಸಿ
ನೇರವಾಗಿ ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿದರು. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳೊಂದಿಗೆ ಚರ್ಚೆನೆಡೆಸಿ ಅಲ್ಲಿಂದ ನೇರವಾಗಿ ಸಾರ್ವಜನಿಕ ಮೈದಾನಕ್ಕೆ ಆಗಮಿಸಿ ದಿನಸಿ ಕಿಟ್ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿ ಮಧ್ಯಾಹ್ನ 12.10ರಿಂದ ಪ್ರಾರಂಭವಾದ ಸಭೆ ಒಂದು ಗಂಟೆಯ ಕಾಲ ನಡೆಯಿತು. ಸಾಯಂಕಾಲ 4.30ಕ್ಕೆ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಕೋವಿಡ್ ಸಂಕಷ್ಟದ ಬಳಿಕ ಇದು ಮೊದಲ ಸಾರ್ವಜನಿಕ ಸಮಾರಂಭದ ಕಾರ್ಯಕ್ರಮವಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದರೂ ಸಹ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಲು ಹರಸಾಹಸ ಪಡಬೇಕಾಯಿತು. ಇಲ್ಲಿನ ಕ್ರೀಡಾಂಗಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ನೋಡಲು ನೂಕು ನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಕಾರ್ಯಕರ್ತರ ಜೊತೆ ಸಿದ್ದರಾಮಯ್ಯ ನವರು ಸೇಲ್ಪಿ ತೆಗೆಸಿಕೊಳ್ಳುವಾಗ ಮಾಸ್ಕ್ ಹಾಕದೆ ಮತ್ತು ಸಾಮಾಜಿಕ ಅಂತರ ಇಲ್ಲದೆ ಪೋಟೋ ತೆಗೆಸಿಕೊಂಡು ಮುಜುಗರಕ್ಕೆ ಒಳಗಾದರು.
ವರದಿ: ಮುರುಳೀಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















