ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಮಕ್ಕಳು ತೋಟದ ಮೊಗ್ಗುಗಳಂತೆ ಮತ್ತು ಅವರನ್ನು ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು ಏಕೆಂದರೆ ಅವರು ದೇಶದ ಭವಿಷ್ಯ ಮತ್ತು ನಾಳಿನ ನಾಗರಿಕರು ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಪೊಲೀಸ್ ಅಧಿಕಾರಿ ಕೆ.ಸಿ. ಮಲ್ಲಿಕಾರ್ಜುನ ತಿಳಿಸಿದರು.
ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂದು ಹೇಳುತ್ತಾರೆ. ಇಂದು ನವೆಂಬರ್ 14 ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನ. ಈ ದಿನವನ್ನು ಮಕ್ಕಳ ದಿನಾಚರಣೆ ಎಂದು ದೇಶದಾದ್ಯಂತ ಆಚರಿಸಲಾಗುತ್ತಿದೆ ಎಂದರು.
ಭಾರತದಲ್ಲಿ ಮಕ್ಕಳ ದಿನಾಚರಣೆ 1956ರ ಹಿಂದಿನದು. ಈ ಹಿಂದೆ ನವೆಂಬರ್ 20ರಂದು ವಿಶ್ವಸಂಸ್ಥೆ ಆಚರಿಸುವ ಸಾರ್ವತ್ರಿಕ ಮಕ್ಕಳ ದಿನ ದಿನವನ್ನೇ ಭಾರತದಲ್ಲೂ ಮಕ್ಕಳ ದಿನವನ್ನಾಗಿದೆ ಆಚರಿಸಲಾಗುತ್ತಿತ್ತು. ದೇಶದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನವನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಯಾಕೆಂದರೆ ನೆಹರೂ ಅವರಿಗೆ ಮಕ್ಕಳು ಅಂದರೆ ಪಂಚಪ್ರಾಣ. ಅವರು ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಸಲಹೆ ನೀಡಿದ್ದು ಮಾತ್ರವಲ್ಲದೇ ಅನಾಥ ಮಕ್ಕಳು ಕೊಟ್ಟ ಗುಲಾಬಿ ಹೂವನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರಂತೆ. ಮಕ್ಕಳಿಗೂ ಕೂಡ ಅಷ್ಟೇ. ನೆಹರೂ ಅವರ ಮೇಲೆ ಪುಟಾಣಿಗಳಿಗೆ ಎಷ್ಟು ಅಕ್ಕರೆಯೆಂದರೆ ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು ಎಂದರು.

ಮಕ್ಕಳು ತಾವು ಕಂಡ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಸಂಸ್ಕಾರ ಮತ್ತು ಸುವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಎಂದು ತಮ್ಮ ಶಾಲೆಯ ದಿನಗಳನ್ನು ಸ್ಮರಿಸಿದರು.
ಶಾಲೆಯ ಪ್ರಾಂಶುಪಾಲರಾದ ವಿಶ್ವನಾಥ ಅವರು ಮಾತನಾಡಿ, ಕಠಿಣ ಪರಿಶ್ರಮದಿಂದ ಮುನ್ನಡೆದಲ್ಲಿ ಯಾವುದೇ ಅಡ್ಡಿ ಆತಂಕಗಳು ಬಂದರು ಸಾಧನೆ ಮಾಡಬಹುದು. ಯಾವುದೇ ರೀತಿಯಿಂದ ವ್ಯವಸ್ಥೆಯಿಲ್ಲದೆ ಇರುವ ಆಗೀನ ಕಾಲದಲ್ಲಿ ಕಷ್ಟಪಟ್ಟು ಅಭ್ಯಾಸ ಮಾಡಿದರ ಫಲವಾಗಿ ಇಂದು ಉನ್ನತ ಸ್ಥಾನದಲ್ಲಿ ನಮ್ಮ ಹಳೆಯ ವಿದ್ಯಾರ್ಥಿ ಇರಲು ಸಾಧ್ಯವಾಗಿದೆ. ಈಗೀನ ವಿದ್ಯಾರ್ಥಿಗಳಿಗೆ ಇಂತಹ ಸಾಧಕರು ಮಾರ್ಗದರ್ಶಕರಾಗುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಸತ್ತಿನ ನಾಯಕಿಯಾದ ಕು.ಎಂ.ಕೆ. ಉಷಾ ಅಧ್ಯಕ್ಷಿಯ ನುಡಿಗಳನ್ನಾಡಿದಳು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಡಿ. ನಿಂಗಪ್ಪ ಅವರು ನೆಹರು ಅವರು ಜೀವನ ಚರಿತ್ರೆ ತಿಳಿಸಿದರು.
ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ, ಎಲ್ಲಾ ಶಿಕ್ಷಕರು, ಶಿಕ್ಷಣ ಪ್ರಶಿಕ್ಷಣಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯಲಕ್ಷ್ಮೀ ಮತ್ತು ಮಮತ ಪ್ರಾರ್ಥಿಸಿ, ಚಂದ್ರಮತಿ ಸ್ವಾಗತಿಸಿದರು. ಕು.ಎಂ.ಜೆ. ಚಂದನ್ ವಂದಿಸಿ, ಕು .ರೇಖಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















