ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಲ್ಲಿನ ಬಸವೇಶ್ವರ ನಗರದ ಸವಳಂಗ ರಸ್ತೆಯಲ್ಲಿರುವ ಮೂಲ ರೆಸಿಡೆನ್ಸಿ ಬಾರ್ ಅಟ್ಯಾಚ್ ಮತ್ತು ಇನ್ ವಿರುದ್ಧ ಸ್ಥಳೀಯರ ಆಕ್ರೋಶ ಭುಗಿಲೆದ್ದಿದ್ದು, ಇದರ ಪರವಾನಗಿಯನ್ನು ರದ್ದು ಮಾಡುವಂತೆ ಒತ್ತಾಯಿಸಲಾಗಿದೆ.
ಈ ಕುರಿತಂತೆ ಇಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ತಮಗಾಗುತ್ತಿರುವ ಸಮಸ್ಯೆಯನ್ನು ವಿವರಿಸಿದ್ದಾರೆ.
ಈ ಬಡಾವಣೆಯಲ್ಲಿ ಸುಮಾರು 400 ಮನೆಗಳಿದ್ದು, ಇಲ್ಲಿಗೆ ಸನಿಹದಲ್ಲೇ ಈ ಬಾರ್ ಇದೆ. ರೈಲ್ವೆ ಟ್ರಾಕ್’ನಿಂದ ಸುಮಾರು 20 ಮೀಟರ್ ಅಂತರದಲ್ಲಿದ್ದು,
100 ಮೀಟರ್ ಅಂತರದಲ್ಲಿ ಶಿವಾಲಯವೂ ಸಹ ಇದೆ. ಅಲ್ಲದೇ, ಇದಕ್ಕೆ ಹೊಂದಿಕೊಂಡಂತೆ ಕೇವಲ 15 ಮೀಟರ್ ಅಂತರದಲ್ಲಿ ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್ ಸಹ ಇದೆ. ಇನ್ನು, ಈ ರೆಸಿಡೆನ್ಸಿಗೆ ಪಾರ್ಕಿಂಗ್ ಸಹ ಇಲ್ಲ. ಈ ಭಾಗದಲ್ಲಿ ಹೆಣ್ಣು ಮಕ್ಕಳು ಓಡಾಡುವ ವೇಳೆ ವಾಹನ ನಿಲ್ಲಿಸಿಕೊಂಡು ಅವಾಚ್ಯ ಶಬ್ದಗಳಿಂದ ಕೂಗುತ್ತಾರೆ ಎಂದು ದೂರಲಾಗಿದೆ.
ಅಲ್ಲದೇ, ಪ್ಲಾಸ್ಟಿಕ್ ಬಾಟಲ್ ಹಾಗೂ ಕವರ್’ಗಳನ್ನು ಇಲ್ಲಿಯೇ ಎಸೆಯುವುದರಿಂದ ಪರಿಸರವೂ ಸಹ ಹಾಳಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ತತಕ್ಷಣವೇ ಈ ಬಾರ್ ಪರವಾನಗಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಈ ವೇಳೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ನಿರಂಜನಮೂರ್ತಿ, ಇದು ಸಭ್ಯ ಹಾಗೂ ಸುಸಂಸ್ಕೃತ ಜನರು ವಾಸಿಸುವ ಬಡಾವಣೆಯಾಗಿದೆ. ಅತ್ಯಂತ ಪ್ರಮುಖವಾಗಿ ದೇವಾಲಯ ಹಾಗೂ ಹಾಸ್ಟೆಲ್’ಗಳು ಇದ್ದು, ಈ ಬಾರ್’ನಿಂದ ನಮ್ಮ ಬಡಾವಣೆಯ ಸ್ವಾಸ್ಥ್ಯ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ತತಕ್ಷಣವೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲೇಬೇಕು. ಒಂದು ವೇಳೆ, ನಮ್ಮ ಮನವಿಗೆ ಸ್ಪಂಧಿಸದೇ ಹೋದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಡಾವಣೆಯ ನಿವಾಸಿಗಳು ಮನವಿ ಸಲ್ಲಿಕೆ ಸಂದರ್ಭದಲ್ಲಿ ಇದ್ದರು.
Get in Touch With Us info@kalpa.news Whatsapp: 9481252093
Discussion about this post