ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಎಂಬತ್ತು ವರ್ಷ ಮೇಲ್ಪಟ್ಟ ಹಿರಿಯರು, ವಿಕಲಚೇತನರು, ಕೋವಿಡ್-19 ಸೋಂಕಿತ/ ಬಾದಿತ ವ್ಯಕ್ತಿಗಳು ಹಾಗೂ ಅಗತ್ಯ ಸೇವೆಯಲ್ಲಿರುವವರು, ಮತಗಟ್ಟೆ ಕೇಂದ್ರಕ್ಕೆ ತೆರಳಲು ಆಗದಿರುವ ಮತದಾರರಿಗೆ ‘ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿದೆ. ಈ ಅವಕಾಶವನ್ನು ಅರ್ಹರು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರಮುಖರ ಜೊತೆ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮಾತನಾಡಿದರು.

ಬೂತ್ ಮಟ್ಟದ ಅಧಿಕಾರಿಗಳು ಮತದಾನ ಕೇಂದ್ರವಿರುವ ಪ್ರದೇಶದಲ್ಲಿ ಚುನಾವಣಾಧಿಕಾರಿಯು ಒದಗಿಸಿದ ವಿವರಗಳ ಅನುಸಾರ ಎವಿಎಸ್ಸಿ, ಎವಿಪಿಡಿ ಮತ್ತು ಎವಿಸಿಓ ಪ್ರವರ್ಗಗಳಲ್ಲಿನ ಗೈರು ಹಾಜರಿ ಮತದಾರರ ಮನೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ಮತದಾರರಿಗೆ ನಮೂನೆ 12 ಡಿ ಯನ್ನು ವಿತರಿಸಿ, ನಂತರ ಮತದಾರರಿಂದ ನಮೂನೆ 12 ಡಿ ಯನ್ನು ಪಡೆಯಲಾಗುವುದು. ಈ ಉದ್ದೇಶಕ್ಕಾಗಿಯೇ ಪ್ರತ್ಯೇಕ ಪಟ್ಟಿ ತಯಾರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಅಂಚೆ ಮತದಾರನು ಒಂದು ಬಾರಿ ಅಂಚೆ ಮತಪತ್ರದ ಮೂಲಕ ಮತಚಲಾಯಿಸುವುದಾಗಿ ಆಯ್ಕೆ ಮಾಡಿಕೊಂಡಲ್ಲಿ, ಯಾವುದೇ ಕಾರಣಕ್ಕೂ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಸ್ಪಷ್ಟಪಡಿಸಿದರು.
ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕದಂದು, ಆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಚುನಾವಣೆಯು ಮುಕ್ತಾಯಗೊಳ್ಳುವವರೆಗೂ ಆ ಪಟ್ಟಿಯಲ್ಲಿ ಯಾವುದೇ ಹೆಚ್ಚುವರಿ ಸೇರ್ಪಡೆ ಅಥವಾ ತೆಗೆದುಹಾಕುವಿಕೆ ಮಾಡುವುದಿಲ್ಲ ಎಂದರು.

ಚುನಾವಣಾಧಿಕಾರಿಯು ಮತದಾರರ ಪಟ್ಟಿ ಗುರುತು ಮಾಡಿದ ಪ್ರತಿಯನ್ನು ಅವರ ಹೆಸರಿನ ಮುಂದೆ ‘ಪಿಬಿ’ (ಪೊಸ್ಟಲ್ ಬ್ಯಾಲೆಟ್) ಎಂದು ನಮೂದಿಸುತ್ತಾರೆ. ಅಂಚೆ ಮತಪತ್ರವನ್ನು ನೀಡಲಾದ ಮತದಾರನಿಗೆ ಮತದಾನ ಕೇಂದ್ರದಲ್ಲಿ ಮತ ಹಾಕಲು ಅನುಮತಿ ನೀಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ತೆನ್ನಿರಾ ಮೈನಾ ಮತ್ತು ಬಿಜೆಪಿಯ ಸತೀಶ್ ಅವರು ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವು ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ಕೈಜೋಡಿಸಲಾಗುವುದು. 80 ವರ್ಷ ಮೇಲ್ಪಟ್ಟವರು ಹಾಗೂ ಇತರರನ್ನು ಸಂಪರ್ಕಿಸಿ ಮತಗಟ್ಟೆಗೆ ತೆರಳಲು ಅಸಾಧ್ಯವಾಗಿರುವವರಿಗೆ ಅಂಚೆ ಮತಪತ್ರ ಪಡೆದು ಮತದಾನ ಮಾಡಲು ಉತ್ತೇಜಿಸಲಾಗುವುದು ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಯ ಹಲವು ಹಾಡಿಯ ಕುಟುಂಬಗಳು ಇನ್ನೂ ಸಹ ಮತದಾರರ ಗುರುತಿನ ಚೀಟಿ ಪಡೆದಿಲ್ಲ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ತೆನ್ನಿರ ಮೈನಾ ಅವರು ಕೋರಿದರು.

ಹಾಡಿಗಳಲ್ಲಿ ಈಗಾಗಲೇ ಎರಡು ಬಾರಿ ಮನೆ ಮನೆಗೆ ಭೇಟಿ ನೀಡಿ 1002 ಕ್ಕೂ ಹೆಚ್ಚು ಮಂದಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇನ್ನೂ ಯಾರಾದರೂ 18 ವರ್ಷ ಮೇಲ್ಪಟ್ಟವರು ಬಿಟ್ಟು ಹೋಗಿದ್ದಲ್ಲಿ ಹತ್ತಿರದ ಬಿಎಲ್ಒಗಳನ್ನು ಅಥವಾ ವೋಟರ್ ಹೆಲ್ಫ್ಲೈನ್ ಆ್ಯಪ್ ಮೂಲಕ ಹೆಸರು ನೋಂದಾಯಿಸಬಹುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸತೀಶ್(ಬಿಜೆಪಿ), ಗುಲಾಬಿ(ಜೆಡಿಎಸ್), ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬಾನಾ ಎಂ.ಶೇಕ್, ಚುನಾವಣಾ ತಹಶೀಲ್ದಾರ್ ರವಿಶಂಕರ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post