ಕಲ್ಪ ಮೀಡಿಯಾ ಹೌಸ್
ಮಂಡ್ಯ: ಎಲ್ಲವನ್ನೂ ಸರ್ಕಾರವೇ ಮಾಡಬೇಕು ಎನ್ನುತ್ತಿದ್ದರೆ ಸಾಧ್ಯವಿಲ್ಲ. ನಾಗರಿಕರ ರಕ್ಷಣೆಗೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನಿಂದಾದ ಸಹಾಯ ಮಾಡಬೇಕು. ಆಗ ಮಾತ್ರವೇ ಎಲ್ಲರ ರಕ್ಷಣೆ ಮತ್ತು ಏಳಿಗೆ ಸಾಧ್ಯ ಎನ್ನುವುದನ್ನು ಅರಿತ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ, ತಮ್ಮ ಉಸ್ತುವಾರಿ ಜಿಲ್ಲೆಯಾದ ಮಂಡ್ಯದಲ್ಲಿ ಕೋವಿಡ್ ಸೋಂಕಿತರಿಗೆ ವೈಯಕ್ತಿಕವಾಗಿ ಮೆಡಿಸಿನ್ ಕಿಟ್ ಅನ್ನು ನೀಡುತ್ತಿದ್ದಾರೆ.
ಉಪಮುಖ್ಯಮಂತ್ರಿ ಡಾ. ಅಶ್ವಥನಾರಾಯಣ ಅವರು ಮಂಡ್ಯದಲ್ಲಿ ಇಂದು ಉಚಿತ ಮೆಡಿಸಿನ್ ಕಿಟ್ ವಿತರಣೆಗೆ ಚಾಲನೆ ನೀಡಿದರು. ಸಚಿವ ಡಾ. ನಾರಾಯಣಗೌಡ ಅವರು, ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ ಹಾಗೂ ಇನ್ನಿತರ ಬೇಡಿಕೆಗಳನ್ನು ಸರ್ಕಾರದಿಂದ ಒದಗಿಸಿದ್ದಾರೆ. ಅದರ ಹೊರತಾಗಿ ಅವರು ವೈಯಕ್ತಿಕವಾಗಿ ಜನಸಾಮಾನ್ಯರ ಸೇವೆಗೆ ಮುಂದಾಗಿರುವುದು ಮಾದರಿ ಕಾರ್ಯ. ಮಂಡ್ಯ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ, ಅವರಿಗೆ ಉಚಿತವಾಗಿ ಕೋವಿಡ್ ಸಂಬಂಧಿತ ಮೆಡಿಸಿನ್ ಕಿಟ್ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ದಾನಿಗಳು ಈ ರೀತಿಯಲ್ಲಿ ಜನ ಸೇವೆಗೆ ಮುಂದಾದರೆ ಅದೆಷ್ಟೋ ಜನರಿಗೆ ದೈವಸ್ವರೂಪಿಯಾಗುತ್ತಾರೆ. ಸಚಿವ ಡಾ. ನಾರಾಯಣಗೌಡ ಅವರ ಕಾರ್ಯ ಶ್ಲಾಘನೀಯ. ಎಲ್ಲರು ಅವರನ್ನು ಅನುಸರಿಸುವಂತಾಗಲಿ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಾ. ನಾರಾಯಣ ಗೌಡ ಅವರು ಇಡಿ ಜಿಲ್ಲೆಯ ಜನ ಆರೋಗ್ಯ ರಕ್ಷಣೆಗೆ ಪಣತೊಟ್ಟು ಜಿಲ್ಲೆಯಾದ್ಯಂತ ಓಡಾಡಿ ಎಲ್ಲ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಜೊತೆಗೆ ಸರ್ಕಾರದಿಂದ ಕಲ್ಪಿಸಬಹುದಾದ ಎಲ್ಲ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ಜಿಲ್ಲೆಯ ಜನರಿಗೆ ವೈಯಕ್ತಿಕವಾಗಿ ನೆರವು ನೀಡಲು ತೀರ್ಮಾನಿಸಿ, ಔಷಧದ ಕಿಟ್ ಅನ್ನು ನೀಡುತ್ತಿದ್ದಾರೆ. ಕೋವಿಡ್-19 ಅನ್ನು ತಡೆಗಟ್ಟೆಲು ಹಾಗೂ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಈಗಾಗಲೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಉತ್ತಮ ಗುಣಮಟ್ಟದ ಊಟ ತಿಂಡಿ ನೀಡಲಾಗುತ್ತಿದೆ. ಆದರೆ ಹೋಮ್ ಐಸೋಲೇಶನ್ ನಲ್ಲಿ ಇರುವವರಿಗೆ ಔಷಧವನ್ನು ತಲುಪಿಸಬೇಕಾಗಿದೆ. ಹೀಗಾಗಿ ಸಚಿವರ ಸೂಚನೆಯಂತೆ ಮೆಡಿಸಿನ್ ಕಿಟ್ಗಳನ್ನು ಸಿದ್ದಪಡಿಸಲಾಗಿದೆ.
10 ಸಾವಿರ ಔಷಧಿ ಕಿಟ್ ವಿತರಣೆ:
ಕೋವಿಡ್ ಸೋಂಕಿತರಿಗೆ ಆರೋಗ್ಯ ತಿಳಿಸಿದಂತೆ ಐದಾರು ವಿಧದ ಮಾತ್ರೆಗಳನ್ನು ದಿನ ನಿತ್ಯ ನೀಡಬೇಕು. ಆದರೆ ಸೋಂಕಿತರು ಮನೆಯಿಂದ ಆಚೆ ಬರುವಂತಿಲ್ಲ. ಹೀಗಾಗಿ ಸೋಂಕಿತರ ಮನೆಗೇ ಈ ಔಷಧದ ಕಿಟ್ಗಳನ್ನು ತಲುಪಿಸಲಾಗುತ್ತಿದೆ. ಏಳು ರೀತಿಯ ಮಾತ್ರೆಗಳು ಸೇರಿದಂತೆ ಸ್ಯಾನಿಟೈಸರ್, 10 ಮಾಸ್ಕ್ ಗಳಿರುವ ಒಟ್ಟು 10 ಸಾವಿರ ಕಿಟ್ಅನ್ನು ಸಿದ್ದಪಡಿಸಲಾಗಿದೆ.
ಸ್ಥಿತಿವಂತ ಪ್ರತಿಯೊಬ್ಬರೂ ಇಂತಹ ಕಾರ್ಯ ಮಾಡಲಿ:
ಕೋವಿಡ್-19 ನಿಂದಾಗಿ ಎಲ್ಲ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಹಲವಾರು ಜನರು ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ಕೆಲವರ ಮನೆಯಲ್ಲಿ ದುಡಿಯುವವರಿಗೇ ಕೊರೋನಾ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಕೆಳ ಮದ್ಯಮ ವರ್ಗ ಹಾಗೂ ಬಡವರ ಬದುಕು ದಯನೀಯವಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಬೇಕು. ಸಚಿವನಾಗಿ ಜನರ ಸೇವೆ ಮಾಡುವುದು ನನ್ನ ಕರ್ತವ್ಯ. ಅದರ ಹೊರತಾಗಿಯೂ ವೈಯಕ್ತಿಕವಾಗಿ ನನ್ನ ಜಿಲ್ಲೆಯ ಜನರಿಗೆ ಸಹಾಯ ಹಸ್ತ ಚಾಚುವ ಪ್ರಯತ್ನ ಮಾಡುತ್ತಿದ್ದೇನೆ. ಧಾನಿಗಳು, ಸಂಘ ಸಂಸ್ಥೆಯವರು ಜನರ ನೆರವಿಗೆ ಧಾವಿಸಲಿ ಎಂದು ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಡಿಸಿಎಂ ಅಶ್ವಥನಾರಾಯಣ ಹಾಗೂ ಸಚಿವ ಡಾ. ನಾರಾಯಣಗೌಡ ಅವರು ಮಂಡ್ಯದಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಅತ್ಯುತ್ತಮವಾಗಿ ಮಾಡುತ್ತಿದ್ದಾರೆ. ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಉತ್ತಮವಾಗಿ ಕೊರೋನಾ ನಿಯಂತ್ರಿಸುವ ಕಾರ್ಯ ಆಗಿದೆ. ಮೆಡಿಸಿನ್, ಆಕ್ಸಿಜನ್, ಊಟೋಪಚಾರದ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಶಾಸಕರು, ಅಧಿಕಾರಿಗಳು, ಆರೋಗ್ಯ ಇಲಾಖೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಡಿಸಿಎಂ ಅಶ್ವಥನಾರಾಯಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post