ಕಲ್ಪ ಮೀಡಿಯಾ ಹೌಸ್
ಮಂಡ್ಯ: ಸಚಿವರು ಬಂದಾಗ ಮಾತ್ರ ಎಲ್ಲ ವ್ಯವಸ್ಥೆ ಇರುತ್ತೆ. ಆಮೇಲೆ ಅಧಿಕಾರಿಗಳು ಇತ್ತ ಗಮನ ಹರಿಸುವುದೇ ಇಲ್ಲ. ಇಂಥ ಆರೋಪ ಮಂಡ್ಯ ಜಿಲ್ಲೆಯ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್’ನಲ್ಲಿ ಹಲವುಬಾರಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಮ್ಮ ಕಚೇರಿಯ ಸಿಬ್ಬಂದಿಯನ್ನು ವಿಚಕ್ಷಣಾದಳದ ರೀತಿಯಲ್ಲಿ ಕಳುಹಿಸಿದ್ದಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ, ಜಿಲ್ಲೆಯ ಎಲ್ಲ ಆಸ್ಪತ್ರೆ, ಕೋವಿಡ್ ಕೇರ್ ಸೆಂಡರ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿರುವ ಸಚಿವರು ನಿರಂತರವಾಗಿ ಎಲ್ಲೆಡೆ ತೆರಳಿ ಪರಿಶೀಲಿಸುತ್ತಿದ್ದಾರೆ. ಆದರೆ ಕೆಲವು ಕಡೆಗಳಲ್ಲಿ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಒಂದಷ್ಟು ಆರೋಪಗಳು ಕೇಳಿಬಂದಿತ್ತು. ನೀವು ಬರುವ ವಿಚಾರ ತಿಳಿದಾಗ ಮಾತ್ರ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ನೀವು ತೆರಳಿದ ಬಳಿಕ ಎಲ್ಲ ಅವ್ಯವಸ್ಥೆಯ ಆಗರವಾಗಿರುತ್ತದೆ ಎಂದು ಕೆಲ ಕೋವಿಡ್ ಸೋಂಕಿತರು ದೂರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಸಮಸ್ಯೆ ಪರಿಹಾರಕ್ಕಾಗಿ ಸಚಿವರು ತಮ್ಮ ಕಚೇರಿಯ ಸಿಬ್ಬಂದಿಯನ್ನೇ ನೇಮಿಸಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕಿನ ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್’ಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಬೆಡ್ ಸಮಸ್ಯೆ, ಆಕ್ಸಿಜನ್ ಕೊರತೆ ಸೇರಿದಂತೆ ಏನೇ ವಿಚಾರ ಇದ್ದರು ಜಿಲ್ಲಾಡಳಿತಕ್ಕೆ ಹಾಗೂ ತಮ್ಮ ಗಮನಕ್ಕೆ ನೇರವಾಗಿ ತರುವಂತೆ ಸೂಚನೆ ನೀಡಿದ್ದಾರೆ.
ಖುದ್ದು ಫೀಲ್ಡಿಗಿಳಿದ ಸಚಿವರ ಆಪ್ತ ಶಾಖೆ ಸಿಬ್ಬಂದಿ
ಮಂಡ್ಯ ಜಿಲ್ಲೆಯಲ್ಲಿ ಎಲ್ಲಿಯೂ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಹಗಲಿರುಳು ಓಡಾಡಿ ಶ್ರಮಿಸುತ್ತಿದ್ದೇನೆ. ಆದಾಗ್ಯೂ ಸಮಸ್ಯೆ ತಲೆದೋರುತ್ತಿದೆ ಎಂದಲ್ಲಿ ಕೆಲವರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಹೀಗಾಗಿ ಅನಿರೀಕ್ಷಿತ ಭೇಟಿ ಮಾಡಿದರೆ ಮಾತ್ರ ಇದು ಬಹಿರಂಗವಾಗಲು ಸಾಧ್ಯ. ಅದಕ್ಕಾಗಿ ತಮ್ಮ ಕಚೇರಿಯ ಸಿಬ್ಬಂದಿಯನ್ನೇ ವಿಚಕ್ಷಣಾದಳದ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಚಿವರು ನೇಮಿಸಿದ್ದಾರೆ.
ಸಚಿವರ ಸೂಚನೆ ಮೇರೆಗೆ ಖುದ್ದು ಪೀಲ್ಡಿಗಿಳಿದ ಸಚಿವರ ಆಪ್ತ ಶಾಖೆ ಸಿಬ್ಬಂದಿ, ಅಧಿಕಾರಿಗಳ ಗಮನಕ್ಕೆ ಬಾರದಂತೆ ಪರಿಶೀಲನೆ ನಡೆಸಿದ್ದಾರೆ. ಈಗಾಗಲೆ ಮಂಡ್ಯ ಜಿಲ್ಲೆಯ ಕೆಲ ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್ ಗಳಿಗೆ ತಂಡ ತೆರಳಿ ಪರಿಶೀಲನೆ ನಡೆಸಲಾಗಿದೆ. ಎರಡು ದಿನಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕಿಗೆ ತೆರಳಿ ವಾಸ್ತವ ಸ್ಥಿತಿ ಅರಿತು ಸಚಿವರಿಗೆ ವರದಿ ಸಲ್ಲಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post