ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಪ್ರಖರ ಗಾಂಧೀ ಚಿಂತಕರೂ, ಶಿಕ್ಷಣ ವೇತ್ತರೂ ಆಗಿರುವ ಎಲ್. ನರಸಿಂಹಯ್ಯ ತೊಂಡೋಟಿ ಅವರು ಮಂಡ್ಯದ ಗಾಂಧೀ ಭವನ ನೀಡಲಿರುವ ಈ ಸಾಲಿನ ಪ್ರೊ.ಎಂ.ಕರೀ ಮುದ್ದೀನ್ ಸ್ಮಾರಕ ಗಾಂಧೀ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ತಮ್ಮ 91 ನೆ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಎಲ್ಲೆನ್ ಅವರು ಕನಕಪುರ ತಾಲ್ಲೂಕು ಹಾರೋಹಳ್ಳಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳಕಾಲ ಮುಖ್ಯೋಪಾಧ್ಯಾಯರಾಗಿ ಆ ಶಾಲೆಗೆ ಗಾಂಧೀ ಮೌಲ್ಯಗಳ ಚೌಕಟ್ಟು ಹಾಕಿದವರು. ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತುಮಕೂರು. ಮತ್ತು ರಾಮನಗರ ಜಿಲ್ಲೆಗಳ ಶಾಲಾ ಮಕ್ಕಳಿಗೆ ಗಾಂಧೀ ತತ್ವಗಳನ್ನು ಪರಿಚಯಿಸಿದವರು. ಅವರು ರಚಿಸಿದ ಕಥನ ಕವನ ‘ಗಾಂಧೀ ಗೋವಿನ ಕಥೆ ‘
ಮಕ್ಕಳಿಗೆ ಪ್ರಿಯವಾದ ಪುಸ್ತಿಕೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀಯುತರಿಗೆ 2022 ರ ಎ. ಆರ್. ನಾರಾಯಣ ಘಟ್ಟ – ಸರೋಜಮ್ಮ ಗಾಂಧೀ ಪುದು ವಟ್ಟು ದತ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರೊ. ಎಂ. ಕರೀಮುದ್ದಿನ್
ಶ್ರೀರಂಗಪಟ್ಟಣ ತಾಲ್ಲೂಕು ಗಂಜಾಂ ನಿವಾಸಿಯಾಗಿದ್ದ ದಿ. ಪ್ರೊ.ಎಂ. ಕರೀಮುದ್ದೀನ್ ಕನ್ನಡ ಪ್ರಾಧ್ಯಾಪಕರೂ,ಭಾಷಾ ತಜ್ಞರೂ, ವಾಗ್ಮಿಗಳೂ, ಬರಹಗಾರರೂ ಆಗಿ ಪ್ರಸಿದ್ಧರು.ಕನ್ನಡ, ಅರೇಬಿಕ್, ಹಿಂದಿ, ಸಂಸ್ಕೃತ, ಇಂಗ್ಲಿಷ್ ನಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ಅನಾಥ ಮುಸ್ಲಿಂರು, ಸಂಚಿತ ಚಿಂತನ,ಬಾಳು – ಬದುಕು ಕೃತಿಗಳ ಲೇಖಕರು.ಶ್ರೀಯುತರ ಸಂಸ್ಮರಣೆಯಲ್ಲಿ ಈ ಗಾಂಧೀ ಸೇವಾ ಪ್ರಶಸ್ತಿಯನ್ನು ಮಂಡ್ಯದ ಗಾಂಧೀ ಭವನ ದಲ್ಲಿ ಜುಲೈ ಐದರಂದು ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















