ಕಲ್ಪ ಮೀಡಿಯಾ ಹೌಸ್
ಮಂಗಳೂರು: ಬಹುಮಾನ ನೀಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 7,85,800ರೂ. ವಂಚಿಸಿದ ಘಟನೆ ಬಗ್ಗೆ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಡಿಸೆಂಬರ್ನಲ್ಲಿ ನಾಪ್ಟಾಲ್ ಸಂಸ್ಥೆಯಿಂದ ಒಂದು ರಿಜಿಸ್ಟರ್ ಪೋಸ್ಟ್ ಬಂದಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ ನ್ಯಾಪ್ಟಾಲ್ ಸಂಸ್ಥೆಯ ಹೆಸರಿನಲ್ಲಿ ಒಂದು ಸ್ಕ್ರಾಚ್ ಕಾರ್ಡ್ ಹಾಗೂ ಪತ್ರ ಇರಿಸಲಾಗಿತ್ತು. ಅದರಲ್ಲಿ 12 ಲಕ್ಷ ರೂ. ಬಹುಮಾನ ಬಂದಿರುವುದಾಗಿ ನಮೂದಿಸಲಾಗಿತ್ತು.

ಆ ಬಳಿಕ ಅದರಲ್ಲಿ ಇದ್ದ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದಾಗ, ಅಂಚೆಯಲ್ಲಿ ಬಂದ ಪತ್ರದಲ್ಲಿ ಬ್ಯಾಂಕ್ ಖಾತೆ ವಿವರ ಹಾಗೂ ವಿಳಾಸವನ್ನು ನಮೂದಿಸಿ ವಾಟ್ಸ್ ಅಪ್ ಮೂಲಕ ಕಳುಹಿಸುವಂತೆ ತಿಳಿಸಲಾಗಿತ್ತು. ಆ ಬಳಿಕ ಬೇರೊಂದು ನಂಬರ್ನಿಂದ ಕರೆ ಬಂದಿದ್ದು, ತನ್ನ ಹೆಸರು ಪ್ರದೀಪ್ ಪೂಜಾರಿ, ನಿಮ್ಮ ಬಹುಮಾನ ಪಡೆದುಕೊಳ್ಳಲು ಕೆಲವು ಶುಲ್ಕಗಳನ್ನು ಪಾವತಿ ಮಾಡುವ ಅಗತ್ಯವಿದ್ದು, ಅದನ್ನು ಮೊದಲು ನೀಡುವಂತೆ ಸೂಚಿಸಲಾಗುತ್ತು. ಅದರಂತೆ ದೂರುದಾರರು ಹಂತ ಹಂತವಾಗಿ ಒಟ್ಟು 7,85,800 ರೂ. ನಗದನ್ನು ವರ್ಗಾಯಿಸಿದ್ದರು. ಆದರೆ ಬಹುಮಾನ ಬಾರದೇ ಇದ್ದಾಗ ಇದು ವಂಚನೆ ಎಂಬುದು ತಿಳಿಯಿತು.
ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















