ಸೊರಬ: ಉತ್ತಮ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವ ಮಣಿಪಾಲ ವೈದ್ಯಕೀಯ ಸಂಸ್ಥೆಯು ಇನ್ನಷ್ಟು ರಿಯಾಯ್ತಿ ದರದಲ್ಲಿ ಬಡವರಿಗೆ ಸೇವೆಯನ್ನು ನೀಡಲು ತಯಾರಿದೆ ಎಂದು ಮಣಿಪಾಲ ಆಸ್ಪತ್ರೆಯ ಉಪ ವ್ಯವಸ್ಥಾಪಕ ಮೋಹನ ಶೆಟ್ಟಿ ಹೇಳಿದರು.
ಪಟ್ಟಣದ ವಿಪ್ರ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಪಡೆಯುವ ಬಗ್ಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ವೈದ್ಯಕೀಯ ಸೇವೆಯಲ್ಲಿ ಬಡವರಿಗಾಗಿ ಬದಲಾವಣೆ ಬಯಸಿರುವ ಸಂಸ್ಥೆಯು ರಿಯಾಯ್ತಿ ದರದಲ್ಲಿ ಮಣಿಪಾಲ ಕಾರ್ಡ್ ನೀಡುತ್ತಿದೆ. ಇದರಿಂದ ಚಿಕಿತ್ಸೆಗೆ ತಗುಲುವ ಒಟ್ಟು ವೆಚ್ಚದಲ್ಲಿ ಅರ್ಧದಷ್ಟು ಖಡಿತಗೊಳಿಸಿ ಬಡವರಿಗೆ ಅವಕಾಶ ಮಾಡಿಕೊಟ್ಟಿದೆ ಎಂದರು.
ಆರೋಗ್ಯ ಕಾರ್ಡ್ ಅಭಿಯಾನವು 17 ವರ್ಷ ಯಶಸ್ವಿಯಾಗಿ ಪೂರೈಸಿದೆ. ಕಳೆದ ವರ್ಷ 2 ಲಕ್ಷದಷ್ಟು ಜನರು ಆರೋಗ್ಯ ಕಾರ್ಡ್ ಹೊಂದಿದ್ದರು. ಈ ಬಾರಿ 4ಲಕ್ಷ ಜನರು ಆರೋಗ್ಯ ಕಾರ್ಡ್ ನೋಂದಣಿ ಮಾಡಿಸುವ ನಿರೀಕ್ಷೆ ಇದೆ ಎಂದರು.
ಆರೋಗ್ಯ ಕಾರ್ಡ್ ಹೊಂದಿದ್ದರೆ ವೈದ್ಯರು ಪಡೆಯುವ ಸೇವೆಯ ದರದಲ್ಲಿ ಅರ್ಧದಷ್ಟು ಖಡಿತವಿದ್ದು, ರಕ್ತ ಮಾದರಿ ಪರೀಕ್ಷೆ ಶೇ 25ರಷ್ಟು, ಮಾತ್ರೆ, ಔಷಧಿಗಳಲ್ಲಿ ಶೇ 10ರಷ್ಟು, ಶಸ್ತ್ರ ಚಿಕಿತ್ಸೆಯಲ್ಲೂ ಶೇ 20ರಷ್ಟು ರಿಯಾಯ್ತಿ ಇದೆ ಎಂದರು.
ಒಳ ರೋಗಿಯಾಗಿ ಆಸ್ಪತ್ರೆಗೆ ದಾಖಲಾದರೂ ರೋಗಿ ಇರುವ ದಿನದಷ್ಟು ವೈದ್ಯರ ಹಾಗೂ ಚಿಕಿತ್ಸೆಗೆ ತಗುಲುವ ವೆಚ್ಚದಲ್ಲಿ ಶೇ 25ರಷ್ಟು ರಿಯಾಯ್ತಿ ಇದೆ ಎಂದು ವಿವರಿಸಿದರು.
ಮಣಿಪಾಲ ಕಾರ್ಡ್ ನೋಂದಣಿ ಮಾಡಿಸಲು ಪಟ್ಟಣದಲ್ಲಿರುವ ವಿಪ್ರ ಬ್ಯಾಂಕಿನಿಂದ ಅರ್ಜಿ ರೂ 250 ಶುಲ್ಕ ನೀಡಿ ಕಾರ್ಡ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಮಾರ್ಕೆಟ್ ವ್ಯವಸ್ಥಾಪಕ ಶ್ರೀನಿವಾಸ್ ಭಾಗವತ್, ವಿಪ್ರ ಬ್ಯಾಂಕ್ ವ್ಯವಸ್ಥಾಪಕಿ ಅನಿತಾ ದಾಮ್ಲೆ ಉಪಸ್ಥಿತರಿದ್ದರು.
Discussion about this post