ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅರಣ್ಯ ಭೂಮಿ ಸಾಗುವಳಿದಾರರ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು, ದಶಕಗಳ ಕಾಲದಿಂದ ಪರಿಹಾರವಾಗದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಮಲೆನಡು ರೈತ ಹೋರಾಟ ಸಮಿತಿ ವತಿಯಿಂದ ಸಿಗಂಧೂರು ಸೇತುವೆ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ತೀ.ನಾ. ಶ್ರೀನಿವಾಸ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಒಂದು ವರ್ಷದೊಳಗೆ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಮೂರು ವರ್ಷ ಕಳೆದರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಮಲೆನಾಡ ರೈತರ ಸಂಕಷ್ಟದ ವಿಷಯದಲ್ಲಿ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯ ಖಂಡನೀಯ ಎಂದರು.
ಬಡವರ ಧ್ವನಿಯಾಗಬೇಕಾದ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ಬದಲು ಕೋರ್ಟ್’ಗೆ ಹೋಗಲು ಸೂಚಿಸುತ್ತಿರುವುದು ಸರಿಯಲ್ಲ. ರೈತರೇ ಕೋರ್ಟ್’ಗೆ ಹೋಗುವುದಾದರೆ ಜನಪ್ರತಿನಿಧಿಗಳು ಯಾಕೆ ಬೇಕು? ಅವರು ಕೂಡಲೇ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದರು.
ಒಂದು ವೇಳೆ ಸಮಸ್ಯೆ ಶೀಘ್ರವಾಗಿ ಇತ್ಯರ್ಥವಾಗದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಕಾರಿಗಳ ಕಚೇರಿ ಹಾಗೂ ಸಚಿವರ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಕೆ ನೀಡಿದರು.
ಕೆಪಿಸಿ ಭೂಮಿ ನಂಬಿ ಬದುಕುತ್ತಿರುವ ತಮಗೆ ಕೂಡಲೇ ಹಕ್ಕುಪತ್ರ ನೀಡಬೇಕು. 1964 ರಿಂದಲೂ ಮುಳುಗಡೆ ಸಂತ್ರಸ್ತರು ಅನುಭವಿಸುತ್ತಿರುವ ನೋವನ್ನು ಆಲಿಸುವಲ್ಲಿ ಶಾಸಕಾಂಗ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ವಿಧಾನಸಭೆ ಚುನಾವಣೆಗೆ ಮುನ್ನ ಯಡಿಯೂರಪ್ಪನವರು 15 ದಿನಗಳಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು ಬಗೆಹರಿಸುವುದಾಗಿ ಶಿವಮೊಗ್ಗ ಈಡಿಗರ ಭವನದಲ್ಲಿ ಘೋಷಿಸಿದ್ದರು. ಆಗಿನ ಮುಖ್ಯಮಂತ್ರಿ ಬೊಮ್ಮಯಿ ಇದನ್ನೇ ಹೇಳಿದ್ದರು. ಕರ್ನಾಟಕದಿಂದ ದೆಹಲಿಯವರೆಗೂ ಬಿಜೆಪಿ ಅಧಿಕಾರದಲ್ಲಿ ಇದ್ದರೂ ಮಲೆನಾಡಿನ ರೈತರ ಯಾವುದೇ ಬೇಡಿಕೆ ಈಡೇರಿಸಲಿಲ್ಲ ಎಂದು ಕಿರಿ ಕಾರಿದರು.
ಸಮಿತಿಯ ಕಾನೂನು ಸಲಹೆಗಾರರು, ಹೈಕೋರ್ಟ್ ಹಿರಿಯ ನ್ಯಾಯವಾದಿಗಳೂ ಅದ ಕುಮಾರಸ್ವಾಮಿ ಮಾತನಾಡಿ, ಕಳೆದ 80 ವರ್ಷದಿಂದ ರಾಜ್ಯಕ್ಕಾಗಿ ಜೀವನ ತ್ಯಾಗ ಮಾಡಿದ ಜನರು ಇಲ್ಲಿನವರು. ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಎಲ್ಲವನ್ನೂ ತ್ಯಾಗ ಮಾಡಿದ ಇಲ್ಲಿನ ಜನರನ್ನು ಕತ್ತಲಲ್ಲಿ ಕೂರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ರೈತರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಜನಪ್ರತಿನಿಧಿಗಳು, ರಾಜ್ಯ ಸರ್ಕಾರ, ಆಡಳಿತ ಭರವಸೆ ನೀಡಿದೆಯೇ ವಿನಾ ಯಾವುದೂ ಈಡೇರಿಲ್ಲ. ಈ ಭಾಗದ ಜನರಿಗೆ ದೊರೆಯಬೇಕಾದ ನ್ಯಾಯಕ್ಕಾಗಿ ಇದು ಹೋರಾಟದ ಆರಂಭವಷ್ಟೆ. ಬೇಡಿಕೆಗಳು ಈಡೇರದೇ ಇದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟ ಮಾಡುವುದು ಮಾತ್ರವಲ್ಲ ವಿಧಾನಸೌಧಕ್ಕೆ ಬೀಗ ಹಾಕುವ ಮೂಲಕ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿವನಾಗ ಪಾರ್ಥ ಅವಧೂತ ಸ್ವಾಮೀಜಿ ಮಾತನಾಡಿ, ಮಲೆನಾಡು ಭಾಗದ ರೈತರಿಗೆ ಎಂದಿಗೂ ನೆಮ್ಮದಿ ಇಲ್ಲ ಎನ್ನುವಂತಾಗಿದೆ. ಅನ್ನದಾತೋ ಸುಖೀಭವ ಎನ್ನುತ್ತಾರೆ. ಆದರೆ, ನಮ್ಮ ಮಲೆನಾಡಿನ ರೈತರಿಗೆ ನೆಮ್ಮದಿಯಿಲ್ಲ ಎನ್ನುವಂತಾಗಿದೆ. ಸೇತುವೆ ನಿರ್ಮಾಣಕ್ಕೂ ಮುನ್ನದಿಂದಲೂ ಇಲ್ಲಿನ ಜನರ ಅನುಕೂಲಕ್ಕೆ ಭರವಸೆ ನೀಡಲಾಗಿತ್ತು. ಆದರೆ, ಯಾವುದೇ ಭರವಸೆ ಈಡೇರಿಲ್ಲ. ಯಾವಾಗ ಪರಿಹಾರ ದೊರೆಯುತ್ತದೆ. ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲ ಎಂದು ಕಿಡಿ ಕಾರಿದರು.
ಇಲ್ಲಿನ ರೈತರು ಅವರ ಜಾಗವನ್ನು ಕೇಳುತ್ತಿದ್ದಾರೆಯೇ ವಿನಃ ಬೇರೆಯವರ ಜಾಗ ಕೇಳುತ್ತಿಲ್ಲ. ಈ ರಾಜ್ಯಕ್ಕೆ ಬೆಳಕು ಕೊಟ್ಟಂತಹ ಇಲ್ಲಿನ ಜನರ ಜೀವನ ಬೆಳಗಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಬೇಡಿಕೆಗಳೇನು?
1. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಸುಮಾರು 1 ವರ್ಷ ಅಧ್ಯಯನ ನಡೆಸಿದ ಮದನ್ ಗೋಪಾಲ್ ಅವರು ಶಿಫಾರಸ್ಸು ಮಾಡಿದ ವರದಿಯಂತೆ ತಕ್ಷಣ ಬಗೆಹರಿಸಬೇಕು. ಸುಪ್ರೀಂಕೋರ್ಟ್, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಧಿಕಾರಿಗಳು ಪರಸ್ಪರ ಮಾತುಕತೆ ನಡೆಸಿ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸಿ ಎಂದು ಆದೇಶಿಸಿ ಒಂದು ವರ್ಷವಾದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಕೂಡಲೇ ಸಂತ್ರಸ್ತರ ಎಲ್ಲಾ ಜಮೀನುಗಳ ಜಂಟಿ ಸರ್ವೇ ನಡೆಸಿ ಹಕ್ಕುಪತ್ರ ಕೊಡಲು ಕ್ರಮ ಕೈಕೊಳ್ಳಬೇಕು. ಸಂತ್ರಸ್ತರಿಗೆ ಬಿಡುಗಡೆಯಾದ ಮತ್ತು ಅನುಭವದಲ್ಲಿರುವ ಜಮೀನುಗಳನ್ನು ಅರಣ್ಯ ಇಲಾಖೆ, ಕಂದಾಯ ಇಲಾಖೆಗೆ ವರ್ಗಾಯಿಸಬೇಕು.
2. ಶರಾವತಿ ಸಂತ್ರಸ್ತರ ಮಾದರಿಯಲ್ಲಿ ಗಾಜನೂರಿನ ತುಂಗಾ ಅಣೆಕಟ್ಟು, ಭದ್ರಾ ಆಣೆಕಟ್ಟು, ಅಂಬ್ಲಿಗೊಳ ಆಣೆಕಟ್ಟು, ಚಕ್ರಾ, ವರಾಹಿ, ಸಾವೆಹಲ್ಲು ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸಬೇಕು.
3. ಸಾಗರ, ಹೊಸನಗರ ತಾಲೂಕಿನಲ್ಲಿ ಕೆಪಿಸಿ ವಿದ್ಯುತ್ ಯೋಜನೆಗಾಗಿ ಸ್ವಾಧೀನ ಮಾಡಿಕೊಂಡು 65 ವರ್ಷವಾದರೂ ಬಳಸಿಕೊಳ್ಳದೇ ಇರುವ ಭೂಮಿಯನ್ನು ಕರ್ನಾಟಕ ಭೂಸ್ವಾಧೀನ ಕಾಯ್ದೆಯಂತೆ ಮುಳುಗಡೆ ಸಂತ್ರಸ್ಥರಿಗೆ, ಭೂರಹಿತ ಸಾಗುವಳಿದಾರರಿಗೆ ಮಂಜೂರು ಮಾಡಬೇಕು.
4. 2006-2008ರಲ್ಲಿ ಜಾರಿಗೆ ಬಂದ ಅರಣ್ಯ ಹಕ್ಕುಕಾಯ್ದೆಯನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡಲಾಗಿದೆ. ಕರ್ನಾಟಕದಲ್ಲಿ ಮಾತ್ರ ಜಾರಿ ಬಂದಿಲ್ಲ. ಸುಪ್ರೀಂಕೋರ್ಟ್ ಅರಣ್ಯ ಭೂಮಿ ಸಾಗುವಳಿದಾರರಿಗೆ ನೈಸರ್ಗಿಕ ನ್ಯಾಯ ಕೊಡಿ ಎಂದು ಆದೇಶಿಸಿ 5 ವರ್ಷವಾದರೂ ಆದೇಶವನು, ಸರ್ಕಾರ ಪಾಲಿಸಿಲ್ಲ. ವಿಚಾರಣೆ ನಡೆಸದೇ ರಾಜ್ಯದಲ್ಲಿ ರೈತರ 3 ಲಕ ಅರ್ಜಿ ವಜಾ ಮಾಡಲಾಗಿದೆ. ಕರ್ನಾಟಕ ವಿಧಾನಸಭೆ 75 ವರ್ಷದ ಅನುಭವದ ದಾಖಲೆ ಕೇಳುವ ಬದಲು 25 ವರ್ಷದ ಅನುಭವ ದಾಖಲೆ ಸಾಕೆನ್ನುವ ತಿದ್ದುಪಡಿಯನ್ನು ಕಾಯ್ದೆಗೆ ತರಬೇಕೆಂದು ಸರ್ವಾನುಮತದ ನಿರ್ಣಯ ಮಾಡಿದೆ. ಕೇಂದ್ರದ ಕಾಯ್ದೆ ಬಗ್ಗೆ ರಾಜ್ಯದ ಎಂಪಿಗಳು ಕಣ್ಣೆತ್ತಿ ನೋಡಿಲ್ಲ. ಅರಣ್ಯ ಹಕ್ಕು ಕಾಯ್ದೆ ಪಗತಿ ಪರಿಶೀಲನೆಯನ್ನು ಒಮ್ಮೆಯೂ ನಡೆಸಿಲ್ಲ. ರಾಜ್ಯ ಸರ್ಕಾರ ಜಿಲ್ಲಾ ಅರಣ್ಯ ಹಕ್ಕು ಸಮಿತಿಯಲ್ಲಿ 4 ಜನ ಜಿಲ್ಲಾ ಎಂದು ಕಾನೂನಿನಲ್ಲಿದೆ. ಆದ್ದರಿಂದ ಅರ್ಜಿ ಪರಿಶೀಲನೆಗೆ 1 ವರ್ಷ ಅವಕಾಶ ಕೊಡಬೇಕು ಎಂದು ಸುಪ್ರೀಂಕೋರ್ಟ್’ಗೆ ಪಂಚಾಯ್ತಿ ಸದಸ್ಯರು ಇರಬೇಕು. ಉಪವಿಭಾಗ ಸಮಿತಿಯಲ್ಲಿ 4 ಜನ ತಾಲೂಕು ಪಂಚಾಯ್ತಿ ಸದಸ್ಯರು ಇರಬೇಕು ಅರ್ಜಿ ಸಲ್ಲಿಸಿದೆ. ಇನ್ನೊಂದು ಕಡೆ 3 ಲಕ್ಷ ಅರ್ಜಿಯನ್ನು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ವಜಾ ಮಾಡಿದೆ.
5. ಸುಪ್ರೀಂಕೋರ್ಟ್ ಆದೇಶ ಎಂದು ಡೀಮ್ಸ್ ಫಾರೆಸ್ಟ್ (ಪರಿಭಾವಿತ ಅರಣ್ಯ) ಎಂದು ಸೊಪ್ಪಿನಬೆಟ್ಟ, ಕಾನು, ಕಾಡಿ ಎಂದು ಸುಪ್ರೀಂಕೋರ್ಟ್ ಅದೇಶ ಮಾಡಿದೆ. ಅರಣ್ಯ ಸ್ವರೂಪ ಇಲ್ಲದಿರುವ ಗ್ರಾಮ, ಊರುಗಳಿರುವ ಹಕ್ಕುಪತ್ರ ಪಡೆದಿರುವ, ಬಗಹುಕುಂ ಸಾಗುವಳಿ ಮಾಡಿಕೊಂಡಿರುವ ಪ್ರದೇಶಗಳ ವಸ್ತುಸ್ಥಿತಿ ವರದಿ ಮಾಡಿ ಆ ಪದೇಶಗಳನ್ನು ಪ್ರದೇಶವನ್ನಾಗಿ 2014 ರಂದು ಸರ್ಕಾರ ಘೋಷಿಸಿದೆ. ಈಗ ಮತ್ತೊಮೆ ಈ ಜಮೀನುಗಳ ವಸುಸ್ಥಿತಿ ಮಾಹಿತಿ ಕೊಡಿ ಡೀಮ್ಸ್ ಫಾರೆಸ್ಟ್’ನಿಂದ ಕೈಬಿಡಲು ಅವಕಾಶವಿದೆ. ವಸ್ತುನಿಷ್ಟವಾಗಿ ಸ್ಥಳ ತನಿಖೆ ಮಾಡಿ ಗ್ರಾಮಸ್ಥರ ಸಮ್ಮುಖದಲ್ಲಿ ವರದಿ ಕೊಡಬೇಕು.
6. 27-04-1970ರ ಹಿಂದೆ ಅರಣ್ಯ, ಭೂಮಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಜಮೀನು ಮಂಜೂರು ಮಾಡಲು 1996ರಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ 43.000 ಎಕರೆ ಭೂಮಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ-ರಾಜ್ಯ ಸರ್ಕಾರಗಳ ಹಲವಾರು ಆದೇಶಗಳು ಬಂದು 30 ವರ್ಷಗಳಾದರೂ ರೈತರಿಗೆ ಹಕ್ಕುಪತ್ರ ಕೊಟ್ಟಿಲ್ಲ. ಕೂಡಲೇ ಹಕ್ಕುಪತ್ರ ಕೊಡಬೇಕು.
7. ಕರೂರು, ಭಾರಂಗಿ ಹೋಬಳಿ ಮತ್ತು ಆವಿನಹಳ್ಳಿ ಹೋಬಳಿಯ ಕೆಲವು ಭಾಗಗಳನ್ನು ಶರಾವತಿ ಅಭಯಾರಣ್ಯ ಎಂದು ನಿಯಮಬಾಹಿರವಾಗಿ, ಗ್ರಾಮಪಂಚಾಯಿ ಮತ್ತು ಆ ಭಾಗದ ಜನರ ಅಭಿಪ್ರಾಯ ಪಡೆಯದೇ ಕೇಂದ್ರದ ವನ್ಯಜೀವಿ ಇಲಾಖೆ ಘೋಷಿಸಿತ್ತು. ಕೇಂದ್ರ ಸರ್ಕಾರದ ಅಕೌಂಟೆಂಟ್ ಜನರಲ್ ನಿಯಮಬಾಹಿರವಾಗಿ ಅಭಯಾರಣ್ಯ ಘೋಷಿಸಿರುವುದರಿಂದ ಯಾವುದೇ ಹಣಕಾಸು ಮಂಜೂರು ಮಾಡಲಾಗುವುದಿಲ್ಲ ಎಂದು ಘೋಷಿಸಿತ್ತು. ಈಗಲೂ ಸಿಂಗಳೀಕ ಅಭಯಾರಣ್ಯ ಎಂದು ನಿಯಮಬಾಹಿರವಾಗಿ ಘೋಷಿಸಲಾಗಿದೆ. ಈ ವ್ಯಾಪ್ತಿಯ ಪ್ರದೇಶದಲ್ಲಿ ಹಕ್ಕುಪತ್ರ ಪಡೆದವರಿಗೆ ಕಂದಾಯ ಇಲಾಖೆ ಇವರ ಜನವಸತಿಗೆ ತೊಂದರೆ ಕೊಡಲಾಗುತ್ತಿದೆ. ಬಿಳಿಗಾರು, ಕಾನೂರು, ಯಡುಮನೆ ಇತರಕಡೆ ವನ್ಯಜೀವಿವಲಯದ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ.
8. ಅರಣ್ಯ ವ್ಯವಸ್ಥಾಪನಾ ಸಮಿತಿ 30-40 ವರ್ಷಗಳ ಹಿಂದೆ ರಚನೆಯಾದರೂ ಈಗ ವ್ಯವಸ್ಥಾಪನಾ ಅಧಿಕಾರಿ ನೇಮಕ ಆಗಿ ರೈತರು ಹಕ್ಕುಪತ್ರ ಪಡೆದ ಜಮೀನು, ಮನೆಗಳನ್ನು ಅರಣ್ಯ ಎಂದು ಘೋಷಿಸಲು ಆರಂಭಿಸಿದೆ. ಯಾವುದೇ ಕಾರಣಕ್ಕೆ ಮಂಜೂರಾದ ಜಮೀನು, ನಿಯಮಾನುಸಾರವಾಗಿ ಅರ್ಜಿ ಸಲ್ಲಿಸಿದ ಬರ್ಗ ಹುಕುಂ ಸಾಗುವಳಿ ಮಾಡುತ್ತಿದ್ದವರಿಗೆ ಮತ್ತು ಮನೆಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಆದೇಶ ಮಾಡಬೇಕು.
ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಮಲೆನಾಡಿನ ರೈತರಿಗೆ ಕೊಟ್ಟ ಮಾತಿನಂತೆ, ರೈತರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು, ರೈತರ ಪ್ರತಿನಿಧಿಗಳ ಸಭೆ ಕರೆದು ಮೇಲ್ಕಂಡ ಬೇಡಿಕೆಗಳು ಮತ್ತು ಇತರ ಬೇಡಿಕೆಗಳನ್ನು ತಕ್ಷಣ ಈಡೇರಿಸಲು ಸರ್ಕಾರಿ ಅದೇಶ ಹೊರಡಿಸಬೇಕು.
(ವರದಿ: ಮಧುರಾಮ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















