ಮೀರತ್: ಇಲ್ಲಿರುವ ಮದರಾಸದಲ್ಲಿ ಕಲಿಯುತ್ತಿದ್ದ ನಾಲ್ವರು ಮುಸ್ಲಿಂ ಹೆಣ್ಣು ಮಕ್ಕಳನ್ನು ಅವರ ಪೋಷಕರು ಮನೆಗೆ ವಾಪಾಸ್ ಕರೆದುಕೊಂಡು ಬಂದಿದ್ದು ಮಾತ್ರವಲ್ಲ, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಮುಂದೆ ಓದಿ…
ಮೀರತ್ನಲ್ಲಿರುವ ಮದರಸಾದಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿರುವ ಕಿರುಕುಳದ ಬಗ್ಗೆ ರಾಷ್ಟ್ರೀಯ ಮಾದ್ಯಮವೊಂದು ವರದಿ ಮಾಡಿದೆ.
ಉತ್ತರ ಪ್ರದೇಶದ ಮೀರತ್ನಲ್ಲಿರುವ ಮದರಾಸಾದಲ್ಲಿ ಕಲಿಯುತ್ತಿದ್ದ ನಾಲ್ವರು ಮುಸ್ಲಿಂ ಹೆಣ್ಣು ಮಕ್ಕಳು ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ, ಅವರ ಪೋಷಕರು ಶಿಕ್ಷಣ ಬಿಡಿಸಿ, ಮನೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ನಾಲ್ವರು ಹೆಣ್ಣು ಮಕ್ಕಳು ತಮ್ಮ ನೆರೆ ಹೊರೆಯ ನಾಲ್ವರು ಹುಡುಗರಿಂದ ಕಿರುಕುಳ ಅನುಭವಿಸುತ್ತಿದ್ದೇವೆ ಎಂದು ಗೋಳು ತೋಡಿಕೊಂಡಿದ್ದರು. ಕಿರುಕುಳ ಮಾತ್ರವಲ್ಲದೇ, ಕೋಣೆಗಳಿಗೆ ನುಗ್ಗಿ ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ನಮಗೆ ಇಲ್ಲಿರಲು ಕಷ್ಟವಾಗುತ್ತಿದೆ. ಅಲ್ಲದೇ, ನಮಗೆ ಮನೆಯಲ್ಲೂ ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ನಮ್ಮ ಕೋಣೆಯ ಬಳಿ ಬಂದು ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಇದರಿಂದ ನಮಗೆ ತೀವ್ರ ಮಾನಸಿಕ ಕಿರಿಕುಳವಾಗುತ್ತಿದೆ. ಈ ಕುರಿತಂತೆ ದೂರು ನೀಡಿದರೂ ಪೊಲೀಸರು ಮಾತ್ರ ಕಡೆಗಣಿಸುತ್ತಿದ್ದಾರೆ ಎಂದು ಯುವತಿಯರು ಆರೋಪಿಸಿರುವುದಾಗಿ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ, ಶಿಕ್ಷಣ ತ್ಯಜಿಸಿದ ಹೆಣ್ಣು ಮಕ್ಕಳು ಮನೆಗೆ ಹಿಂತಿರುಗಿದ್ದಾರೆ. ಆದರೆ, ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ವಿವರಿಸಲು ನಿರ್ಧರಿಸಿ, ದೂರನ್ನು ರವಾನಿಸಿದ್ದಾರೆ.
ಇದರಿಂದ ಎಚ್ಚೆತ್ತಿರುವ ಪೊಲೀಸರು ಈಗ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
















